ನವದೆಹಲಿ: ಮಹಾರಾಷ್ಟ್ರ ರಾಜ್ಯದಲ್ಲಿ ನೀರಿನ ತೊಂದರೆ ಉಲ್ಬಣವಾಗುತ್ತಿರುವ ಸಂದರ್ಭದಲ್ಲಿ ಮದ್ಯ ಉತ್ಪಾದನಾ ಸಂಸ್ಥೆಗಳಿಗೆ ನೀರು ಸರಬರಾಜನ್ನು ನಿಲ್ಲಿಸುವಂತೆ ಕೋರಿರುವ ಅರ್ಜಿಯನ್ನು ಮುಂದಿನ ವಾರ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.
ಅರ್ಜಿದಾರ ಈ ವಿಷಯವನ್ನು ಕೋರ್ಟ್ ಗೆ ತಿಳಿಸಿ ಬೇಗನೆ ವಿಚಾರಣೆ ನಡೆಸುವಂತೆ ಕೋರಿದ್ದಕ್ಕೆ ನ್ಯಾಯಾಧೀಶ ಅಭಯ್ ಮನೋಹರ್ ಸಾಪ್ರೆ ಮುಂದಾಳತ್ವದ ಪೀಠ ಮುಂದಿನ ವಾರ ವಿಚಾರಣೆ ನಡೆಸಲು ಒಪ್ಪಿಕೊಂಡಿದೆ.
ಮೇ ೧೦ ರಿಂದ ಜುಲೈ ಅಂತ್ಯದವರೆಗೆ ಬರಪೀಡಿತ ಮಾರಾಠಾವಾಡಾ ಪ್ರದೇಶದಲ್ಲಿ ಮದ್ಯ ಉದ್ದಿಮೆಗೆ ೬೦% ನೀರು ಕಡಿತಗೊಳಿಸುವಂತೆ ಮತ್ತು ಇತರ ಉದ್ದಿಮೆಗಳಿಗೆ ೨೫% ನೀರು ಕಡಿತಗೊಳಿಸುವಂತೆ ಬಾಂಬೆ ಹೈಕೋರ್ಟ್ ನ ಔರಂಗಾಬಾದ್ ಪೀಠ ಆದೇಶ ನೀಡಿತ್ತು ಎನ್ನುವುದನ್ನು ಸುಪ್ರೀಮ್ ಕೋರ್ಟ್ ಗೆ ಅರ್ಜಿದಾರ ತಿಳಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತರಾಗಿರುವ ಅರ್ಜಿದಾರರು ಈ ೪೦% ನೀರು ಸರಬರಾಜನ್ನು ಕೂಡ ನಿಲ್ಲಿಸುವಂತೆ ಮನವಿ ಮಾಡಿದ್ದಾರೆ.
ಈ ಹಿಂದೆ ನೀರು ಪೋಲಾಗುವುದೆಂದು ಐಪಿಎಲ್ ಪಂದ್ಯಗಳನ್ನು ಮಹಾರಾಷ್ಟ್ರದಿಂದಾಚೆಗೆ ನಿಗದಿಪಡಿಸಲು ನೀಡಿದ್ದ ಬಾಂಬೆ ಹೈಕೋರ್ಟ್ ತೀರ್ಪನ್ನು ಸುಪ್ರೀಮ್ ಕೋರ್ಟ್ ಎತ್ತಿಹಿಡಿದಿದ್ದರಿಂದ ಈ ವಿಚಾರಣೆ ಮಹತ್ವ ಪಡೆದುಕೊಂಡಿದೆ.
Advertisement