ಪ್ರಧಾನ ಸುದ್ದಿ
ನೋಟು ನಿಷೇಧದಿಂದ ಆರ್ಥಿಕ ಡಿಜಿಟಲೀಕರಣ ವೇಗ ಪಡೆದುಕೊಳ್ಳಲಿದೆ: ನಂದನ್ ನಿಲೇಕಣಿ
ಕೇಂದ್ರ ಸರ್ಕಾರ 500 ಹಾಗೂ 1000 ನೋಟ್ ನೀಷೇಧಿಸಿರುವುದರಿಂದ ಆರ್ಥಿಕ ವಹಿವಾಟು ಮತ್ತು ಹಣಕಾಸು ಸೇವೆಗಳಲ್ಲಿನ ಡಿಜಿಟಲೀಕರಣ...
ನವದೆಹಲಿ: ಕೇಂದ್ರ ಸರ್ಕಾರ 500 ಹಾಗೂ 1000 ನೋಟ್ ನೀಷೇಧಿಸಿರುವುದರಿಂದ ಆರ್ಥಿಕ ವಹಿವಾಟು ಮತ್ತು ಹಣಕಾಸು ಸೇವೆಗಳಲ್ಲಿನ ಡಿಜಿಟಲೀಕರಣ ಪ್ರಕ್ರಿಯೆ ವೇಗ ಪಡೆದುಕೊಳ್ಳಲಿದೆ ಎಂದು ಭಾರತದ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ(ಯುಐಎಐ)ದ ಮಾಜಿ ಅಧ್ಯಕ್ಷ ನಂದನ್ ನಿಲೇಕಣಿ ಅವರು ಹೇಳಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ನಿಲೇಕಣಿ ಅವರು, ದೇಶದಲ್ಲಿ ನೋಟು ನಿಷೇಧದಿಂದ ಆಗಿರುವ ತೊಂದರೆ ಇನ್ನೂ ಕೆಲ ಕಾಲ ಮುಂದುವರಿಯಲಿದೆ. ಆದರೆ, ಮೂರು ವರ್ಷಗಳಲ್ಲಿ ಆಗಬಹುದಿದ್ದ ಡಿಜಟಲೀಕರಣ ಪ್ರಕ್ರಿಯೆಯು ಮುಂದಿನ 3 ತಿಂಗಳಲ್ಲಿ ನಡೆಯಲಿದೆ ಎಂದರು.
ಸ್ಮಾರ್ಟ್ಫೋನ್ ಹಾಗೂ ಇತರೆ ಮೊಬೈಲ್ ಪೋನ್ ಉಪಯೋಗಿಸುತ್ತಿರುವ ಲಕ್ಷಾಂತರ ಬಳಕೆದಾರರು ಏಕೀಕೃತ ಪಾವತಿ ಸಂಪರ್ಕ ವ್ಯವಸ್ಥೆ(ಯುಪಿಐ) ಮೂಲಕ ಆನ್ಲೈನ್ ಪಾವತಿ ಮಾಡಬಹುದು. ಮೊಬೈಲ್ ಬಳಕೆ ಮಾಡದವರು ಆಧಾರ್ ಕಾರ್ಡ್ ಬಳಸಿ ಮೈಕ್ರೋ ಎಟಿಎಂಗಳಲ್ಲಿ ಪಾವತಿ ಮಾಡಬಹುದು.
ಪ್ರಸ್ತುತ 1.3 ಲಕ್ಷ ಮೈಕ್ರೋ ಎಟಿಎಂಗಳು ಬಳಕೆಯಲ್ಲಿದ್ದು, ಸರ್ಕಾರ ಅವುಗಳ ಸಂಖ್ಯೆಯನ್ನು 10 ಲಕ್ಷದವರೆಗೂ ಹೆಚ್ಚಿಸಬಹುದಾಗಿದೆ ಎಂದು ಹೇಳಿದ್ದಾರೆ.