ನವದೆಹಲಿ: ಭೂಗತ ದೊರೆ ದಾವೂದ್ ಇಬ್ರಾಹಿಂ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆ ಮತ್ತು ಭೂಹಗರಣದ ಆರೋಪ ಕೇಳಿಬಂದಿದ್ದರಿಂದ ಶನಿವಾರ ರಾಜೀನಾಮೆ ನೀಡಿದ ಮಹಾರಾಷ್ಟ್ರದ ಮಾಜಿ ಕಂದಾಯ ಸಚಿವ ಏಕನಾಥ್ ಖಾಡ್ಸೆ ಮೇಲೆ ದೇಶದ್ರೋಹದ ಆರೋಪ ಹೊರಿಸಿ ಎಂದು ಭಾನುವಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಗ್ರಹಿಸಿದ್ದಾರೆ.
ಇದೇ ಸಮಯದಲ್ಲಿ ಜೈಲಿನಲ್ಲಿರುವ ಗುಜರಾತಿನ ಪಾಟಿದಾರ್ ಸಮುದಾಯದ ಮುಖಂಡ ಹಾರ್ದಿಕ್ ಪಟೇಲ್ ವಿರುದ್ಧದ ದೇಶದ್ರೋಹದ ಆರೋಪವನ್ನು ಕೈಬಿಡುವಂತೆ ಕೂಡ ಆಗ್ರಹಿಸಿದ್ದಾರೆ.
"ಹಾರ್ದಿಕ್ ಪಟೇಲ್ ವಿರುದ್ಧ ಹಾಕಿರುವ ದೇಶದ್ರೋಹ ಆರೋಪಗಳನ್ನು ಗುಜರಾತ್ ಸರ್ಕಾರ ಕೈಬಿಡಬೇಕು. ಅವರ ಮೇಲೆ ಹೊರಿಸಿರುವ ದೇಶದ್ರೋಹದ ಆರೋಪ ಸರಿಯಲ್ಲ. ಆದರೆ ಖಾಡ್ಸೆ ಅವರ ಮೇಲೆ ದೇಶದ್ರೋಹ ಆರೋಪ ಹೊರಿಸಿ ವಿಚಾರಣೆ ಮಾಡಿ" ಎಂದು ಭಾನುವಾರ ಬೆಳಗ್ಗೆ ಟ್ವೀಟ್ ಮಾಡಿದ್ದಾರೆ.
ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿದ್ದಾನೆ ಎನ್ನಲಾಗುವ ಭೂಗತ ದೊರೆ ದಾವೂದ್ ಇಬ್ರಾಹಿಂ ಜೊತೆಗೆ ಸಂಪರ್ಕ ಹೊಂದಿರುವುದಕ್ಕೆ ಖಾಡ್ಸೆ ಅವರನ್ನು ದೇಶದ್ರೋಹಿ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ದಾವೂದ್ ಇಬ್ರಾಹಿಂ ಜೊತೆಗೆ ಮೊಬೈಲ್ ಫೋನಿನಲ್ಲಿ ಮಾತಾಡಿದ್ದಾರೆ ಮತ್ತು ಅವಳಿ ಭೂಹಗರಣಗಳ ಆರೋಪದ ಮೇರೆಗೆ ವಿವಿಧ ಕೋನಗಳಿಂದ ಹೆಚ್ಚಿದ ಒತ್ತಡಕ್ಕೆ ಮಣಿದು ಮಹಾರಾಷ್ಟ್ರ ಸರ್ಕಾರದ ಹಿರಿಯ ಸಚಿವ ಏಕನಾಥ್ ಖಾಡ್ಸೆ ಶನಿವಾರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ರಾಜೀನಾಮೆ ನೀಡಿದ್ದರು.
Advertisement