ಮುಂಬೈ: ಕೇಂದ್ರ ಸರ್ಕಾರದ ನೋಟು ಹಿಂಪಡೆತ ನಿರ್ಧಾರವನ್ನು ಬುಧವಾರ ಮತ್ತೆ ಕಟುವಾಗಿ ಟೀಕಿಸಿರುವ ಬಿಜೆಪಿ ಪಕ್ಷದ ಮಿತ್ರ ಶಿವಸೇನೆ, ಈ ನಿರ್ಧಾರದಿಂದ ಭಾರತೀಯ ಆರ್ಥಿಕತೆಗೆ ಉಂಟಾಗಿರುವ ಹೊಡೆತವನ್ನು ಹಿರೋಶಿಮಾ-ನಾಗಾಸಾಕಿಯ ಮೇಲೆ ನಡೆದ ಬಾಂಬ್ ದಾಳಿಗೆ ಹೋಲಿಸಿದೆ.
"'ನೋಟು ಹಿಂಪಡೆತ ಬಾಂಬ್ ದಾಳಿ' ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಭಾರತೀಯ ಆರ್ಥಿಕತೆಯನ್ನು ಹಿರೋಶಿಮಾ ಮತ್ತು ನಾಗಾಸಾಕಿಯನ್ನಾಗಿಸಿದ್ದಾರೆ. ಎಲ್ಲರೂ ಸತ್ತಿದ್ದಾರೆ" ಎಂದು ಶಿವಸೇನೆ ಪಕ್ಷ ತನ್ನ ಮುಖವಾಣಿ ಸಾಮ್ನಾದ ಸಂಪಾದಕೀಯದಲ್ಲಿ ಬರೆದುಕೊಂಡಿದೆ.
ಮೋದಿ ಯಾರ ಮಾತನ್ನು ಕೇಳುವುದಿಲ್ಲ ಎಂದು ಆರೋಪಿಸಿರುವ ಶಿವಸೇನೆ, ಕಳೆದ ವರ್ಷ ನವೆಂಬರ್ ೮ ರಂದು ೫೦೦ ಮತ್ತು ೧೦೦೦ ರೂ ನೋಟುಗಳನ್ನು ಹಿಂಪಡೆಯುವಾಗ ಆರ್ ಬಿ ಐ ಸಲಹೆಯನ್ನು ಕೂಡ ಪ್ರಧಾನಿ ಕೇಳಿಲ್ಲ ಎಂದು ಕೂಡ ಆರೋಪಿಸಿದೆ.
"ಅವರ ಸಂಪುಟದಲ್ಲಿ ಕುಳಿತಿರುವ ಕಿವುಡ ಮತ್ತು ಮೂಗ ಗಿಣಿಗಳಂತೆ, ಅವರನ್ನು (ಊರ್ಜಿತ್ ಪಟೇಲ್) ಆರ್ ಬಿ ಐ ಗವರ್ನರ್ ಆಗಿ ನೇಮಿಸಲಾಯಿತು ಮತ್ತು ಈಗ ದೇಶದ ಆರ್ಥಿಕತೆ ಛಿದ್ರಗೊಂಡಿದೆ" ಎಂದು ಕೂಡ ಸೇನಾ ಹೇಳಿದೆ.
ಉದ್ಧವ್ ಠಾಕ್ರೆ ಮುಂದಾಳತ್ವದ ಶಿವಸೇನೆ ಕೇಂದ್ರ ಮತ್ತು ಮಹಾರಾಷ್ಟ್ರದಲ್ಲಿ ಆಡಳಿತ ಬಿಜೆಪಿ ಪಕ್ಷದ ಮಿತ್ರ ಪಕ್ಷ.