ಆದರೆ ಯೋಧರ ಬಲಿದಾನ, ಶತ್ರುಗಳನ್ನು ಭಾರತದ ನೆಲದಿಂದ ಹೊರದಬ್ಬಿದ ಭಾರತೀಯ ಯೋಧರ ಕಾರ್ಯಾಚರಣೆ, ದೇಶದ ಜನತೆ ಅದಕ್ಕೆ ಸ್ಪಂದಿಸಿದ ರೀತಿ ಎಲ್ಲವನ್ನೂ ನೋಡಿದರೆ ಅದೊಂದು ಯುದ್ಧವಲ್ಲ ಎಂದು ಹೇಳುವುದಕ್ಕೆ ಬಹುಶಃ ಯಾವುದೇ ಅಂಶಗಳು ಸಿಗುವುದಿಲ್ಲವೇನೋ.. ಕಾರ್ಗಿಲ್ ಯುದ್ಧವಲ್ಲ, ಯುದ್ಧದ ರೀತಿಯ ಪರಿಸ್ಥಿತಿ ಎಂದು ಹೇಳುವುದನ್ನು ಕಾರ್ಗಿಲ್ ನ ಯುದ್ಧದಲ್ಲಿ ಮಗ ಅನುಜ್ ನಯ್ಯರ್ ನ್ನು ಕಳೆದುಕೊಂಡ ಅವರ ತಂದೆ ಆಕ್ಷೇಪಿಸುತ್ತಾರೆ. " ಅನುಜ್ ನಯ್ಯರ್ ಯುದ್ಧ ರೀತಿಯ ಸ್ಥಿತಿಯಲ್ಲಿ ದೇಶಕ್ಕಾಗಿ ಪ್ರಾಣ ಅರ್ಪಿಸಲಿಲ್ಲ. ಏಕೆಂದರೆ ಶತ್ರುಗಳೊಂದಿಗೆ ಹೋರಾಡಬೇಕಾದರೆ ಸಾವಿನ ರೀತಿಯ ಪರಿಸ್ಥಿತಿ ಇರುವುದಿಲ್ಲ. ಇರುವುದು ಒಂದೋ ಸಾವು ಇಲ್ಲ ಬದುಕು ಎರಡೇ ಇರುತ್ತದೆ. ನಮ್ಮ ಮಕ್ಕಳನ್ನು ಯುದ್ಧದ ರೀತಿಯ ಪರಿಸ್ಥಿತಿಯಲ್ಲಿ ಸಾಯಲು ಬೆಳೆಸಿಲ್ಲ. ಗಡಿಯಲ್ಲಿ ಎಂದಿಗೂ ಸಾವಿನ ರೀತಿಯ ಪರಿಸ್ಥಿತಿ ಇರುವುದಿಲ್ಲ ಹಾಗಾಗಿ ಕಾರ್ಗಿಲ್ ವಾರ್ ಲೈಕ್ ಸಿಚುಯೇಶನ್ ಆಗಲು ಸಾಧ್ಯವಿಲ್ಲ, ನನ್ನ ಮಗ ಯುದ್ಧದಲ್ಲಿಯೇ ಹುತಾತ್ಮನಾಗಿದ್ದಾನೆ, ಕಾರ್ಗಿಲ್ ಯುದ್ಧವೇ ಸರಿ" ಎಂದು ಹೇಳುತ್ತಾರೆ.