ಗೌರಿ ಲಂಕೇಶ್ ಹತ್ಯೆ ಮಾದರಿಯಲ್ಲಿ ದ್ವೀಪ ರಾಷ್ಟ್ರ ಮಾಲ್ಟಾದಲ್ಲಿ ಪತ್ರಕರ್ತೆ ಹತ್ಯೆ

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಮಾದರಿಯಲ್ಲಿ ಉತ್ತರ ಆಫ್ರಿಕಾದ ತೀರದಲ್ಲಿರುವ ದ್ವೀಪ ರಾಷ್ಟ್ರ ಮಾಲ್ಟಾದಲ್ಲಿ ಪತ್ರಕರ್ತೆ .....
ಮಾಲ್ಟಾ ಪತ್ರಕರ್ತೆ ದಾಫ್ನೆ ಕರ್ವಾನಾ ಗಾಲಿಜಿಯ
ಮಾಲ್ಟಾ ಪತ್ರಕರ್ತೆ ದಾಫ್ನೆ ಕರ್ವಾನಾ ಗಾಲಿಜಿಯ
Updated on
ವನ್ನೆಟೆ(ಮಾಲ್ಟಾ): ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಮಾದರಿಯಲ್ಲಿ ಉತ್ತರ ಆಫ್ರಿಕಾದ ತೀರದಲ್ಲಿರುವ ದ್ವೀಪ ರಾಷ್ಟ್ರ ಮಾಲ್ಟಾದಲ್ಲಿ ಪತ್ರಕರ್ತೆ ದಾಫ್ನೆ ಕರ್ವಾನಾ ಗಾಲಿಜಿಯ ಅವರನ್ನು ನಿನ್ನೆ ಕಾರ್ ಬಾಂಬ್ ದಾಳಿ ನಡೆಸಿ ಹತ್ಯೆಗೈಯಲಾಗಿದೆ. 
ಇವರು ಸರ್ಕಾರದ ಭ್ರಷ್ಟಾಚಾರ ಕುರಿತು ಆರೋಪಿಸಿ ತಮ್ಮ ಬ್ಲಾಗ್ ನಲ್ಲಿ ಬರೆಯುತ್ತಿದ್ದರು. ಸರ್ಕಾರದ ಆಡಳಿತ ಕ್ರಮವನ್ನು ವಿರೋಧಿಸುತ್ತಿದ್ದರು ಎನ್ನಲಾಗಿದೆ. ದಾಫ್ನೆ ಅವರ ನಿಧನವನ್ನು ಮಾಲ್ಟಾ ದೇಶದ ಪ್ರಧಾನಿ ಜೋಸೆಫ್ ಮಸ್ಕಟ್ ಪ್ರಕಟಿಸಿದ್ದಾರೆ.
ಇದೊಂದು ಹೇಯ ಕೃತ್ಯ ಎಂದು ಸುದ್ದಿಗೋಷ್ಠಿಯಲ್ಲಿ ದಾಫ್ನೆ ಹತ್ಯೆಯನ್ನು ಖಂಡಿಸಿರುವ ಪ್ರಧಾನಿ, ಕೃತ್ಯವೆಸಗಿದವರನ್ನು ಆದಷ್ಟು ಶೀಘ್ರವೇ ಪತ್ತೆಹಚ್ಚಿ ಬಂಧಿಸಿ ಅವರ ಕುಟುಂಬದವರಿಗೆ ನ್ಯಾಯ ಒದಗಿಸಿಕೊಡಲಾಗುವುದು ಎಂದು ಹೇಳಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ದೇಶಗಲ್ಲಿ ಭದ್ರತೆ, ಸುವ್ಯವಸ್ಥೆಯನ್ನು ಹೆಚ್ಚಿಸಲು ಅವರು ಈ ಸಂದರ್ಭದಲ್ಲಿ ಆದೇಶಿಸಿದ್ದಾರೆ.
ಇಂದು  ನಡೆದಿರುವ ಘಟನೆಯನ್ನು ಯಾವುದೇ ಹಂತದಲ್ಲಿಯೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇಂದು ನಮ್ಮ ಪ್ರಜಾಪ್ರಭುತ್ವಕ್ಕೆ ಮತ್ತು ವಾಕ್ ಸ್ವಾತಂತ್ರ್ಯಕ್ಕೆ ಕಪ್ಪು ದಿನ. ನ್ಯಾಯ ಸಿಗುವವರೆಗೆ ನನಗೆ ಸಮಾಧಾನವಿಲ್ಲ ಎಂದು ಹೇಳಿದ್ದಾರೆ.
ವಿಶ್ವಾದ್ಯಂತ ಸುದ್ದಿ ಮಾಡಿರುವ ಪನಾಮಾ ಪೇಪರ್ಸ್ ಹಗರಣಕ್ಕೆ ಸಂಬಂಧಪಟ್ಟಂತೆ ಮಾಲ್ಟಾ ದೇಶದಲ್ಲಿನ ಭ್ರಷ್ಟಾಚಾರ ಕುರಿತು ದಾಫ್ನೆ ಕರ್ವಾನಾ ಗಾಲಿಜಿಯ ತನಿಖೆ ನಡೆಸುತ್ತಿದ್ದರು. 
ದೇಶದಲ್ಲಿನ ಭ್ರಷ್ಟಾಚಾರ, ಅವ್ಯವಸ್ಥೆ ಕುರಿತು ಅವರು ತಮ್ಮ ಬ್ಲಾಗ್ ನಲ್ಲಿ ಬರೆಯುತ್ತಿದ್ದರು. ಇವರನ್ನು ಏಕ ಮಹಿಳೆ ವಿಕಿಲೀಕ್ಸ್ ಎಂದು ಬಣ್ಣಿಸಲಾಗುತ್ತಿತ್ತು.
ದಾಫ್ನೆಯವರು ನಿನ್ನೆ ಅಪರಾಹ್ನ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿರುವಾಗ ಶಕ್ತಿಶಾಲಿ ಬಾಂಬ್ ಸ್ಫೋಟಗೊಂಡಿತು. ಬಾಂಬ್ ಸ್ಫೋಟದ ತೀವ್ರತೆಗೆ ಕಾರು ಛಿದ್ರ ಛಿದ್ರವಾಗಿ ಸುಟ್ಟು ರಸ್ತೆ ಬದಿಯ ಗದ್ದೆಗೆ ಹೋಗಿ ಬಿದ್ದಿದೆ. 

ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ಬ್ಲಾಗ್ ನಲ್ಲಿ ಬರೆದು ಹಂಚಿಕೊಳ್ಳುತ್ತಿದ್ದ ದಾಫ್ನೆ ಓದುಗ ವಲಯದಲ್ಲಿ ಹೆಚ್ಚು ಚಿರಪರಿಚಿತರಾಗಿದ್ದರು. ಇತ್ತೀಚೆಗೆ ಅವರು ಮಾಲ್ಟಾ ಪ್ರಧಾನಿ ಜೋಸೆಫ್ ಮಸ್ಕಟ್ ಮತ್ತು ಅವರ ಇಬ್ಬರು ಸಹಚರರ ವಿರುದ್ಧ ಅಜೆರ್ಬೈಜಾನ್ ಸರ್ಕಾರದೊಂದಿಗೆ ಪಾಸ್ ಪೋರ್ಟ್ ಮಾರಾಟ ಮತ್ತು ಹಣ ಪಾವತಿ ವಿಷಯದಲ್ಲಿ ನಡೆದ ಭ್ರಷ್ಟಾಚಾರ ಸಂಬಂಧ ಬರೆದಿದ್ದರು. 

ದಾಫ್ನೆ ಹತ್ಯೆಯ ಹೊಣೆಯನ್ನು ಇದುವರೆಗೆ ಯಾವುದೇ ವ್ಯಕ್ತಿ ಅಥವಾ ಸಂಘಟನೆ ಹೊತ್ತುಕೊಂಡಿಲ್ಲ. ದಾಫ್ನೆ ನಿಧನವನ್ನು ದೇಶಾದ್ಯಂತ ಸಾರ್ವಜನಿಕರು ಖಂಡಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಶಾಂತಿ ಕಾಪಾಡುವಂತೆ ದೇಶದ ರಾಷ್ಟ್ರಪತಿ ಮೇರಿ-ಲೂಯಿಸ್ ಕೊಲೆರೊ ಪ್ರೀಕಾ ಕರೆ ನೀಡಿದ್ದಾರೆ.

ಈ ವರ್ಷದ ಬೇಸಿಗೆಯಲ್ಲಿ ಮಾಲ್ಟಾದಲ್ಲಿ ನಡೆದ ಸಾಮಾನ್ಯ ಚುನಾವಣೆಯಲ್ಲಿ ಜೋಸೆಫ್ ಮಸ್ಕಟ್ ಅವರ ಲೇಬರ್ ಪಾರ್ಟಿ ಭಾರೀ ಮತಗಳಿಂದ ಗೆಲುವು ಸಾಧಿಸಿತ್ತು. ಈ ಸಂದರ್ಭದಲ್ಲಿ ಸರ್ಕಾರದೊಳಗಿನ ಅನೇಕ ಹಗರಣ, ಭ್ರಷ್ಟಾಚಾರಗಳನ್ನು ದಾಫ್ನೆ ಹೊರಗೆಳೆಯುತ್ತಿದ್ದರು. 2013ರಿಂದ ಮಾಲ್ಟಾದ ಪ್ರಧಾನಿಯಾಗಿರುವ ಜೋಸೆಫ್ ಅವರ ಪತ್ನಿಯ ಹೆಸರು ಪನಾಮಾ ಪೇಪರ್ಸ್ ಸೋರಿಕೆ ಹಗರಣದಲ್ಲಿ ಕೇಳಿ ಬಂದಾಗ ಸರ್ಕಾರವನ್ನು ವಿಸರ್ಜಿಸಿ ಒಂದು ವರ್ಷ ಮೊದಲೇ ಚುನಾವಣೆ ನಡೆಸಿದ್ದರು. 


ಕಾರ್ ಬಾಂಬ್ ಸ್ಫೋಟದಲ್ಲಿ ಪಕ್ಕದ ಗದ್ದೆಗೆ ಹೋಗಿ ಬಿದ್ದಿರುವ ಕಾರು ಮತ್ತು ಅವಶೇಷವನ್ನು ಪರೀಕ್ಷಿಸುತ್ತಿರುವ ವಿಧಿ ವಿಜ್ಞಾನ ತಜ್ಞರ ತಂಡ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com