ಪಾಟ್ನಾ: ಎನ್ ಡಿ ಎ ರಾಷ್ಟ್ರಪತಿ ಅಭ್ಯರ್ಥಿ ರಾಮ್ ನಾಥ್ ಕೋವಿಂದ್ ಅವರಿಗೆ ಬೆಂಬಲ ನೀಡಲು ಬಿಹಾರದ ಆಡಳಿತ ಪಕ್ಷ ಸಂಯುಕ್ತ ಜನತಾ ದಳ ನಿರ್ಧರಿಸಿದೆ ಎಂದು ಜೆಡಿಯು ಶಾಸಕ ರತ್ನೇಶ್ ಸಾದಾ ಬುಧವಾರ ಹೇಳಿದ್ದಾರೆ.
ಸಾಂಬಾರ್ಷ ಕ್ಷೇತ್ರವನ್ನು ಪ್ರತಿನಿಧಿಸುವ ಸಾದಾ "ಕೋವಿಂದ್ ಅವರಿಗೆ ಬೆಂಬಲ ನೀಡಲು ಪಕ್ಷ ನಿರ್ಧರಿಸಿದೆ. ಶಾಸಕರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ" ಎಂದು ತಿಳಿಸಿದ್ದಾರೆ.
ನೆರೆದಿದ್ದ ಶಾಸಕರಿಗೆ "ಕೋವಿಂದ್ ಒಳ್ಳೆಯ ಮನುಷ್ಯ" ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ತಿಳಿಸಿದ್ದಾಗಿ ಸಾದಾ ಹೇಳಿದ್ದಾರೆ.
ಶಾಸಕರ ಜೊತೆಗೆ ಇನ್ನಷ್ಟು ಸುತ್ತಿನ ಮಾತುಕತೆಗಳು ನಡೆಯಲಿದ್ದು, ಬುಧವಾರ ತಡವಾಗಿ ಅಥವಾ ಗುರುವಾರ ಅಧಿಕೃತ ಘೋಷಣೆಯಾಗುವ ಸಾಧ್ಯತೆ ಇದೆ.
ನಿತೀಶ್ ಕುಮಾರ್ ಅವರ ನಿರ್ಧಾರಕ್ಕೆ ಒಮ್ಮತವಾಗಿ ಒಪ್ಪಿಕೊಳ್ಳುವುದಾಗಿ ಶಾಸಕರು ಹೇಳಿರುವುದಾಗಿ ಕೂಡ ಸಾದಾ ಹೇಳಿದ್ದಾರೆ.