ನವದೆಹಲಿ: ಗೂಢಚರ್ಯೆ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ಪಾಕಿಸ್ತಾನ ಹೈಕಮಿಷನ್ ಸಿಬ್ಬಂದಿ ಮೆಹಮೂದ್ ಅಖ್ತರ್ ಭಾರತದಲ್ಲಿ ಮುಂಬೈ ದಾಳಿ ಮಾದರಿಯಲ್ಲಿ ಉಗ್ರ ದಾಳಿ ನಡೆಸುವುದಕ್ಕಾಗಿ ಮಾಹಿತಿ ಸಂಗ್ರಹಿಸುತ್ತಿದ್ದ ಎಂಬ ಆಘಾತಕರಾಗಿ ವಿಷಯ ಬಹಿರಂಗವಾಗಿದೆ.
ಅಖ್ತರ್ ಪಶ್ಚಿಮ ಕರಾವಳಿ, ಸರ್ ಕ್ರೀಕ್, ಕಚ್ ಪ್ರದೇಶ ಮತ್ತು ಗುಜರಾತ್, ಮಹಾರಾಷ್ಟ್ರ ಹಾಗೂ ಗೋವಾದಲ್ಲಿ ಭಾರತೀಯ ರಕ್ಷಣಾ ಪಡೆಗಳು ನಿಯೋಜಿತವಾಗಿರುವ ಮಾಹಿತಿಯನ್ನು ಸಂಗ್ರಹಿಸಿದ್ದನು ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ದೇಶದಲ್ಲಿ ಮುಂಬೈ ದಾಳಿ ಮಾದರಿಯ ಉಗ್ರ ಕೃತ್ಯ ನಡೆಸುವುದಕ್ಕಾಗಿ ಪಾಕಿಸ್ತಾನದ ಐಎಸ್ಐ ಸಮುದ್ರ ಮಾರ್ಗವಾಗಿ ಉಗ್ರರನ್ನು ಕಳುಹಿಸಲು ಯೋಜನೆ ರೂಪಿಸಿತ್ತು. ಈ ನಿರ್ದೇಶನದ ಪ್ರಕಾರ ಅಖ್ತರ್ ಪಶ್ಚಿಮ ಕರಾವಳಿ ಬಗ್ಗೆ ಮಾಹಿತಿ ಸಂಗ್ರಹಿಸಿದ್ದ ಎನ್ನಲಾಗಿದೆ.
2008 ನವೆಂಬರ್ ನಲ್ಲಿ ಕರಾಚಿಯಿಂದ ಸಮುದ್ರ ಮಾರ್ಗವಾಗಿ ಬಂದ 10 ಉಗ್ರರು ಮುಂಬೈನಲ್ಲಿ ನಡೆಸಿದ ದಾಳಿಯಲ್ಲಿ 166 ಮಂದಿ ಸಾವಿಗೀಡಾಗಿದ್ದರು.
ಮೆಹಮೂದ್ ಅಖ್ತರ್ ಎಂಬ ಈ ವ್ಯಕ್ತಿ ಪಾಕಿಸ್ತಾನದ ಗೂಢಚಾರ ಸಂಸ್ಥೆ ಐಎಸ್ಐಗಾಗಿ ಗೂಢಚರ್ಯೆ ಜಾಲವೊಂದನ್ನು ನಡೆಸುತ್ತಿದ್ದರು ಎಂದು ಆರೋಪಿಸಲಾಗಿದೆ. ಭಾರತ–ಪಾಕ್ ಗಡಿಯಲ್ಲಿ ಗಡಿಭದ್ರತಾ ಪಡೆ (ಬಿಎಸ್ಎಫ್) ಯೋಧರ ನಿಯೋಜನೆಗೆ ಸಂಬಂಧಿಸಿದ ದಾಖಲೆಗಳು ಸೇರಿದಂತೆ ಹಲವು ಗೋಪ್ಯ ದಾಖಲೆಗಳನ್ನು ಅಖ್ತರ್ ಅವರಿಂದ ವಶಕ್ಕೆ ಪಡೆಯಲಾಗಿದೆ.
ಆಖ್ತರ್ ಹಾಗೂ ಅವರಿಗೆ ಮಾಹಿತಿ ನೀಡುತ್ತಿದ್ದ ಸುಭಾಷ್ ಜಂಗೀರ್ ಹಾಗೂ ಮೌಲಾನಾ ರಮ್ಜಾನ್ ಅವರನ್ನು ಬುಧವಾರ ಬೆಳಿಗ್ಗೆ 10 ಗಂಟೆಗೆ ದೆಹಲಿ ಮೃಗಾಲಯದ ಸಮೀಪ ವಶಕ್ಕೆ ಪಡೆಯಲಾಗಿತ್ತು.