ಬಿಜೆಪಿ-ಆರ್ಎಸ್ಎಸ್ ಭಾರತವನ್ನು ವಿಭಜಿಸುತ್ತಿದೆ: ಜರ್ಮನಿಯಲ್ಲಿ ರಾಹುಲ್ ಗಾಂಧಿ
ಬರ್ಲಿನ್ : ಕಾಂಗ್ರೆಸ್ ಪಕ್ಷ ಜನರನ್ನು ಒಗ್ಗೂಡಿಸುತ್ತಿದ್ದರೆ ಬಿಜೆಪಿ ಮತ್ತು ಆರ್ ಎಸ್ ಎಸ್ ದೇಶ ವಿಭಜಿಸುವ ಮೂಲಕ ದ್ವೇಷವನ್ನು ಹರಡುತ್ತಿವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಭಾರತೀಯ ಸಾಗರೋತ್ತರ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವೈವಿಧ್ಯತೆಯಲ್ಲಿ ಏಕತೆ ಕಾಂಗ್ರೆಸ್ ಚಿಂತನೆ ಗುರುನಾನಕ್ ದೇವ್ ಅವರ ಕಾಲದಲ್ಲಿ ಬಂದಿತ್ತು ಎಂದರು.
ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಭಾರತದಲ್ಲಿ ದ್ವೇಷವನ್ನು ಹರಡುತ್ತಿದೆ. ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಯುವಜನಾಂಗಕ್ಕೆ ಉದ್ಯೋಗ ಇಲ್ಲದಂತಾಗಿದ್ದು, ಭವಿಷ್ಯ ಆತಂತ್ರದಿಂದ ಕೂಡಿದೆ ಎಂದು ಆರೋಪಿಸಿದರು.
ಕಾಂಗ್ರೆಸ್ ವಿವಿಧತೆಯಲ್ಲಿ ಏಕತೆ ಎಂಬುದರಲ್ಲಿ ನಂಬಿಕೆ ಇಟ್ಟುಕೊಂಡಿದ್ದು, ಎಲ್ಲಾರ ಒಳಿತಿಗಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ. ಬಿಜೆಪಿ ಸರ್ಕಾರ ಇದಕ್ಕೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ. ಭಾರತ ಚೀನಾದೊಂದಿಗೆ ಪೈಪೋಟಿಗೆ ಇಳಿದಿದೆ. ಉದ್ಯೋಗಕ್ಕಾಗಿ ಅಲ್ಲಿಗೆ ಹೋಗಬೇಕು ಇಲ್ಲವೇ ಇಲ್ಲಿಗೆ ಬರಬೇಕು ಎಂದರು.
ಚೀನಾ 24 ಗಂಟೆಯಲ್ಲಿ 50 ಸಾವಿರ ಉದ್ಯೋಗ ನೀಡುತ್ತಿದ್ದರೆ , ಭಾರತ ಒಂದು ಗಂಟೆಯಲ್ಲಿ ಕೇವಲ 450 ಜನರಿಗೆ ಉದ್ಯೋಗ ನೀಡುತ್ತಿದೆ. ಆದರೆ, ಬಿಜೆಪಿ ಎಲ್ಲೆಡೆ ದ್ವೇಷ ಹರಡುವ ಮೂಲಕ ದೇಶದ ಸಂಸ್ಕೃತಿಯನ್ನು ಹಾಳುಮಾಡುತ್ತದೆ ಎಂದು ಆರೋಪಿಸಿದ ಅವರು, ಭಾರತವನ್ನು ಪ್ರಗತಿಪಥದಲ್ಲಿ ಕೊಂಡೊಯ್ಯಬೇಕಾಗಿದ್ದು, ಜರ್ಮನಿಯಲ್ಲಿರುವ ಭಾರತೀಯರು ಕಾಂಗ್ರೆಸ್ ಪಕ್ಷ ಬೆಂಬಲಿಸುವಂತೆ ರಾಹುಲ್ ಗಾಂಧಿ ಮನವಿ ಮಾಡಿಕೊಂಡರು.
ರಾಹುಲ್ ಗಾಂಧಿ ಎರಡು ದಿನ ಜರ್ಮನಿ ಪ್ರವಾಸ ಮುಗಿಸಿದ್ದು, ಈಗ ಇಂಗ್ಲೆಂಡ್ ಭೇಟಿ ನೀಡುತ್ತಿದ್ದಾರೆ. ಲಂಡನ್ ಸ್ಕೂಲ್ ಆಪ್ ಎಕಾನಾಮಿಕ್ಸ್ ನಲ್ಲಿ ವಿದ್ಯಾರ್ಥಿಗಳೊಂದಿಗೆ ರಾಹುಲ್ ಗಾಂಧಿ ಸಂವಾದ ನಡೆಸಲಿದ್ದಾರೆ.