ನವದೆಹಲಿ: ಕಳೆದ ಐದು ದಿನಗಳಿಂದ ಕಾಣೆಯಾಗಿರುವ ಜವಾಹರ್ ನೆಹರು ವಿಶ್ವವಿದ್ಯಾಲಯದ ವಿದ್ಯಾರ್ಥಿ ನಜೀಬ್ ಅಹಮದ್ ಬಗೆಗೆ ಸುಳಿವು ನೀಡಿದವರಿಗೆ 50 ಸಾವಿರ ರೂ ಬಹುಮಾನ ನೀಡುವುದಾಗಿ ದೆಹಲಿ ಪೊಲೀಸರು ಘೋಷಿಸಿದ್ದಾರೆ.
ಬುಧವಾರ ನೀಡಿರುವ ಆದೇಶದ ಪ್ರಕಾರ, ಕಾಣೆಯಾಗಿರುವ/ಅಪಹರಣವಾಗಿರುವ ಜೆ ಎನ್ ಯು ವಿದ್ಯಾರ್ಥಿ ನಜೀಬ್ ಅಹಮದ್ ಅವರ ಬಗ್ಗೆ ಮಾಹಿತಿ ಅಥವಾ ಸುಳಿವನ್ನು ವಸಂತಕುಂಜ್ ಉತ್ತರ ಪೊಲೀಸ್ ಸ್ಟೇಷನ್ ನ ಸ್ಟೇಷನ್ ಅಧಿಕಾರಿಗೆ ನೀಡುವಂತೆ ಕೋರಿದ್ದಾರೆ.
ಅಹಮದ್ ಇರುವಿಕೆಯ ಬಗ್ಗೆ ಮಾಹಿತಿ ನೀಡಿದವರಿಗೆ 50 ಸಾವಿರ ರು ಬಹುಮಾನ ನೀಡುವುದಾಗಿ ಕೂಡ ಪೊಲೀಸರು ತಿಳಿಸಿದ್ದಾರೆ.
ಎಬಿವಿಪಿ ವಿದ್ಯಾರ್ಥಿಗಳ ಜೊತೆಗಿನ ಕಾದಾಟದ ನಂತರ ಅಕ್ಟೋಬರ್ 15 ರಿಂದ ಅಹಮದ್, ಮಹಿ-ಮಾಂಡವಿ ಹಾಸ್ಟೆಲ್ ನಿಂದ ಕಾಣೆಯಾಗಿದ್ದಾರೆ.
ಐಪಿಸಿ 365ರಡಿ ಪೊಲೀಸರಿಗೆ ರು ನೀಡಲಾಗಿದ್ದು, ವಿಶ್ವವಿದ್ಯಾಲಯ ಕೂಡ ಆಂತರಿಕ ತನಿಖೆಗೆ ಮುಂದಾಗಿದೆ.
ಬುಧವಾರ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಉಪಕುಲಪತಿ ಮತ್ತು ಹಿರಿಯ ಅಧಿಕಾರಿಗಳು ತಮ್ಮ ಕೋಣೆಯಿಂದ ಹೊರಬರದಂತೆ ಈ ವಿದ್ಯಾರ್ಥಿಗಳು ದಿಗ್ಬಂಧನ ಮಾಡಿದ್ದಾರೆ. ಈ ಪ್ರತಿಭಟನೆಯಲ್ಲಿ ಎಬಿವಿಪಿ ಸದಸ್ಯರು ಕೂಡ ಪಾಲ್ಗೊಂಡಿದ್ದು ವಿಶ್ವವಿದ್ಯಾಲಯದ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದಾರೆ.