ಜಮ್ಮು-ಕಾಶ್ಮೀರ ಅತಿ ದೊಡ್ಡ ಜೈಲು- ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಹೇಳಿಕೆ; ಪ್ರತಿಕ್ರಿಯೆ ನೀಡಲು ಭಾರತದ ಸಿದ್ಧತೆ
ಜಮ್ಮು-ಕಾಶ್ಮೀರ ಅತಿ ದೊಡ್ಡ ಜೈಲು- ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಹೇಳಿಕೆ; ಪ್ರತಿಕ್ರಿಯೆ ನೀಡಲು ಭಾರತದ ಸಿದ್ಧತೆ

ಕಾಶ್ಮೀರದ ಪರಿಸ್ಥಿತಿ ಕುರಿತು ಅಂತಾರಾಷ್ಟ್ರೀಯ ಮಟ್ಟದ ತನಿಖೆಗೆ  ಪಾಕ್ ಆಗ್ರಹ 

ಜಮ್ಮು-ಕಾಶ್ಮೀರದ ವಿಷಯವನ್ನು ಪಾಕಿಸ್ತಾನ ಸೆ.10 ರಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗ (ಯುಎನ್ ಹೆಚ್ ಆರ್ ಸಿ)ಯಲ್ಲಿ ಪ್ರಸ್ತಾಪಿಸಿದ್ದು, ನಿರ್ಬಂಧ ವಿಧಿಸಿರುವುದನ್ನೂ ಉಲ್ಲೇಖಿಸಿದೆ. 
Published on

ಜೆನೆವಾ: ಜಮ್ಮು-ಕಾಶ್ಮೀರದ ವಿಷಯವನ್ನು ಪಾಕಿಸ್ತಾನ ಸೆ.10 ರಂದು ವಿಶ್ವಸಂಸ್ಥೆ ಮಾನವ ಹಕ್ಕುಗಳ ಆಯೋಗ (ಯುಎನ್ ಹೆಚ್ ಆರ್ ಸಿ)ಯಲ್ಲಿ ಪ್ರಸ್ತಾಪಿಸಿದ್ದು, ನಿರ್ಬಂಧ ವಿಧಿಸಿರುವುದನ್ನೂ ಉಲ್ಲೇಖಿಸಿದ್ದು ಅಲ್ಲಿನ ಪರಿಸ್ಥಿತಿ ಬಗ್ಗೆ ಅಂತಾರಾಷ್ಟ್ರೀಯ ಮಟ್ಟದ ತನಿಖೆಗೆ ಪಾಕಿಸ್ತಾನ ಆಗ್ರಹಿಸಿದೆ.  

ವಿಶ್ವಸಂಸ್ಥೆ ಮಾನವ ಹಕ್ಕುಗಳ ಪರಿಷತ್ ನ 42 ಅಧಿವೇಶನದಲ್ಲಿ ಭಾಗವಹಿಸಿ ಮಾತನಾಡಿರುವ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಶಿ, ಕಾಶ್ಮೀರಕ್ಕೆ ಸಂಬಂಧಿಸಿದಂತೆ ತನ್ನ ನಿಷ್ಕ್ರಿಯತೆಯಿಂದ ವಿಶ್ವಸಂಸ್ಥೆ ಜಾಗತಿಕ ಮಟ್ಟದಲ್ಲಿ ಮುಜುಗರಕ್ಕೀಡಾಗಬಾರದು ಎಂದು ಹೇಳಿದ್ದಾರೆ. 

ಕಾಶ್ಮೀರ ಪರಿಸ್ಥಿತಿ ಕುರಿತು ವಿಶ್ವಸಂಸ್ಥೆ ಮಾನವಹಕ್ಕುಗಳ ಸಂಸ್ಥೆ ಸಂಬಂಧವೇ ಇಲ್ಲದಂತೆ ಇರಬಾರದು, ಕಾಶ್ಮೀರ ಜನತೆಗೆ ನ್ಯಾಯ ಒದಗಿಸುವುದಕ್ಕಾಗಿ ನಾನು ವಿಶ್ವಸಂಸ್ಥೆ ಕದ ತಟ್ಟಿದ್ದೇನೆ ಎಂದು ಖುರೇಷಿ ಹೇಳಿದ್ದಾರೆ.
 
ಪೆಲೆಟ್ ಗನ್ ಗಳ ಬಳಕೆಯನ್ನು ತಕ್ಷಣವೇ ನಿಲ್ಲಿಸಬೇಕು, ತಕ್ಷಣವೇ ಕರ್ಫ್ಯೂ ತೆಗೆಯಬೇಕು, ಮೂಲಭೂತ ಹಕ್ಕುಗಳನ್ನು ಮರುಸ್ಥಾಪನೆ ಮಾಡಲು ಭಾರತಕ್ಕೆ ನಿರ್ದೇಶನ ನೀಡಬೇಕೆಂದು ಖುರೇಷಿ ವಿಶ್ವಸಂಸ್ಥೆಗೆ ಮನವಿ ಮಾಡಿದ್ದಾರೆ. 

ಇದೇ ವೇಳೆ ಭಾರತದ ವಿರುದ್ಧ ಆರೋಪ ಮಾಡಿರುವ ಪಾಕಿಸ್ತಾನ ಸಚಿವ ಶಾ ಮೆಹ್ಮೂದ್ ಖುರೇಷಿ,  ಮೂಲ ಸೌಲಭ್ಯಗಳನ್ನೂ ಜನತೆಗೆ ನಿರಾಕರಿಸಲಾಗುತ್ತಿದ್ದು, ಜಮ್ಮು-ಕಾಶ್ಮೀರವನ್ನು ಅತಿ ದೊಡ್ಡ ಜೈಲನ್ನಾಗಿ ಪರಿವರ್ತಿಸಲಾಗಿದೆ ಎಂದು ಆರೋಪಿಸಿದ್ದಾರೆ. 

ಜಮ್ಮು-ಕಾಶ್ಮೀರದಲ್ಲಿ ರಾಜಕೀಯ ನಾಯಕರನ್ನು ಕಳೆದ 6 ವಾರಗಳಿಂದ ಬಂಧಿಸಿಡಲಾಗಿದೆ ಎಂದು ಖುರೇಶಿ ಆರೋಪಿಸಿದ್ದರು. ಜೀವ ಹಾನಿ ತಡೆಯುವುದಕ್ಕೆ ಜಮ್ಮು-ಕಾಶ್ಮೀರದಲ್ಲಿ ನಿರ್ಬಂಧ ವಿಧಿಸಲಾಗಿದೆ ಎಂದು ಕೇಂದ್ರ ಸರ್ಕಾರ ಈಗಾಗಲೇ ಸ್ಪಷ್ಟನೆ ನೀಡಿದೆ. 

ಇನ್ನು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನಕ್ಕೆ ಜಾಗತಿಕ ಮಟ್ಟದಲ್ಲಿ ಯಾವೊಂದು ರಾಷ್ಟ್ರದ ಬೆಂಬಲವೂ ದೊರೆತಿಲ್ಲವಾದರೂ ವಿಶ್ವಸಂಸ್ಥೆಗೆ ಈ ವಿಷಯವನ್ನು ತೆಗೆದುಕೊಂಡು ಹೋಗಿದೆ. 

ಕಾಶ್ಮೀರದ ಆರ್ಟಿಕಲ್ 370 ರದ್ದತಿ ಸಂಪೂರ್ಣ ಆಂತರಿಕ ವಿಚಾರ ಎಂದು ಜಾಗತಿಕ ಸಮುದಾಯಕ್ಕೆ ಮನವರಿಕೆ ಮಾಡಿಕೊಟ್ಟಿರುವ ಭಾರತ ಈಗ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆಯಲ್ಲಿ ಸೂಕ್ತ ಪ್ರತ್ಯುತ್ತರ ನೀಡಲು ಸಿದ್ಧತೆ ನಡೆಸಿಕೊಂಡಿದೆ. ಇದೇ ವೇಳೆ ಜಮ್ಮು-ಕಾಶ್ಮೀರದಲ್ಲಿ ಪಾಕಿಸ್ತಾನದ ಕುಮ್ಮಕ್ಕಿನಿಂದ ನಡೆಯುತ್ತಿರುವ ಭಯೋತ್ಪಾದನೆ, ಇದರಿಂದ ಅಭಿವೃದ್ಧಿಗೆ ಹಾನಿಯಾಗುತ್ತಿರುವುದರ ಬಗ್ಗೆಯೂ ಭಾರತ ವಿಶ್ವಸಂಸ್ಥೆಯಲ್ಲಿ ಪ್ರಸ್ತಾಪಿಸಲಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com