ಉಗ್ರರಿಗೆ ನೆರವು ನೀಡುವವರನ್ನು ದೂರವಿಡಿ

ಯಾರು ಭಯೋತ್ಪಾದಕರಿಗೆ ಆಶ್ರಯದಾತರಾಗಿದ್ದಾರೋ ಅವರನ್ನು ಜಾಗತಿಕವಾಗಿ ಪ್ರತ್ಯೇಕಿಸಿ ಇಡಬೇಕು. ಇದು ಪ್ರಧಾನಿ ನರೇಂದ್ರ ಮೋದಿ ಅವರ ಮಾತು...
ನರೇಂದ್ರ ಮೋದಿ
ನರೇಂದ್ರ ಮೋದಿ
Updated on
ಲಂಡನ್: ಯಾರು ಭಯೋತ್ಪಾದಕರಿಗೆ ಆಶ್ರಯದಾತರಾಗಿದ್ದಾರೋ ಅವರನ್ನು ಜಾಗತಿಕವಾಗಿ ಪ್ರತ್ಯೇಕಿಸಿ ಇಡಬೇಕು. ಇದು ಪ್ರಧಾನಿ ನರೇಂದ್ರ ಮೋದಿ ಅವರ ಮಾತು. ಈ ಮೂಲಕ ಪರೋಕ್ಷವಾಗಿ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಅವರು, ಭಯೋತ್ಪಾದನಾ ವಿರೋಧಿ ಹೋರಾಟದಲ್ಲಿ ಯಾರು `ಪ್ರಾಮಾಣಿಕವಾಗಿ' ಹೋರಾಟ ನಡೆಸಲು ಮುಂದೆ ಬರುತ್ತಾರೋ ಅವರಿಗೆ ಬೆಂಬಲ ನೀಡುವ ಕೆಲಸವೂ ಆಗಬೇಕು ಎಂದರು. 
ಬ್ರಿಟನ್ ಪಾರ್ಲಿಮೆಂಟ್‍ನಲ್ಲಿ ಮಾತನಾಡಿದ ಅವರು, ಅವಕಾಶ ಕೊಟ್ಟದ್ದಕ್ಕೆ ಧನ್ಯವಾದ ಹೇಳಿದರು. ಅಲ್ಲದೆ ಭಯೋತ್ಪಾದನೆ ಎಂಬುದು ಜಾಗತಿಕ ಸಮಸ್ಯೆಯಾಗಿದ್ದು, ಇದು ಎಲ್ಲರನ್ನೂ ಕಾಡುತ್ತಿದೆ. ನಮ್ಮ ಮುಂದಿರುವ ದೊಡ್ಡ ಸವಾಲು ಇದೊಂದೇ ಎಂದರು. 25 ನಿಮಿಷಗಳ ಕಾಲ ಮಾತನಾಡಿದ ಅವರು, ಪ್ರಮುಖವಾಗಿ ಪ್ರಸ್ತಾಪಿಸಿದ್ದು ಭಯೋತ್ಪಾದನೆ ವಿಚಾರವನ್ನೇ. ಭಯೋತ್ಪಾದನೆಗೆ ಸಹಕರಿಸುವ ದೇಶಗಳನ್ನು ಜಾಗತಿಕವಾಗಿ ಪ್ರತ್ಯೇಕಿಸುವುದೇ ನಮಗಿರುವ ಏಕೈಕ ದಾರಿ ಎಂಬ ಮಾರ್ಗೋಪಾಯವನ್ನೂ ಅವರು ಹೇಳಿದರು. ಈ ಸಂಬಂಧ ವಿಶ್ವಸಂಸ್ಥೆಯಲ್ಲಿ ತಡವಿಲ್ಲದೇ ನಿರ್ಧಾರ ತೆಗೆದುಕೊಳ್ಳಬೇಕು ಎಂದರು. 
ಇದೇ ವೇಳೆ ಬದಲಾಗಿರುವ ಭಾರತದ ಬಗ್ಗೆ ಮಾತನಾಡಿದ ಅವರು, 'ಭಾರತಕ್ಕೆ ಬನ್ನಿ, ಬದಲಾವಣೆಯ ಗಾಳಿಯನ್ನು ಸವಿಯುತ್ತೀರಿ' ಎಂದು ಬ್ರಿಟನ್ ಸಂಸದರಿಗೆ ಆಹ್ವಾನ ನೀಡಿದರು. ಇದರ ಜತೆಗೆ ಮಾಜಿ ಪ್ರಧಾನಿಗಳಾದ ಜವಾಹರ್ ಲಾಲ್ ನೆಹರು ಅವರಿಂದ ಡಾ. ಮನಮೋಹನ್ ಸಿಂಗ್ ಅವರು ಕೂಡ ಬ್ರಿಟನ್ ಇತಿಹಾಸದಲ್ಲಿ ಹಾದುಹೋಗಿದ್ದಾರೆ ಎಂದು ನೆನಪಿಸಿಕೊಂಡರು. ಅಲ್ಲದೆ ಭಾರತದ ಪ್ರತಿಯೊಬ್ಬ ಫುಟ್ಬಾಲ್ ಪ್ರೇಮಿಯೂ ಬೆಂಡ್ ಇಟ್ ಲೈಕ್ ಬೆಕ್ಹಮ್ ರೀತಿ ಆಗಬೇಕೆಂದೇ ಬಯಸುತ್ತಿದ್ದಾನೆ ಎಂದೂ ಹೇಳಿದರು. 10 ವರ್ಷಗಳ ನಂತರ ಭಾರತದ ಪ್ರಧಾನಿಯೊಬ್ಬರು ಬ್ರಿಟನ್‍ಗೆ ಭೇಟಿ ನೀಡಿದ್ದಾರೆ. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಭಾರತದ ಪ್ರಧಾನಿಯೊಬ್ಬರಿಗೆ ಈ ಗೌರವ ಸಿಕ್ಕಿದೆ. ಈ ಭಾಷಣಕ್ಕೂ ಮುನ್ನ ಪಾರ್ಲಿಮೆಂಟ್ ಮುಂದಿದ್ದ ಗಾಂಧಿ ಪ್ರತಿಮೆಗೆ ನಮಸ್ಕರಿಸಿದರು. ಈ ವೇಳೆ ಕ್ಯಾಮರೂನ್ ಜತೆಗಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com