ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನವನ್ನು ಹಿಗ್ಗಾಮುಗ್ಗಾ ಝಾಡಿಸಿದ ಸುಷ್ಮಾ ಸ್ವರಾಜ್

ವಿಶ್ವಸಂಸ್ಥೆಯ 73 ನೇ ಸಾಮಾನ್ಯ ಸಭೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಾತನಾಡಿದ್ದು, ನಿರಂತರ ಎಚ್ಚರಿಕೆಯ ಹೊರತಾಗಿಯೂ ಮೊಂಡುತನ ಪ್ರದರ್ಶಿಸುತ್ತಿರುವ ಪಾಕಿಸ್ತಾನವನ್ನು ಹಿಗ್ಗಾ ಮುಗ್ಗಾ ಝಾಡಿಸಿದ್ದಾರೆ.
ಸುಷ್ಮಾ ಸ್ವರಾಜ್
ಸುಷ್ಮಾ ಸ್ವರಾಜ್
ವಿಶ್ವಸಂಸ್ಥೆಯ 73 ನೇ ಸಾಮಾನ್ಯ ಸಭೆಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮಾತನಾಡಿದ್ದು, ನಿರಂತರ ಎಚ್ಚರಿಕೆಯ ಹೊರತಾಗಿಯೂ ಮೊಂಡುತನ ಪ್ರದರ್ಶಿಸುತ್ತಿರುವ ಪಾಕಿಸ್ತಾನವನ್ನು ಹಿಗ್ಗಾ ಮುಗ್ಗಾ ಝಾಡಿಸಿದ್ದಾರೆ. 
ಭಯೋತ್ಪಾದನೆ, ಹವಾಮಾನ ಬದಲಾವಣೆ, ಸಮರ್ಥನೀಯ ಅಭಿವೃದ್ಧಿ ಗುರಿಗಳು ಮತ್ತು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಆಗಬೇಕಿರುವ ಬದಲಾವಣೆ ಬಗ್ಗೆ ಮಾತನಾಡಿರುವ  ಸುಷ್ಮಾ ಸ್ವರಾಜ್, ವಸುದೈವ ಕುಟುಂಬಕಂ  ಎಂಬುದು ಭಾರತದ ತತ್ವ. ಇಡಿ ವಿಶ್ವ ಒಂದೇ ಕುಟುಂಬವಿದ್ದಂತೆ ಹಾಗೂ ಆ ಕುಟುಂಬದಲ್ಲಿ ಪರಸ್ಪರ ಸಂವೇದನೆಯಿರಬೇಕು ಎಂದು ಹೇಳಿದ್ದಾರೆ. 
ಪಾಕಿಸ್ತಾನವನ್ನು ತಮ್ಮ ಭಾಷಣದಲ್ಲಿ ತೀವ್ರ ತರಾಟೆಗೆ ತೆಗೆದುಕೊಂಡಿರುವ ಸುಷ್ಮಾ ಸ್ವರಾಜ್, ಪಾಕಿಸ್ತಾನ ಒಂದೆಡೆ ಭಾರತದೊಂದಿಗೆ ಮಾತುಕತೆ ನಡೆಸಬೇಕು ಎನ್ನುತ್ತಿದೆ. ಮತ್ತೊಂದೆಡೆ ಗಡಿ ಪ್ರದೇಶದಲ್ಲಿ ಭಯೋತ್ಪಾದನೆಯನ್ನು ಬೆಂಬಲಿಸುತ್ತಿದೆ. ನಮ್ಮ ನೆರೆ ರಾಷ್ಟ್ರ ಭಯೋತ್ಪಾದನೆಯನ್ನು ಹರಡುವ ಹಾಗೂ ಅದರಿಂದ ಉಂಟಾಗುವ ಪರಿಣಾಮಗಳನ್ನು ನಿರಾಕರಿಸುವ ಕೌಶಲ್ಯವನ್ನು ಹೊಂದಿದೆ. ಇದಕ್ಕೆ ಸ್ಪಷ್ಟ ಉದಾಹರಣೆಯೆಂದರೆ ಒಸಾಮ ಬಿನ್ ಲ್ಯಾಡನ್ ಪಾಕಿಸ್ತಾನದಲ್ಲಿ ಪತ್ತೆಯಾಗಿದ್ದು ಎಂದಿದ್ದಾರೆ. 
ನ್ಯೂಯಾರ್ಕ್ ನಲ್ಲಿ ನಡೆದ 9/11 ರ ಘಟನೆ, ಮುಂಬೈ ನಲ್ಲಿ ನಡೆದ 26/11 ಶಾಂತಿಯ ನಿರೀಕ್ಷೆಯನ್ನೇ ಹಾಳುಗೆಡವಿದ್ದವು. ಭಾರತ ಭಯೋತ್ಪಾದನೆಯ ಸಂತ್ರಸ್ತ ರಾಷ್ಟ್ರವಾಗಿದ್ದು, ಭಾರತಕ್ಕೆ ನೆರೆ ರಾಷ್ಟ್ರದಿಂದಲೇ   ಭಯೋತ್ಪಾದನೆಯ ಅಪಾಯ ಎದುರಾಗಿದೆ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ. 
ಇದೇ ವೇಳೆ ಭಾರತದ ಸಾಧನೆಗಳ ಬಗ್ಗೆಯೂ ಮಾತನಾಡಿರುವ ಸುಷ್ಮಾ ಸ್ವರಾಜ್, ಭಾರತ ವಿಶ್ವಸಂಸ್ಥೆಯ ಅಜೆಂಡಾಗಳು ವಿಫಲವಾಗುವುದಕ್ಕೆ ಎಂದಿಗೂ ಬಿಡುವುದಿಲ್ಲ, 2030 ಕ್ಕೆ ನಿಗದಿಯಾಗಿರುವ ಗುರಿಯನ್ನು ತಲುಪಲು ಪ್ರಧಾನಿ ನರೇಂದ್ರ ಮೋದಿ ಕೆಲಸಮಾಡುತ್ತಿರುವ ವೇಗಗತಿ ಗುರಿಯನ್ನು ನಿಗದಿಗಿಂತಲೂ ಮುಂಚೆಯೇ ಪೂರ್ಣಗೊಳಿಸುವ ಸೂಚನೆ ನೀಡುತ್ತಿದೆ. ನಾವು ಗುರಿಯನ್ನು ತಲುಪುವುದಕ್ಕೆ ಸುಸಜ್ಜಿತವಾಗಿದ್ದೇವೆ ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ. 
ಇತ್ತೀಚೆಗಷ್ಟೇ ಎದುರಾದ ಇಂಡೋನೇಷ್ಯಾ ಭೂಕಂಪದ ಬಗ್ಗೆಯೂ ಸುಷ್ಮಾ ಸ್ವರಾಜ್ ಮಾತನಾಡಿದ್ದು, ಸಂತ್ರಸ್ತ ಜನತೆಗೆ, ಸಾವು ನೋವುಗಳಿಗೆ ಭಾರತದ ಪರವಾಗಿ ಸಂತಾಪ ಸೂಚಿಸುವುದಾಗಿ ಹೇಳಿದ್ದು ಭಾರತದಿಂದ ಅಗತ್ಯ ನೆರವು ನೀಡುವುದಾಗಿ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com