ಪಾಕಿಸ್ತಾನದ ತವರು ಜಿಲ್ಲೆ ಸ್ವಾತ್ ಕಣಿವೆಗೆ ಆಗಮಿಸಿದ ಮಲಾಲಾ ಯೂಸಫ್ ಝಾಯಿ

ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸಫ್ ಝೈ,ಐದು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನದ ತವರು ಜಿಲ್ಲೆ ಸ್ವಾತ್ ಕಣಿವೆಗೆ ಭೇಟಿ ನೀಡಿದ್ದಾರೆ.
ಮಲಾಲಾ
ಮಲಾಲಾ

ಇಸ್ಲಾಮಾಬಾದ್  :  ತಾಲಿಬಾನ್ ಉಗ್ರರ ದಾಳಿಯಿಂದ ತಲೆಗೆ ತೀವ್ರ ಗಾಯವಾಗಿ ಲಂಡನ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ  ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸಫ್  ಝಾಯಿ, ಐದು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಪಾಕಿಸ್ತಾನದ  ತವರು ಜಿಲ್ಲೆ ಸ್ವಾತ್ ಕಣಿವೆಗೆ ಭೇಟಿ ನೀಡಿದ್ದಾರೆ.

ಬಿಗಿ ಭದ್ರತೆ ನಡುವೆ ತಮ್ಮ ಪೋಷಕರೊಂದಿಗೆ ಸ್ವಾತ್ ಜಿಲ್ಲೆಯ ಖೈಬರ್ ಪಕ್ತುಂಕ್ವಾ ಪ್ರದೇಶಕ್ಕೆ ಒಂದು ದಿನಗಳ ಭೇಟಿ ನೀಡಿದ್ದು, ಸರ್ಕ್ಯೂಟ್  ಹೌಸ್ ನಲ್ಲಿ ವಾಸ್ತವ್ಯಕ್ಕೆ ವ್ಯವಸ್ತೆ ಮಾಡಲಾಗಿದೆ.ಸರ್ಕ್ಯೂಟ್  ಹೌಸ್ ಸುತ್ತಮುತ್ತ  ಪೊಲೀಸರನ್ನು ನಿಯೋಜಿಸಲಾಗಿದೆ.

ಆಕೆಯ ಪೂರ್ವಿಕರು ನೆಲೆಸಿದ್ದ ಮಿಂಗೊರಾದ ಮಾಕನ್ ಬೇಗ್ ಗೂ ಭೇಟಿ ನೀಡಲಿದ್ದು, ಸಾಂಗ್ಲಾ ಜಿಲ್ಲೆಯಲ್ಲಿ ಬಾಲಕಿಯರ ಶಾಲೆಯನ್ನು ಮಲಾಲಾ ಉದ್ಘಾಟಿಸಲಿದ್ದಾರೆ.

ವಿದ್ಯಾಭ್ಯಾಸ ಪೂರ್ಣಗೊಂಡ ನಂತರ ಪಾಕಿಸ್ತಾನಕ್ಕೆ ಮರಳಿ ಅಲ್ಲಿಯೇ ಶಾಶ್ವತವಾಗಿ ವಾಸ್ತವ್ಯ ಹೂಡಲು ಯೋಚಿಸಿರುವುದಾಗಿ ನಿನ್ನೆ ಜಿಯೋ ನ್ಯೂಸ್ ಗೆ ನೀಡಿದ್ದ ಸಂದರ್ಶನದಲ್ಲಿ ಮಲಾಲಾ ತಿಳಿಸಿದ್ದರು.

ಪಾಕಿಸ್ತಾನ ತನ್ನ ದೇಶವಾಗಿದ್ದು, ಇತರರು ಹೊಂದಿರುವ ಎಲ್ಲಾ ಹಕ್ಕುಗಳನ್ನು ತಾನೂ ಹೊಂದಿದ್ದೇನೆ.ಇಲ್ಲಿನ ಬಡ ಬಾಲಕಿಯರು ಉನ್ನತ  ಶಿಕ್ಷಣ ಪಡೆಯಬೇಕೆಂಬುದು ತಮ್ಮ ಕನಸಾಗಿದ್ದು, ಆ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವುದಾಗಿ ಹೇಳಿದ್ದರು.

20 ವರ್ಷದ ಮಲಾಲಾ, 2012ರಲ್ಲಿ ಸ್ವಾತ್ ಕಣಿವೆಯಲ್ಲಿ  ಮಹಿಳೆಯರಿಗೆ ಶಿಕ್ಷಣ ಕುರಿತ ಪ್ರಚಾರಾಂದೋಲನದಲ್ಲಿ ಭಾಗಿಯಾದ ಸಂದರ್ಭದಲ್ಲಿ ಗುಂಡಿನ ದಾಳಿ ನಡೆಸಲಾಗಿತ್ತು. ನಂತರ ಹೆಲಿಕಾಪ್ಟರ್ ಮೂಲಕ ಬೇರೆಡೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿತ್ತು. ಕೋಮಾ ಸ್ಥಿತಿಗೆ ತೆರಳಿದ್ದ  ಮಲಾಲಾ ಅವರಿಗೆ ಗ್ರೇಟ್ ಬ್ರಿಟನ್ ನಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಆಕೆ ಬದುಕುಳಿದ್ದರೆ ಮತ್ತೆ ದಾಳಿ ನಡೆಸುವುದಾಗಿ ತಾಲಿಬಾನ್ ಉಗ್ರ ಸಂಘಟನೆ ಎಚ್ಚರಿಕೆ ನೀಡಿತ್ತು . ಶಿಕ್ಷಣ ಕ್ಷೇತ್ರದಲ್ಲಿನ ಆಕೆಯ ಸಾಧನೆ ಪರಿಗಣಿಸಿ 17 ನೇ ವಯಸ್ಸಿನಲ್ಲಿಯೇ ಜಗತ್ತಿನ ಅತ್ಯುನ್ನತ ಪ್ರಶಸ್ತಿಯಾದ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಮಲಾಲಾ ಭಾಜನರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com