ದಾಫ್ನೆಯವರು ನಿನ್ನೆ ಅಪರಾಹ್ನ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಶಕ್ತಿಶಾಲಿ ಬಾಂಬ್ ಸ್ಫೋಟಗೊಂಡಿತು. ಬಾಂಬ್ ಸ್ಫೋಟದ ತೀವ್ರತೆಗೆ ಕಾರು ಛಿದ್ರ ಛಿದ್ರವಾಗಿ ಸುಟ್ಟು ರಸ್ತೆ ಬದಿಯ ಗದ್ದೆಗೆ ಹೋಗಿ ಬಿದ್ದಿದೆ.
ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಬ್ಲಾಗ್ ನಲ್ಲಿ ಬರೆದು ಹಂಚಿಕೊಳ್ಳುತ್ತಿದ್ದ ದಾಫ್ನೆ ಓದುಗ ವಲಯದಲ್ಲಿ ಹೆಚ್ಚು ಚಿರಪರಿಚಿತರಾಗಿದ್ದರು. ಇತ್ತೀಚೆಗೆ ಅವರು ಮಾಲ್ಟಾ ಪ್ರಧಾನಿ ಜೋಸೆಫ್ ಮಸ್ಕಟ್ ಮತ್ತು ಅವರ ಇಬ್ಬರು ಸಹಚರರ ವಿರುದ್ಧ ಅಜೆರ್ಬೈಜಾನ್ ಸರ್ಕಾರದೊಂದಿಗೆ ಪಾಸ್ ಪೋರ್ಟ್ ಮಾರಾಟ ಮತ್ತು ಹಣ ಪಾವತಿ ವಿಷಯದಲ್ಲಿ ನಡೆದ ಭ್ರಷ್ಟಾಚಾರ ಸಂಬಂಧ ಬರೆದಿದ್ದರು.
ದಾಫ್ನೆ ಹತ್ಯೆಯ ಹೊಣೆಯನ್ನು ಇದುವರೆಗೆ ಯಾವುದೇ ವ್ಯಕ್ತಿ ಅಥವಾ ಸಂಘಟನೆ ಹೊತ್ತುಕೊಂಡಿಲ್ಲ. ದಾಫ್ನೆ ನಿಧನವನ್ನು ದೇಶಾದ್ಯಂತ ಸಾರ್ವಜನಿಕರು ಖಂಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಶಾಂತಿ ಕಾಪಾಡುವಂತೆ ದೇಶದ ರಾಷ್ಟ್ರಪತಿ ಮೇರಿ-ಲೂಯಿಸ್ ಕೊಲೆರೊ ಪ್ರೀಕಾ ಕರೆ ನೀಡಿದ್ದಾರೆ.
ಈ ವರ್ಷದ ಬೇಸಿಗೆಯಲ್ಲಿ ಮಾಲ್ಟಾದಲ್ಲಿ ನಡೆದ ಸಾಮಾನ್ಯ ಚುನಾವಣೆಯಲ್ಲಿ ಜೋಸೆಫ್ ಮಸ್ಕಟ್ ಅವರ ಲೇಬರ್ ಪಾರ್ಟಿ ಭಾರೀ ಮತಗಳಿಂದ ಗೆಲುವು ಸಾಧಿಸಿತ್ತು. ಈ ಸಂದರ್ಭದಲ್ಲಿ ಸರ್ಕಾರದೊಳಗಿನ ಅನೇಕ ಹಗರಣ, ಭ್ರಷ್ಟಾಚಾರಗಳನ್ನು ದಾಫ್ನೆ ಹೊರಗೆಳೆಯುತ್ತಿದ್ದರು. 2013ರಿಂದ ಮಾಲ್ಟಾದ ಪ್ರಧಾನಿಯಾಗಿರುವ ಜೋಸೆಫ್ ಅವರ ಪತ್ನಿಯ ಹೆಸರು ಪನಾಮಾ ಪೇಪರ್ಸ್ ಸೋರಿಕೆ ಹಗರಣದಲ್ಲಿ ಕೇಳಿ ಬಂದಾಗ ಸರ್ಕಾರವನ್ನು ವಿಸರ್ಜಿಸಿ ಒಂದು ವರ್ಷ ಮೊದಲೇ ಚುನಾವಣೆ ನಡೆಸಿದ್ದರು.