ಇಸ್ಲಾಮಾಬಾದ್: ಪಾಕಿಸ್ತಾನ 2008ರ ಮುಂಬೈ ದಾಳಿ ಮಾಸ್ಟರ್ ಮೈಂಡ್ ಜಮಾತ್ -ಉದ್-ದವಾ ಮುಖ್ಯಸ್ಥ ಹಫೀಜ್ ಸಯೀದ್ನನ್ನು ಭಯೋತ್ಪಾದಕ ಎಂದು ಒಪ್ಪಿಕೊಂಡಿದೆ. ಇದರೊಂದಿಗೇ ವಿಶ್ವಸಂಸ್ಥೆಯ ಪಟ್ಟಿಮಾಡಿದ ಭಯೋತ್ಪಾದಕರನ್ನು ನಿಷೇಧಿಸುವ ಸಲುವಾಗಿ ಅದರ ಭಯೋತ್ಪಾದನಾ ವಿರೋಧಿ ಕಾನೂನುಗಳನ್ನು ಸದ್ದಿಲ್ಲದೆ ತಿದ್ದುಪಡಿ ಮಾಡಿದೆ.
ಹಫೀಜ್ ಸಯೀದ್ನ ಜಮಾತ್ -ಉದ್-ದವಾ(ಜೆಯುಡಿ) ಸಂಸ್ಥೆಗಳ ಕೇಂದ್ರ ಕಚೇರಿಯ ಸುತ್ತಲು ಭದ್ರತೆಗಾಗಿ ಅಳವಡಿಸಿದ್ದ ಬ್ಯಾರಿಕೇಡ್ಗಳನ್ನು ಲಾಹೋರ್ ಪೊಲೀಸರು ತೆರವುಗೊಳಿಸಿದ್ದು ಸರ್ವೋಚ್ಚ ನ್ಯಾಯಾಲಯ ಆದೇಶದಂತೆ ಈ ಕಾರ್ಯಾಚರಣೆ ನಡೆದಿದೆ
ಶುಕ್ರವಾರ ಅಧ್ಯಕ್ಷ ಮಮ್ನೂನ್ ಹುಸೇನ್ ಈ ತಿದ್ದುಪಡಿಯನ್ನು ಮಾಡಿದ್ದರು, ಸೋಮವಾರ ಇದನ್ನು ಕಾನೂನು ಸಚಿವಾಲಯ ಅಧಿಕೃತವಾಗಿ ಪ್ರಕಟಿಸಿತ್ತು.. "ತಿದ್ದುಪಡಿಯಂತೆ ವಿಶ್ವಸಂಸ್ಥೆ ಪಟ್ಟಿ ಮಾಡಿದ ವ್ಯಕ್ತಿಗಳು ಮತ್ತು ಸಂಘಟನೆಗಳು ಈಗ ಪಾಕಿಸ್ತಾನಿ ಕಾನೂನು ಪ್ರಕಾರ ನಿಷೇಧಕ್ಕೆ ಒಳಗಾಗಲಿದೆ" ಹಿರಿಯ ಸರ್ಕಾರಿ ಅಧಿಕಾರಿಗಳು ತಿಳಿಸಿದ್ದಾರೆ.
ವಿಶ್ವಸಂಸ್ಥೆ ಇದಾಗಲೇ ನಿಷೇಧಿಸಿರುವ ಸಂಸ್ಥೆಗಳು ಹಾಗೂ ವ್ಯಕ್ತಿಗಳ ಪಟ್ಟಿ ಇರುವ ಆದೇಶಕ್ಕೆ ಪಾಕಿಸ್ತಾನ ಅಧ್ಯಕ್ಷರು ಇಂದು ಸಹಿ ಮಾಡಿದ್ದು ಭಯೋತ್ಪಾದನೆ ನಿಗ್ರಹ ಕಾಯ್ದೆ 1997ರ ಅನ್ವಯ ಲಷ್ಕರ್–ಎ–ತೈಯಬಾ, ಜಮಾತ್ -ಉದ್-ದವಾ, ಹರ್ಕತ್–ಉಲ್ ಮುಜಾಹಿದ್ದೀನ್ ಸೇರಿ ಒಟ್ಟು 27 ಸಂಘಟನೆಗಳು ಬರುತ್ತದೆ.
166 ಮಂದಿಯ ಹತ್ಯೆಗೆ ಕಾರಣವಾದ ಮುಂಬೈ ದಾಲಿಯ ರೂವಾರಿ ಕಳೆದ ನವೆಂಬರ್ ನಲ್ಲಿ ಲಾಹೋರ್ ನಗರದಲ್ಲಿ ಗೃಹ ಬಂಧನದಲ್ಲಿದ್ದ ಬಿಡುಗಡೆಯಾದ ಹಫೀಜ್ ಸಯೀದ್ ವಿರುದ್ಧ ಕ್ರಮ ಕೈಗೊಳ್ಳಲು ಅಮೆರಿಕಾ ಪಾಕಿಸ್ತಾನದ ಮೇಲೆ ತೀವ್ರ ಒತ್ತಡ ಹೇರಿತ್ತು.