ಶ್ರೀನಗರ: ೧೨೦೦೦ ಕ್ಕೂ ಹೆಚ್ಚು ಹಿಂದೂಗಳು ಅವರಲ್ಲಿ ಬಹುತೇಕ ವಲಸೆ ಹೋಗಿದ್ದ ಕಾಶ್ಮೀರಿ ಪಂಡಿತರು ಮಂಗಳವಾರ ಜಮ್ಮು ಕಾಶ್ಮೀರದ ಗಂದೇರ್ಬಾಲ್ ಜಿಲ್ಲೆಯ ಜೇಲಮ್ ಮತ್ತು ಸಿಂಧ್ ನದಿ ಸಂಗಮದಲ್ಲಿ ಮಹಾ ಕುಂಭದ ಸಂಭ್ರಮಕ್ಕೆ ನೆರೆದಿದ್ದಾರೆ.
"ಇದಕ್ಕೂ ಮೊದಲು ಆಕಾಶ ಕಾಯಗಳು ಹೀಗೆ ಜೋಡಿಸಿಕೊಂಡಿದ್ದು ೧೯೪೧ರಲ್ಲಿ. ಈಗ ೭೫ ವರ್ಷ ಮತ್ತು ೧೦ ದಿನಗಳ ನಂತರ ಈ ಜೋಡಣೆಯಾಗಿದೆ" ಎಂದು ಮಹಾ ಕುಂಭಕ್ಕೆ ದೆಹಲಿಯಿಂದ ಬಂದಿರುವ ೪೪ ವರ್ಷದ ಅಶುತೋಶ್ ಭಟ್ನಾಗರ್ ಹೇಳಿದ್ದಾರೆ.
ಮೃತಗೊಂಡವರ ಅಸ್ತಿಯನ್ನು ಬಿಡಲು ಪ್ರಾದೇಶಿಕ ಪಂಡಿತ್ ಸಮುದಾಯಕ್ಕೆ ಗಂದೇರ್ಬಾಲ್ ನ ಸೈದಿಪೋರಾ ಗ್ರಾಮದ ಸಂಗಮ ಎಂದಿನಿಂದಲೂ ಪವಿತ್ರ ಸ್ಥಳವಾಗಿದೆ.
"ಭಕ್ತಾದಿಗಳು ತಪ್ಪಿಸಿಕೊಳ್ಳಲು ಸಾಧ್ಯವಾಗದ ಕಾರ್ಯಕ್ರಮ ಮಹಾ ಕುಂಭ. ಆದುದರಿಂದ ಈ ಪುಣ್ಯ ಕಾರ್ಯಕ್ಕೆ ದೂರದ ಊರುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದೇವೆ" ಎಂದು ಹೇಳುತ್ತಾರೆ ಭಟ್ನಾಗರ್.
೧೯೯೦ರಲ್ಲಿ ಪಂಡಿತ್ ಸಮುದಾಯ ಕಾಶ್ಮೀರದಿಂದ ವಲಸೆ ಹೋಗುವುದಕ್ಕೂ ಮುಂಚಿತವಾಗಿ ಕಾಶ್ಮಿರದವರಿಗಾಗಿ ಪಂಚಾಗ ಪ್ರಕಟಿಸುತ್ತಿದ್ದ ಕುಟುಂಬದ ಜ್ಯೋತಿಷಿ ಒಂಕಾರನಾಥ್ ಶಾಸ್ತ್ರಿ ಈ ವರ್ಷದ ಮಹಾ ಕುಂಭವನ್ನು ಘೋಷಿಸಿದ್ದಾರೆ.
"ಜೇಲಮ್ ಮತ್ತು ಸಿಂದ್ ನದಿಗಳ ಈ ಸಂಗಮದಲ್ಲಿ ಪ್ರತಿ ೧೨ ವರ್ಷಗಳಿಗೊಮ್ಮೆ ಕುಂಭ ಮತ್ತು ಆರು ವರ್ಷಗಳಿಗೊಮ್ಮೆ ಅರ್ಧ ಕುಂಭ ಆಚರಿಸಲಾಗುತ್ತದೆ" ಎಂದು ಸಂಗಮದಲ್ಲಿ ಈ ಕಾರ್ಯಕ್ರಮದ ಆಯೋಜಕರಾದ ಭರತ್ ರೈನಾ ಹೇಳಿದ್ದಾರೆ.
೧೨ ಘಂಟೆಗಳ ಹೋಮ-ಹವನ ಕಾರ್ಯಗಳು ಸೋಮವಾರ ಪ್ರಾಂಭವಾಗಿದ್ದು ಮಂಗಳವಾರ ಅಂತ್ಯಗೊಳ್ಳಲಿವೆ. ಈ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ.
Advertisement