ಇಸ್ಲಾಮಾಬಾದ್: ಭಯೋತ್ಪಾದನೆ ವಿರುದ್ಧ ಹೋರಾಡಲು ಸಾರ್ಕ್ ಸದಸ್ಯ ರಾಷ್ಟ್ರಗಳೊಂದಿಗೆ ಜಂಟಿಯಾಗಿ ಕೆಲಸ ಮಾಡಲು ತಮ್ಮ ದೇಶ ಬದ್ಧವಾಗಿದೆ ಎಂದು ಪಾಕಿಸ್ತಾನ ಪ್ರಧಾನಿ ನವಾಜ್ ಷರೀಫ್ ಪುನರುಚ್ಛರಿಸಿದ್ದಾರೆ. ಆದರೆ ತಮ್ಮ ಭಾಷಣದಲ್ಲಿ ಎಲ್ಲಿಯೂ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಲಿಲ್ಲ.
ಇಸ್ಲಾಮಾಬಾದಿನಲ್ಲಿ ಅವರಿಂದ್ ಸಾರ್ಕ್ ದೇಶಗಳ ಗೃಹ ಸಚಿವರ ಸಭೆಯನ್ನುದ್ದೇಶಿ ಮಾತನಾಡುತ್ತಿದ್ದರು. ಆ ಸಂದರ್ಭದಲ್ಲಿ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಇತರರು ಹಾಜರಿದ್ದರು.
ಭಯೋತ್ಪಾದನೆ, ಭ್ರಷ್ಟಾಚಾರ ಮತ್ತು ಸಂಘಟಿತ ಅಪರಾಧಗಳನ್ನು ಮಟ್ಟಹಾಕಲು ಪಾಕಿಸ್ತಾನ, ಸಾರ್ಕ್ ಸದಸ್ಯ ರಾಷ್ಟ್ರಗಳೊಂದಿಗೆ ಕೆಲಸ ಮಾಡಲು ಕಟಿಬದ್ಧವಾಗಿದೆ ಎಂದು ಮತ್ತೊಮ್ಮೆ ದೃಢಪಡಿಸುತ್ತೇನೆ ಎಂದು ಷರೀಫ್ ಹೇಳಿದ್ದಾರೆ.
ಸಾರ್ಕ್ ತೆಗೆದುಕೊಳ್ಳುವ ಅಭಿಯಾನಗಳಿಗೆ ಪಾಕಿಸ್ತಾನ ಎಂದೆಂದಿಗೂ ಬೆಂಬಲ ನೀಡುತ್ತಿದ್ದು, ಅದರ ತತ್ವ, ಉದ್ದೇಶಗಳ, ಅಭಿವೃದ್ಧಿಯ ಗುರಿಗಳನ್ನು ಯಾವತ್ತೂ ಆಶಿಸುತ್ತದೆ ಎಂದು ಹೇಳಿದ್ದಾರೆ.
ಭಯೋತ್ಪಾದನೆ ವಿರುದ್ಧ ಹೋರಾಡುವಲ್ಲಿ ತಮ್ಮ ದೇಶದ ಮಿಲಿಟರಿ ಕಾರ್ಯಾಚರಣೆ ಜರ್ಬ್-ಇ-ಅಸಬ್ ನ ಬಗ್ಗೆಯೂ ನವಾಜ್ ಷರೀಫ್ ಸಭೆಯಲ್ಲಿ ಪ್ರಸ್ತಾಪಿಸಿದರು.
ಈ ಸಭೆಯ ಫಲಿತಾಂಶ ಮುಂದಿನ ನವೆಂಬರ್ ನಲ್ಲಿ ಮತ್ತೊಮ್ಮೆ ಇಸ್ಲಾಮಾಬಾದ್ ನಲ್ಲಿ ನಡೆಯಲಿರುವ 19ನೇ ಸಾರ್ಕ್ ಶೃಂಗಸಭೆಯಲ್ಲಿ ಕಂಡುಬರಲಿದೆ ಎಂಬ ಆಶಾವಾದದೊಂದಿಗೆ ತಮ್ಮ ಮಾತು ಮುಗಿಸಿದರು.