1962ರ ಭಾರತ-ಚೀನಾ ಯುದ್ಧದಲ್ಲಿ ಅಮೆರಿಕ ಸಹಾಯ ಕೋರಿದ್ದ ನೆಹರೂ

ಚೀನಾದ ಆಕ್ರಮಣವನ್ನು ಮಟ್ಟಹಾಕಲು ಇಂಡಿಯಾ ಫೈಟರ್ ಜೆಟ್ ವಿಮಾನವನ್ನು ನೀಡುವಂತೆ ಭಾರತದ ಮಾಜಿ ಪ್ರಧಾನಿ...
ಭಾರತದ ಮಾಜಿ ಪ್ರಧಾನಿ ದಿವಂಗತ ಜವಹರಲಾಲ್ ನೆಹರೂ
ಭಾರತದ ಮಾಜಿ ಪ್ರಧಾನಿ ದಿವಂಗತ ಜವಹರಲಾಲ್ ನೆಹರೂ

ವಾಷಿಂಗ್ಟನ್: ಚೀನಾದ ಆಕ್ರಮಣವನ್ನು ಮಟ್ಟಹಾಕಲು ಇಂಡಿಯಾ ಫೈಟರ್ ಜೆಟ್ ವಿಮಾನವನ್ನು ನೀಡುವಂತೆ ಭಾರತದ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಕೋರಿದ್ದರು ಎಂಬ ಹೊಸ ವಿಷಯ ಬೆಳಕಿಗೆ ಬಂದಿದೆ.

1962ರ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ಚೀನಾದ ವಿರುದ್ಧ ಹೋರಾಡಲು ಅಮೆರಿಕ ಯುದ್ಧ ವಿಮಾನವನ್ನು ಒದಗಿಸುವಂತೆ ಅಂದಿನ ಅಮೆರಿಕ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರಿಗೆ ಪತ್ರ ಬರೆದಿದ್ದರು ಎಂದು ಕೇಂದ್ರ ಗುಪ್ತಚರ ಸಂಸ್ಥೆಯ(ಸಿಐಎ) ಮಾಜಿ ಅಧಿಕಾರಿ ಬ್ರೂಸ್ ರಿಡೆಲ್ ಅವರು ಬರೆದ 'JFK's Forgotten Crisis': Tibet, the CIA and the Sino-Indian War ಎಂಬ ಪುಸ್ತಕದಲ್ಲಿ ನಮೂದಿಸಿದ್ದಾರೆ.

ಚೀನಾದ ಪೀಪಲ್ಸ್ ರಿಪಬ್ಲಿಕ್ ಪಕ್ಷದ ಸ್ಥಾಪಕ ಮವೊ ಜೆಡೊಂಗ್ ಅವರ ಮುಖ್ಯ ಉದ್ದೇಶ 1962ರಲ್ಲಿ ಭಾರತದ ವಿರುದ್ಧ ಯುದ್ಧ ಸಾರಿ ಜವಾಹರ್ ಲಾಲ್ ನೆಹರೂರವರನ್ನು ಅವಮಾನಗೊಳಿಸುವುದಾಗಿತ್ತು. ಭಾರತ ಆ ಸಮಯದಲ್ಲಿ ಜಾರಿಗೆ ತಂದ ಸುಧಾರಣಾ ಯೋಜನೆಗಳು ಚೀನಾವನ್ನು ಕೆರಳಿಸುತ್ತಿದ್ದವು.ಮಾವೊನ ಗಮನ ನೆಹರೂ ಮೇಲೆ ಇತ್ತು. ಆದರೆ ಭಾರತದ ಸೋಲು ಮಾವೊನ ಇಬ್ಬರು ಶತ್ರುಗಳಾದ ಕ್ರುಶ್ಚೇವ್ ಮತ್ತು ಕೆನಡಿ ಅವರಿಗೂ ಹಿನ್ನಡೆಯಾಗಿತ್ತು ಎಂದು ರಿಡೆಲ್ ಪುಸ್ತಕದಲ್ಲಿ ಬರೆದಿದ್ದಾರೆ.

1962ರ ಯುದ್ಧದಲ್ಲಿ ಭಾರತ ತನ್ನ ಪ್ರಾಂತ್ಯವನ್ನು ಕಳೆದುಕೊಳ್ಳುತ್ತಿದ್ದಂತೆ ಅದೇ ವರ್ಷ ನವೆಂಬರ್ ನಲ್ಲಿ ಕೆನಡಿಯವರಿಗೆ ಪತ್ರ ಬರೆದಿದ್ದ ಕೆನಡಿಯವರು ಚೀನಾದ ದಾಳಿಯನ್ನು ಸದೆಬಡಿಯಲು ಯುದ್ಧ ವಿಮಾನವನ್ನು ಒದಗಿಸುವಂತೆ ಕೋರಿದ್ದರು.

ನೆಹರೂ ಬರೆದ ಪತ್ರದ ಸಾರಾಂಶ:
''ನಮ್ಮ ಕಡೆಯಿಂದ ಮತ್ತು ನಮ್ಮ ಸ್ನೇಹಿತರಿಂದ ತುಂಬಾ ಪ್ರಯತ್ನ ಆಗಬೇಕಾಗಿದೆ. ಚೀನಾದ ಪೀಪಲ್ಸ್ ಲಿಬರೇಷನ್ ಸೇನೆಯನ್ನು ಸೋಲಿಸಲು ವಾಯುದಾಳಿಯಲ್ಲಿ ಅಮೆರಿಕ ನಮಗೆ ಕೈ ಜೋಡಿಸಬೇಕು. ಇದು ಭಾರತದ ಪ್ರಧಾನಿ ಮಾಡುತ್ತಿರುವ ವಿನಮ್ರ ವಿನಂತಿ.ನಮಗೆ ಎಲ್ಲಾ ಹವಾಮಾನಗಳಲ್ಲಿ ವಾಯುದಾಳಿ ನಡೆಸಬಲ್ಲ ಅಮೇರಿಕಾದ ವಾಯುಪಡೆಗಳ ಕನಿಷ್ಟ 12 ತುಕಡಿಗಳು ಬೇಕು.ನಮ್ಮ ದೇಶದಲ್ಲಿ ಅತ್ಯಾಧುನಿಕ ರೇಡಾರ್ ಕವರ್ ಗಳಿಲ್ಲ. ನಿಮ್ಮ ದೇಶದ ವಾಯುಪಡೆ ಸಿಬ್ಬಂದಿ ಬಂದು ನಮ್ಮ ಯೋಧರಿಗೆ ತರಬೇತಿ ನೀಡಿದರೆ ಒಳ್ಳೆಯದು. ಇದರ ಜೊತೆಗೆ ಎರಡು ಬಿ-47 ಬಾಂಬರ್ ಸ್ಕ್ವಾಡ್ರನ್ ಗಳನ್ನ ಟಿಬೆಟ್ ನಲ್ಲಿ ದಾಳಿ ನಡೆಸಲು ನೀಡಿದರೆ ಉತ್ತಮ. ಇವುಗಳನ್ನು ಖಂಡಿತಾ ಪಾಕಿಸ್ತಾನದ ವಿರುದ್ಧ ಪ್ರಯೋಗಿಸುವುದಿಲ್ಲ. ಚೀನಾವನ್ನು ಸದೆಬಡಿಯಲು ಮಾತ್ರ ಬಳಸುತ್ತೇವೆ.ನಾನು ಮಾಡಿಕೊಳ್ಳುತ್ತಿರುವ ಮನವಿ ಕೇವಲ ಭಾರತವನ್ನು ಉಳಿಸುವುದಕ್ಕಾಗಿ ಮಾತ್ರವಲ್ಲ, ಇಡೀ ಏಷ್ಯಾದಲ್ಲಿ ಮುಕ್ತ ಮತ್ತು ಸ್ವತಂತ್ರ ಸರ್ಕಾರದ ಉಳಿವಿಗಾಗಿ ನಮಗೆ ಸಹಾಯ ಮಾಡಿ ಎಂದು ವಿನಂತಿಸಿಕೊಳ್ಳುತ್ತಿದ್ದೇನೆ''.

ಹೀಗೆ ನೆಹರೂರವರು ಬರೆದ ಪತ್ರವನ್ನು ಅಂದಿನ ಅಮೆರಿಕದ ಭಾರತೀಯ ರಾಯಭಾರಿ ಕೆ.ನೆಹರೂ ಮುಖಾಂತರ 1962, ನವೆಂಬರ್ 19ರಂದು ಅಧ್ಯಕ್ಷ ಕೆನಡಿಯವರಿಗೆ ಕಯ್ಯಾರೆ ನೀಡಲಾಗಿತ್ತು. ನೆಹರೂರವರ ಪತ್ರ ಅಮೆರಿಕಕ್ಕೆ ತಲುಪುವ ಮೊದಲೇ ಅಂದು ಭಾರತದ ಅಮೆರಿಕ ರಾಯಭಾರಿಯಾಗಿದ್ದ ಗಲ್ಬ್ರೈತ್  ಶ್ವೇತ ಭವನಕ್ಕೆ ಟೆಲಿಗ್ರಾಮ್ ಕಳುಹಿಸಿ ಭಾರತದ ಪ್ರಧಾನಿಯವರು ಮನವಿ ಪತ್ರ ಕಳುಹಿಸಿದ್ದಾರೆ ಎಂದು ಮೊದಲೇ ಸೂಚನೆ ನೀಡಲಾಗಿತ್ತು ಎಂದು ಪುಸ್ತಕದ ಲೇಖಕ ರಿಡೆಲ್ ನಿನ್ನೆ ವಾಷಿಂಗ್ಟನ್ ನಲ್ಲಿ ಪುಸ್ತಕದ ಮುನ್ನೋಟ ಕಾರ್ಯಕ್ರಮದಲ್ಲಿ ಅಲ್ಲಿನ ಸಭಿಕರಿಗೆ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com