ಚೆನ್ನೈ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಸಾವಿನ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ಮಾಜಿ ಮುಖ್ಯಮಂತ್ರಿ ಒ ಪನ್ನೀರ್ಸೆಲ್ವಂ ಮತ್ತು ಬೆಂಬಲಿಗರು ಬುಧವಾರ ಒಂದು ದಿನದ ಉಪವಾಸ ಧರಣಿಗೆ ಮುಂದಾಗಿದ್ದಾರೆ.
ತಮಿಳುನಾಡು, ಪುದುಚೆರಿ ಮತ್ತು ಕರೈಕಲ್ ನ ಎಲ್ಲ ಜಿಲ್ಲಾ ಮುಖ್ಯ ಘಟಕಗಳಲ್ಲಿ ಉಪವಾಸ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಬೆಳಗ್ಗೆ ೯ ಘಂಟೆಯಿಂದ ಸಂಜೆ ೫ ಘಂಟೆಯವರೆಗೆ ಈ ಉಪವಾಸ ಧರಣಿ ಜಾರಿಯಲ್ಲಿರಲಿದೆ.
ಪನ್ನೀರ್ಸೆಲ್ವಂ ಬಣಕ್ಕೆ ಸೇರಿದ ಎಐಡಿಎಂಕೆ ಸಂಸದರು ಮತ್ತು ಶಾಸಕರು ಕೂಡ ಈ ಪ್ರತಿಭನೆಯಲ್ಲಿ ಭಾಗಿಯಾಗಲಿದ್ದಾರೆ.
ಚೆನೈನ ಅಪೋಲೋ ಆಸ್ಪತ್ರೆಯಲ್ಲಿ ೭೫ ದಿನಗಳ ಕಾಲ ದಾಖಲಾಗಿದ್ದ ಜಯಲಲಿತಾ ಕಳೆದ ವರ್ಷ ಡಿಸೆಂಬರ್ ನಲ್ಲಿ ಕೊನೆಯುಸಿರೆಳೆದಿದ್ದರು. ಜಯಲಲಿತಾ ಸಾವಿನ ಸುತ್ತ ನಿಗೂಢಗಳಿವೆ ಎಂದು ಪನ್ನೀರ್ಸೆಲ್ವಂ ಬಣದ ಸದಸ್ಯರು ಸಂದೇಹ ವ್ಯಕ್ತಪಡಿಸಿದ್ದಾರೆ.
ಮಾರ್ಚ್ ೬ ರಂದು ಜಯಲಲಿತಾ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಿದ ದಾಖಲೆಗಳನ್ನು ಸಾರ್ವಜನಿಕಗೊಳಿಸಿರುವ ತಮಿಳುನಾಡು ಸರ್ಕಾರ, ಅಮ್ಮ ಅವರಿಗೆ ಅಗತ್ಯವಿದ್ದ ಅತ್ಯುತ್ತಮ ಚಿಕಿತ್ಸೆ ದೊರಕಿದೆ ಎಂದು ತಿಳಿಸಿದೆ.