ನವದೆಹಲಿ: ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಆರ್ಟ್ ಆಫ್ ಲಿವಿಂಗ್ ಫೌಂಡೇಷನ್ ದೆಹಲಿಯ ಯಮುನಾ ನದಿ ತಟದಲ್ಲಿ ಆಯೋಜಿಸುತ್ತಿರುವ ವಿಶ್ವ ಸಂಸ್ಕೃತಿ ಉತ್ಸವಕ್ಕೆ ಆಗಮಿಸಲಿದ್ದ ನಾಲ್ಕು ವಿದೇಶೀ ಪ್ರತಿನಿಧಿಗಳು ಈಗ ಪ್ರಸ್ತುತ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದಾರೆ.
ನೇಪಾಳ, ಶ್ರೀಲಂಕಾ ಮತ್ತು ಜಿಂಬಾಬ್ವೆಯ ಅಧ್ಯಕ್ಷರು ಮತ್ತು ಅಫ್ಘಾನಿಸ್ತಾನದ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಈ ಕಾರ್ಯಕ್ರಮದಿಂದ ಹಿಂದೆ ಸರಿದಿದ್ದಾರೆ ಎಂದು ದ ಟೆಲಿಗ್ರಾಫ್ ಪತ್ರಿಕೆ ವರದಿ ಮಾಡಿದೆ.
ಪ್ರಸ್ತುತ ಕಾರ್ಯಕ್ರಮದಿಂದ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಿಂದೆ ಸರಿದಿರುವ ಬೆನ್ನಲ್ಲೇ ಈ ನಾಲ್ವರು ವಿದೇಶಿ ಪ್ರತಿನಿಧಿಗಳು ತಮ್ಮ ಭೇಟಿಯನ್ನು ರದ್ದು ಗೊಳಿಸಿದ್ದಾರೆ.
ನೇಪಾಳದ ಅಧ್ಯಕ್ಷೆ ಬಿದ್ಯಾ ದೇವಿ ಭಂಡಾರಿ, ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲಾ ಸಿರಿಸೇನಾ ಮತ್ತು ಜಿಂಬಾಬ್ವೆ ಅಧ್ಯಕ್ಷ ರಾಬರ್ಟ್ ಮುಗಾಬೆ, ಅಫ್ಘಾನಿಸ್ತಾನದ ಚೀಫ್ ಎಕ್ಸಿಕ್ಯೂಟಿವ್ ಆಫೀಸರ್ ಅಬ್ದುಲ್ಲ ಅಬ್ದುಲ್ಲ ಎಂಬವರು ಕಾರ್ಯಕ್ರಮದಿಂದ ಹಿಂದೆ ಸರಿದಿದ್ದಾರೆ ಎಂದು ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.
ಇದೀಗ ನೇಪಾಳ ಈ ಕಾರ್ಯಕ್ರಮಕ್ಕೆ ಉಪ ಪ್ರಧಾನಿ ಕಮಲ್ ಥಾಪಾ ಅವರನ್ನು ಕಳುಹಿಸಲು ತೀರ್ಮಾನಿಸಿದೆ. ಇತ್ತ ಮುಗಾಬೆ ಅವರು ಮಂಗಳವಾರ ಭಾರತಕ್ಕೆ ಬಂದಿದ್ದರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಿ ಹರಾರೆಗೆ ವಾಪಸ್ ಆಗಿದ್ದಾರೆ. ರಾಷ್ಟ್ರಪತಿ ಮುಖರ್ಜಿಯವರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ ಎಂಬುದು ಒಂದು ಕಾರಣವಾದರೆ ರಾಜತಾಂತ್ರಿಕ ಮರ್ಯಾದೆಯಲ್ಲಿ ಚ್ಯುತಿ ಮತ್ತು ಭದ್ರತೆಯ ದೃಷ್ಟಿಯನ್ನು ಪರಿಗಣಿಸಿ ಈ ಪ್ರತಿನಿಧಿಗಳು ಕಾರ್ಯಕ್ರಮದಿಂದ ಹಿಂದೆ ಸರಿದಿದ್ದಾರೆ ಎಂದು ಹೇಳಲಾಗುತ್ತಿದೆ.