ಸಾವರ್ಕರ್ ಗೆ ಭಾರತರತ್ನ ನೀಡುವಂತೆ ಆಗ್ರಹಿಸಿದ ಉದ್ಧವ್ ಠಾಕ್ರೆ

ಹಿಂದುತ್ವದ ನಾಯಕ ವಿವಂಗತ ವೀರ್ ಸಾವರ್ಕರ್ ಅವರಿಗೆ ದೇಶದ ಅತ್ಯುನ್ನತ ಗೌರವ ಭಾರತ ರತ್ನ ನೀಡಿ ಗೌರವಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಸೋಮವಾರ
ಹಿಂದುತ್ವ ರಾಷ್ಟ್ರೀಯವಾದಿ ವಿವಂಗತ ವೀರ್ ಸಾವರ್ಕರ್
ಹಿಂದುತ್ವ ರಾಷ್ಟ್ರೀಯವಾದಿ ವಿವಂಗತ ವೀರ್ ಸಾವರ್ಕರ್

ಮುಂಬೈ: ಹಿಂದುತ್ವ ರಾಷ್ಟ್ರೀಯವಾದಿ ವಿವಂಗತ ವೀರ್ ಸಾವರ್ಕರ್ ಅವರಿಗೆ ದೇಶದ ಅತ್ಯುನ್ನತ ಗೌರವ ಭಾರತ ರತ್ನ ನೀಡಿ ಗೌರವಿಸುವಂತೆ ಕೇಂದ್ರ ಸರ್ಕಾರಕ್ಕೆ ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಸೋಮವಾರ ಆಗ್ರಹಿಸಿದ್ದಾರೆ. ಇದರಿಂದ ಈ ಕ್ರಾಂತಿಕಾರಿ ನಾಯಕನ ಬಗ್ಗೆ ಕಾಂಗ್ರೆಸ್ ಎಬ್ಬಿಸಿರುವ ವಿವಾದಕ್ಕೆ ಶಾಶ್ವತ ತೆರೆ ಎಳೆಯಿರಿ ಎಂದಿದ್ದಾರೆ.

"ಕಾಂಗ್ರೆಸ್ ಪಕ್ಷ ವೀರ್ ಸಾವರ್ಕರ್ ಗಷ್ಟೇ ಅವಮಾನಿಸಿಲ್ಲ ಬದಲಾಗಿ ಎಲ್ಲ ಕ್ರಾಂತಿಕಾರಿಗಳನ್ನು. ಈಗ ಸರ್ಕಾರ ಸಾವರ್ಕರ್ ಅವರಿಗೆ ಭಾರತರತ್ನ ಘೋಷಿಸಿ ಶಾಶ್ವತವಾಗಿ ಕಾಂಗ್ರೆಸ್ ಬಾಯಿ ಮುಚ್ಚಿಸಬೇಕು" ಎಂದು ಠಾಕ್ರೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವೀರ್ ಸಾವರ್ಕರ್ ಬಗ್ಗೆ ನೀಡಿರುವ ಹೇಳಿಕೆಗೆ ಕಾಂಗ್ರೆಸ್ ಕ್ಷಮೆ ಕೋರದಿದ್ದರೆ, ಎಲ್ಲ ಕಾಂಗ್ರೆಸ್ ಶಾಸಕರ ಮನೆಯ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಬಿಜೆಪಿ ಪಕ್ಷ ಆಗ್ರಹಿಸಿರುವ ಹಿನ್ನಲೆಯಲ್ಲಿ ಪ್ರತಿಕ್ರಿಯಿಸಿರುವ ಠಾಕ್ರೆ ಸಾವರ್ಕರ್ ಗೆ ಭಾರತರತ್ನ ನೀಡುವ ಮೂಲಕ ಈ ನಾಟಕಕ್ಕೆ ಶಾಶ್ವತವಾಗಿ ತೆರೆ ಎಳೆಯಬೇಕು ಎಂದಿದ್ದಾರೆ.

"ಇದರ ನಂತರ ಯಾವುದೇ ಪ್ರತಿಭಟನೆಗಳ ಅಗತ್ಯ ಇರುವುದಿಲ್ಲ" ಎಂದು ಅವರು ಹೇಳಿದ್ದಾರೆ.

"ವೀರ್ ಸಾವರ್ಕರ್ ಅವರಿಗೆ ಭಾರತ ರತ್ನ ನಿಡುವ ಮೂಲಕ ಮೋದಿ ಸರ್ಕಾರ ತಾಕತ್ತು ಪ್ರದರ್ಶಿಸಬೇಕು. ಈ ಹಿಂದೆ ವೀರ್ ಸಾವರ್ಕರ್ ಅವರಿಗೆ ಅವಮಾನ ಮಾಡಿದ್ದಕ್ಕೆ ಶಿವಸೇನೆ ಪ್ರತಿಭಟಿಸಿದೆ, ಮಣಿಶಂಕರ್ ಅಯ್ಯರ್ ಅವರನ್ನು ಸಂಸತ್ತಿನಲ್ಲಿ ನಿಲ್ಲಿಸಿ ಚಪ್ಪಲಿ ಎಸೆದಿದೆ. ಈ ಹಿಂದೆ ನಮ್ಮ ಪ್ರತಿಭಟನೆಗೆ ಆಸರೆಯಾಗದವರು, ಈಗ ಪ್ರತಿಭಟನೆಯ ಮಾತನಾಡುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆ, ಆದರೆ ಈಗಲಾದರೂ ಸ್ವಲ್ಪ ಧೈರ್ಯ ತೋರಿಸಿ" ಎಂದಿದ್ದಾರೆ ಉದ್ಧವ್.

ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಅವರನ್ನು ಬ್ರಿಟಿಶ್ ಸರ್ಕಾರ ಗಲ್ಲಿಗೇರಿಸಿದ ದಿನವಾದ ಹುತಾತ್ಮ ದಿನಾಚರಣೆಯಂದು ಕಾಂಗ್ರೆಸ್, ವೀರ್ ಸಾವರ್ಕರ್ ಅವರನ್ನು ದೇಶದ್ರೋಹಿ ಎಂದು ಕರೆದು ಟ್ವೀಟ್ ಮಾಡಿತ್ತು. ಅಲ್ಲದೆ ಇತ್ತೀಚೆಗಷ್ಟೇ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸಂಸತ್ತಿನಲ್ಲಿ "ಮಹಾತ್ಮ ಗಾಂಧಿ ನಮ್ಮವರು, ಸಾವರ್ಕರ್ ನಿಮ್ಮವರು" ಎಂದಿದ್ದರು.

ಮಹಾರಾಷ್ಟ್ರದ ನಾಸಿಕ್ ನಲ್ಲಿ ಜನಿಸಿದ್ದ ವಿನಾಯಕ ದಾಮೋದರ್ ಸಾವರ್ಕರ್ ನಂತರ ಸ್ವಾತಂತ್ರ್ಯ ವೀರ ಸಾವರ್ಕರ್ ಎಂದು ಹೆಸರಾದವರು. ಇವರನ್ನು ಹಿಂದೂ ರಾಷ್ಟ್ರೀಯವಾದಿ ಮತ್ತು ಕ್ರಾಂತಿಕಾರ ಎಂದು ಗುರುತಿಸಲಾಗುತ್ತದೆ. ಬ್ರಿಟಿಶ್ ಸರ್ಕಾರ ಇವರನ್ನು ಅಂಡಮಾನ್ ನಿಕೋಬಾರ್ ದ್ವೀಪದ ಸೆಲ್ಯುಲಾರ್ ಜೈಲಿನಲ್ಲಿ ಬಂಧಿಸಿಟ್ಟಿತ್ತು. ಆಗ ತಮ್ಮ ಬಿಡುಗಡೆಗೆ ಸಹಕರಿಸಿದರೆ, ಬ್ರಿಟಿಶ್ ಸರ್ಕಾರವನ್ನು ವಿರೋಧಿಸುವುದಿಲ್ಲ ಎಂದು ಸಾವರ್ಕರ್ ಪತ್ರ ಬರೆದಿದ್ದರು ಎಂಬುದರ ಆಧಾರದ ಮೇಲೆ ಕಾಂಗ್ರೆಸ್ ಸಾವರ್ಕರ್ ಅವರನ್ನು ದೇಶದ್ರೋಹಿ ಎಂದಿತ್ತು.

ಪುಣೆ ಮತ್ತು ಲಂಡನ್ ನಲ್ಲಿ ವಿದ್ಯಾಭ್ಯಾಸ ಮಾಡಿದ್ದ ಸಾವರ್ಕರ್ ತಮ್ಮ ೮೨ ನೆ ವಯಸ್ಸಿನಲ್ಲಿ ಫೆಬ್ರವರಿ ೨೬ ೧೯೬೬ರಲ್ಲಿ ನಿಧನರಾಗಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com