ಭಾರತೀಯ ರಾಷ್ಟ್ರೀಯ ತನಿಖಾ ಸಂಸ್ಥೆಗೆ ಬೆಚ್ಚಿದ ಇಸ್ಲಾಮಿಕ್ ಸ್ಟೇಟ್

ಜಗತ್ತಿನಾದ್ಯಂತ ತನ್ನ ಪೈಶಾಚಿಕ ವರ್ತನೆಯಿಂದ ನಡುಕ ಹುಟ್ಟಿಸಿರುವ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಸಿರಿಯಾ(ಇಸಿಸ್) ಉಗ್ರ ಸಂಘಟನೆಗೆ ಭಾರತದ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ನಡುಕ ಹುಟ್ಟಿಸಿದೆ...
ಎನ್ಐಎ
ಎನ್ಐಎ

ನವದೆಹಲಿ: ಜಗತ್ತಿನಾದ್ಯಂತ ತನ್ನ ಪೈಶಾಚಿಕ ವರ್ತನೆಯಿಂದ ನಡುಕ ಹುಟ್ಟಿಸಿರುವ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಸಿರಿಯಾ(ಇಸಿಸ್) ಉಗ್ರ ಸಂಘಟನೆಗೆ ಭಾರತದ ರಾಷ್ಟ್ರೀಯ ತನಿಖಾ ದಳ(ಎನ್‌ಐಎ) ನಡುಕ ಹುಟ್ಟಿಸಿದೆ. ಭಾರತದಲ್ಲಿ ತನ್ನ ಬೇರನ್ನು ಭದ್ರ ಪಡಿಸಿಕೊಳ್ಳಲು ಇನ್ನಿಲ್ಲದಂತೆ ಇಸಿಸ್ ಪ್ರಯತ್ನಿಸುತ್ತಿದ್ದು, ಇದಕ್ಕೆ ಕೊಡಲಿ ಪೆಟ್ಟು ನೀಡುತ್ತಿರುವ ಎನ್ಐಎಯಿಂದ ಇಸಿಸ್ ತತ್ತರಿಸಿದೆ.

ಎನ್ಐಎಯ ಕಾರ್ಯಕ್ಷಮತೆಯಿಂದ ಕಂಗಾಲಾಗಿರುವ ಉಗ್ರ ಸಂಘಟನೆ ಭಾರತದಲ್ಲಿ ಚಟುವಟಿಕೆಯ ಪ್ರಮಾಣವನ್ನು ತಗ್ಗಿಸುವಂತೆ ಬೆಂಬಲಿಗರಿಗೆ ಸೂಚಿಸಿದೆ ಎಂದು ಗುಪ್ತಚರ ಉನ್ನತ ಮೂಲಗಳಿಂದ ತಿಳಿದುಬಂದಿದೆ.

ಎನ್‌ಐಎ ಕಳೆದೊಂದು ವರ್ಷದ ಅವಧಿಯಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ತೀವ್ರಗೊಳಿಸಿ ದೇಶಾದ್ಯಂತ ಸುಮಾರು 24 ಶಂಕಿತ ಇಸಿಸ್ ಉಗ್ರರು, ನೇಮಕಾತಿದಾರರನ್ನು ಬಂಧಿಸಿತ್ತು. ಜತೆಗೆ ಇಸಿಸ್ ನಿಂದ ಪ್ರಭಾವಿತರಾಗಿ ಸಿರಿಯಾಗೆ ತೆರಳುತ್ತಿದ್ದ ಯುವಕರನ್ನು ತಡೆದು ಅವರ ಮನಃಪರಿವರ್ತಿಸುತ್ತಿರುವುದು ಇಸಿಸ್ ಗೆ ದೊಡ್ಡ ತೊಡಕಾಗಿದೆ.

ಇಸಿಸ್ ಪರ ಒಲವು ಹೊಂದಿರುವ ಯುವಕರ ಆನ್‌ಲೈನ್ ಚಟುವಟಿಕೆಗಳು, ಅವರು ಭೇಟಿ ನೀಡುವ ವೆಬ್ ತಾಣಗಳು, ಸಾಮಾಜಿಕ ಜಾಲತಾಣ ಖಾತೆ ಮಾಹಿತಿ ಮತ್ತಿತರ ವಿಚಾರಗಳ ಮೇಲೆ ಕಳೆದೊಂದು ವರ್ಷದಿಂದ ಎನ್‌ಐಎ ಹದ್ದಿನ ಕಣ್ಣಿಟ್ಟಿದೆ. ಯಾವುದೇ ಒಬ್ಬ ಯುವಕ ಇಸಿಸ್ ಗೆ ಸೇರಲು ಮುಂದಾದನೆಂದರೆ ತಕ್ಷಣ ಅದು ಎನ್‌ಐಎ ಗಮನಕ್ಕೆ ಬರುತ್ತದೆ. ಹೀಗಾಗಿ ಎನ್‌ಐಎ ಕಣ್ಣುತಪ್ಪಿಸಿ ಇಸಿಸ್ ಸೇರುವುದು ಅಸಾಧ್ಯವಾಗಿ ಪರಿಣಮಿಸಿದೆ.

ಇಸಿಸ್ ಗೆ ಭಾರತದ ಯುವಕರನ್ನು ನೇಮಕ ಮಾಡುತ್ತಿದ್ದ ಮುಂಬೈ ಮೂಲದ ಟೆಕ್ಕಿ ಮುದಾಬ್ಬಿರ್ ಮುಶ್ತಾಕ್ ಶೇಖ್‌ನನ್ನು ಕಳೆದ ಜನವರಿಯಲ್ಲಿ ಎನ್‌ಐಎ ಪೊಲೀಸರು ಬಂಧಿಸಿದ್ದರು. ಇದರ ಬೆನ್ನಲ್ಲೇ, ಆನ್‌ಲೈನ್ ಚಟುವಟಿಕೆಗಳನ್ನು ಸ್ಥಗಿತಗೊಳಿಸುವಂತೆ ಭಾರತದಲ್ಲಿರುವ ಉಗ್ರರಿಗೆ ಸಿರಿಯಾದಲ್ಲಿರುವ ಇಸಿಸ್ ನೇಮಕಾತಿದಾರ ಶಫಿ ಆರ್ಮರ್ ಅಲಿಯಾಸ್ ಯೂಸಫ್ ಅಲ್ ಹಿಂದಿ ಸೂಚನೆ ಕಳುಹಿಸಿದ್ದ. ಇನ್ನಷ್ಟು ಮಂದಿ ಪೊಲೀಸರ ಬಲೆಗೆ ಬೀಳುವುದನ್ನು ತಪ್ಪಿಸಲು ಸದ್ಯದ ಮಟ್ಟಿಗೆ ಭಾರತದಲ್ಲಿ ಚಟುವಟಿಕೆ ಕಡಿಮೆ ಮಾಡಿ. ಆನ್‌ಲೈನ್ ನೇಮಕಾತಿ ಕಾರ್ಯ ನಿಲ್ಲಿಸಿ ಸಾಮಾಜಿಕ ಜಾಲತಾಣಗಳ ಮೂಲಕ ರಹಸ್ಯವಾಗಿ ನನ್ನ ಸಂಪರ್ಕದಲ್ಲಿರಿ ಎಂದು ಯೂಸಫ್ ಸಂದೇಶ ಕಳುಹಿಸಿರುವುದು ಗಮನಕ್ಕೆ ಬಂದಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com