ನವದೆಹಲಿ: ಮೂರು ಬಾರಿ ತಲಾಖ್ (ತ್ರಿವಳಿ ತಲಾಖ್) ಹೇಳಿ ವಿವಾಹ ವಿಚ್ಛೇದನ ಪಡೆಯುವುದು, ಬಹುಪತ್ನಿತ್ವ ಮತ್ತು ನಿಕಾಹ್ ಹಲಾಲಾಗಳಿಗೆ ಸಂಬಂಧಿಸಿದ ಅರ್ಜಿಗಳ ಬಗ್ಗೆ ಐವರು ಸದಸ್ಯರನ್ನೊಳಗೊಂಡ ಸಂವಿಧಾನಿಕ ಪೀಠ ನಿರ್ಧಾರ ತೆಗೆದುಕೊಳ್ಳಲಿದೆ.
ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ಪೀಠ, ಮುಸ್ಲಿಮರಲ್ಲಿನ ವಿವಾಹ ವಿಚ್ಛೇದನ, ಬಹುಪತ್ನಿತ್ವ ಮತ್ತು ನಿಕಾಹ್ ಹಲಾಲಾಗಳಿಗೆ ಸಂಬಂಧಿಸಿದತಂದೆ ಮಾರ್ಚ್ 30ರಂದು ಸಂವಿಧಾನಿಕ ಪೀಠ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದೆ.
ತ್ರಿವಳಿ ತಲಾಕ್, ಬಹುಪತ್ನಿತ್ವ ಮತ್ತು ನಿಕಾಹ್ ಹಲಾಲಾ ಪದ್ಧತಿಗಳನ್ನು ವಿರೋಧಿಸುವುದಾಗಿ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ಗೆ ತಿಳಿಸಿದ್ದು, ಈ ಬಗ್ಗೆ ಸಂವಿಧಾನಿಕ ಪೀಠ ನಿರ್ಧಾರ ತೆಗೆದುಕೊಳ್ಳಲಿದೆ. ಅಲ್ಲದೆ ಈ ಸಂಬಂಧ ಲಿಖಿತ ಪ್ರತಿಕ್ರಿಯೆ ಸಲ್ಲಿಸುವಂತೆ ಅರ್ಜಿದಾರರಿಗೆ ಕೋರ್ಟ್ ಸೂಚಿಸಿದೆ.
ಜಾತ್ಯತೀತತೆ ಮತ್ತು ಲಿಂಗ ಸಮಾನತೆ ದೃಷ್ಟಿಯಿಂದ ಮುಸಲ್ಮಾನರಲ್ಲಿ ತ್ರಿವಳಿ ತಲಾಖ್, ನಿಖಾಹ್ ಹಲಾಲ ಮತ್ತು ಬಹುಪತ್ನಿತ್ವ ಪದ್ಧತಿಯನ್ನು ವಿರೋಧಿಸಿದ್ದ ಕೇಂದ್ರ ಸರ್ಕಾರ ಈ ವಿಷಯವನ್ನು ಮರು ಅವಲೋಕನ ಮಾಡುವಂತೆ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತ್ತು. ಆದರೆ ಕೇಂದ್ರದ ನಿಲುವನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಿರೋಧಿಸಿದೆ. ಲಿಂಗ ತಾರತಮ್ಯವನ್ನು ತಳ್ಳಿ ಹಾಕಿರುವ ಅದು ಮುಸ್ಲಿಂ ವೈಯಕ್ತಿಕ ಕಾನೂನಿನಡಿಯಲ್ಲಿ ಯಾರಿಗೂ ಮಧ್ಯ ಪ್ರವೇಶಕ್ಕೆ ಅವಕಾಶವಿಲ್ಲ ಎಂದು ಹೇಳಿದೆ.