'ಜಮ್ಮು-ಕಾಶ್ಮೀರ ಭಾರತದ ರಾಜ್ಯ': ಪಾಕ್ ವಿದೇಶಾಂಗ ಸಚಿವ
ಜಿನಿವಾ: ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ ಕೊನೆಗೂ ಜಮ್ಮು- ಕಾಶ್ಮೀರ ಭಾರತದ ರಾಜ್ಯ ಎಂದು ಹೇಳಿದ್ದಾರೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ಅಧಿವೇಶನದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮ್ಮು- ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ ಅಲ್ಲಿ ಜನಜೀವನ ಸಹಜ ಸ್ಥಿತಿಯತ್ತ ಮರಳಿದೆ ಎಂದು ಅಂತಾರಾಷ್ಟ್ರೀಯ ಸಮುದಾಯದ ಮುಂದೆ ಬಿಂಬಿಸಿಕೊಳ್ಳಲು ಭಾರತ ಯತ್ನಿಸುತ್ತಿದೆ. ಒಂದು ವೇಳೆ ಜನಜೀವನ ಸಹಜ ಸ್ಥಿತಿಯತ್ತ ಮರಳಿದರೆ ಅಂತಾರಾಷ್ಟ್ರೀಯ, ಸ್ಥಳೀಯ ಮಾಧ್ಯಮಗಳನ್ನು ಏಕೆ ನಿರ್ಬಂಧಿಸಲಾಗಿದೆ ಎಂದರು.
ಭಾರತದ ರಾಜ್ಯವಾಗಿರುವ ಜಮ್ಮು- ಕಾಶ್ಮೀರದಲ್ಲಿನ ವಾಸ್ತವ ಸ್ಥಿತಿ ಅರಿಯಲು ಅಂತಾರಾಷ್ಟ್ರೀಯ ಸಂಸ್ಥೆಗಳು, ಸ್ವಯಂ ಸೇವಾ ಸಂಸ್ಥೆಗಳು, ನಾಗರಿಕ ಸಂಘಟನೆಗಳಿಗೆ ಏಕೆ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಪ್ರಶ್ನಿಸಿದರು.
ಈವರೆಗೂ ಕೂಡಾ ಪಾಕಿಸ್ತಾನ ತನ್ನೆಲ್ಲಾ ಅಧಿಕೃತ ಸಂವಹಾನದಲ್ಲಿ ಜಮ್ಮು- ಕಾಶ್ಮೀರವನ್ನು ಭಾರತದ ಆಡಳಿತವಿರುವ ಕಾಶ್ಮೀರ ಎಂದೇ ಉಲ್ಲೇಖಿಸುತ್ತಿದೆ.
ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಮಿತಿಯ ಅಧಿವೇಶದ ನಂತರ ಖುರೇಷಿ ಈ ರೀತಿಯ ಹೇಳಿಕೆ ನೀಡಿದ್ದಾರೆ. ಭಾರತ 370 ವಿಧಿ ರದ್ದುಗೊಳಿಸಿದ ನಂತರ ಕಾಶ್ಮೀರದಲ್ಲಿ ಪರಿಸ್ಥಿತಿ ಹದಗೆಟ್ಟಿದೆ ಎಂದು ನಕಾರಾತ್ಮಕವಾಗಿ ವಿವರಿಸಿದ್ದಾರೆ.
ವಿಶೇಷವೆಂದರೆ ಖುರೇಷಿ ಅಲ್ಲಿ ಭಾಷಣ ಮಾಡುತ್ತಿದ್ದರೆ ಪಾಕಿಸ್ತಾನದಲ್ಲಿ ಮಾನವ ಹಕ್ಕು ಉಲ್ಲಂಘನೆ ಹೆಚ್ಚಾಗುತ್ತಿದೆ ಎಂದು ಆರೋಪಿಸಿ ವಿಶ್ವಸಂಸ್ಥೆ ಕೇಂದ್ರ ಕಚೇರಿ ಎದುರು ಪ್ರತಿಭಟನೆ ನಡೆಯುತಿತ್ತು
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ