ನ್ಯೂಯಾರ್ಕ್: ಇಸಿಸ್ ಉಗ್ರರಿಂದ ಅಪಹರಕ್ಕೀಡಾದ 39 ಭಾರತೀಯರು ಜೀವಂತವಾಗಿದ್ದು, ಅವರ ಬಿಡುಗಡೆಗಾಗಿ ಭಾರತ ಸರ್ಕಾರ ಸಕಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ವಿದೇಶಾಂಗ ಸಚಿವಾಲಯವು ಮಂಗಳವಾರ ಹೇಳಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು, ಪ್ಯಾಲೇಸ್ಟಿನಿಯನ್ ಅಧ್ಯಕ್ಷ ಮಹಮ್ಮದ್ ಅಬ್ಬಾಸ್ ಅವರನ್ನು ಈಗಾಗಲೇ ಭೇಟಿ ಮಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ಕುರಿತಂತೆ ಚರ್ಚೆ ನಡೆಸಿದ್ದು, ಈ ವಿಚಾರ ಕುರಿತಂತೆ ಮತ್ತಷ್ಟು ಮಾಹಿತಿಗಳನ್ನು ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ. ಮೋದಿ ಅವರ ಮನವಿಗೆ ಸ್ಪಂದನೆ ನೀಡಿರುವ ಅಬ್ಬಾಸ್ ಅವರು, ಬಂಧನಕ್ಕೊಳಗಾಗಿರುವ ಎಲ್ಲಾ 39 ಭಾರತೀಯರು ಜೀವಂತವಾಗಿದ್ದು, ಪ್ರಕರಣ ಸಂಬಂಧ ಹೊರ ಬರುವ ಹೊಸ ಮಾಹಿತಿಗಳನ್ನು ಭಾರತದೊಂದಿಗೆ ಹಂಚಿಕೊಳ್ಳುವುದಾಗಿ ತಿಳಿಸಿದ್ದಾರೆಂದು ಹೇಳಿದ್ದಾರೆ.
ಕಳೆದ ಜೂನ್ ತಿಂಗಳಿನಲ್ಲಿ ಇರಾಕ್ ನ ಮೊಸುಲ್ ನಗರದಲ್ಲಿ ಕಟ್ಟಡವೊಂದನ್ನು ನಿರ್ಮಾಣ ಮಾಡುವ ಕಾರ್ಯದಲ್ಲಿ ನಿರತರಾಗಿದ್ದ ಸುಮಾರು 39 ಭಾರತೀಯರನ್ನು ಇಸಿಸ್ ಉಗ್ರರು ಅಪಹರಿಸಿದ್ದರು. ಹಲವು ತಿಂಗಳು ಕಳೆದರೂ ಅಪಹರಣಕ್ಕೊಳಗಾಗಿದ್ದ ಭಾರತೀಯರ ಕುರಿತಂತೆ ಯಾವುದೇ ಮಾಹಿತಿಗಳು ಲಭ್ಯವಾಗಿರಲಿಲ್ಲ.
Advertisement