ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ಮಂಗಳವಾರ ಚಾಲನೆ ಸಿಕ್ಕಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಕರ ಲಗ್ನದಲ್ಲಿ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ ನಾಡಿನ ಜನತೆಗೆ ದಸರಾ ಹಬ್ಬದ ಶುಭಾಶಯ ಕೋರಿದರು.
ಜಂಬೂ ಸವಾರಿಗೆ ಮಳೆರಾಯ ಅಡ್ಡಿಪಡಿಸಿದರೂ ಅದನ್ನು ಲೆಕ್ಕಿಸದೇ ಲಕ್ಷಾಂತರ ಮಂದಿ ಜಂಬೂಸವಾರಿ ನೋಡಲಿಕ್ಕಾಗಿ ಕಾದು ನಿಂತಿದ್ದಾರೆ. ಅರಮನೆಯಲ್ಲಿ ಸಡಗರ ಮನೆ ಮಾಡಿದೆ. ನವ ವಧುವನಿಂತೆ ಸಿಂಗಾರಗೊಂಡಿರುವ ಸಾಂಸ್ಕೃತಿಕ ನಗರಿ ಮೈಸೂರು ಎಲ್ಲರ ಕಣ್ಮನ ಸೆಳೆಯುತ್ತಿದೆ.
ಕಳೆದ ನಾಲ್ಕು ವರ್ಷಗಳಿಂದ ಜಂಬೂ ಸವಾರಿ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಹೊತ್ತು ಯಶ್ವಸಿ ನಾಯಕನಾಗಿರುವ ಗಜಪಡೆ ಕ್ಯಾಪ್ಟನ್ ಅರ್ಜುನ ಇಂದು 5 ನೇ ಬಾರಿಗೆ ಅಂಬಾರಿ ಹೊತ್ತು ರಾಜ ಗಾಂಭೀರ್ಯದಿಂದ ನಡೆಯುತ್ತಿದ್ದಾನೆ. ದಸರಾ ಆರಂಭದಿಂದ 9 ದಿನಗಳು ನಡೆದ ತಾಲೀಮಿನಲ್ಲಿ ಅರ್ಜುನ ಯಶಸ್ವಿಯಾಗಿದ್ದಾನೆ.