ಕಾಬೂಲ್: ವಾರದ ಹಿಂದೆ ಉಗ್ರ ಸಂಘಟನೆ ತಾಲಿಬಾನ್ ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ನನ್ನು ವಶಕ್ಕೆ ಪಡೆದ ನಂತರ ಅಲ್ಲಿನ ಸರ್ಕಾರ ಪತನಗೊಂಡು ಅರಾಜಕತೆ, ಅಸ್ಥಿರತೆ ಉಂಟಾಗಿರುವಂತೆಯೇ, ಮುಂಬರುವ ಸರ್ಕಾರವನ್ನು ಧಾರ್ಮಿಕ ವಿದ್ವಾಂಸರು ಮುನ್ನಡೆಸಲಿದ್ದಾರೆ ಎಂದು ತಾಲಿಬಾನ್ ಹೇಳಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ.
ಕಾಬೂಲ್ ನಲ್ಲಿ ನೆರೆದಿದ್ದ ಜನರನ್ನುದ್ದೇಶಿಸಿ ಮಾತನಾಡಿದ ತಾಲಿಬಾನ್ ಮುಖಂಡರು, ನಮ್ಮ 20 ವರ್ಷಗಳ ಹೋರಾಟ ವ್ಯರ್ಥವಾಗಬಾರದು, ಧಾರ್ಮಿಕ ವಿದ್ವಾಂಸರು ನಾಯಕತ್ವ ತೆಗೆದುಕೊಳ್ಳಬೇಕು ಮತ್ತು ಮುಂಬರುವ ಅಫ್ಘಾನಿಸ್ತಾನ ಸರ್ಕಾರವನ್ನು ಮುನ್ನಡೆಸಲಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೇ, ನೆರೆದಿದ್ದವರಲ್ಲಿ ಹತ್ತು ಮಂದಿ ಧಾರ್ಮಿಕ ವಿದ್ವಾಂಸರನ್ನು ಆಹ್ವಾನಿಸಿದ ಉಗ್ರ ಸಂಘಟನೆ, ರಾಜಕೀಯ ವ್ಯವಸ್ಥೆ ರೂಪಿಸಲು ಹಾಗೂ ಮುಂದಿನ ಸರ್ಕಾರಕ್ಕೆ ಜನರ ಬೆಂಬಲ ಕೋರಲು ಸಹಕಾರವನ್ನು ಕೇಳಿದರು ಎಂದು ಅಫ್ಘಾನಿಸ್ತಾನದ ಖಾಮ ಪ್ರೆಸ್ ಹೇಳಿದೆ.ಎಲ್ಲರನ್ನೊಳಗೊಂಡ ಸರ್ಕಾರವನ್ನು ರಚಿಸಲಾಗುವುದು, ಎಲ್ಲಾ ಜನರ ಹಕ್ಕುಗಳನ್ನು ಸಂರಕ್ಷಿಸಲಾಗುವುದು ಎಂದು ತಾಲಿಬಾನ್ ವಕ್ತಾರ ಜುಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ.
ಪಕ್ಷಪಾತ, ಭಾಷಿಕ ಮತ್ತು ಪಂಥೀಯ ಮೌಲ್ಯಗಳ ಹೊರತಾಗಿಯೂ, ಜನರು ಒಗ್ಗೂಡಿ ಅಫ್ಘಾನಿಸ್ತಾನದ ಅಭಿವೃದ್ಧಿಗಾಗಿ ಕೆಲಸ ಮಾಡಬೇಕು ಎಂದು ಅವರು ಹೇಳಿರುವುದಾಗಿ ಖಾಮ ಉಲ್ಲೇಖಿಸಿದೆ. ಸರ್ಕಾರ ರಚನೆಯ ಭಾಗವಾಗಿ ಆಫ್ಘನ್ ದೇಶದೊಳಗಿನ ಮುಖಂಡರೊಂದಿಗೆ ತಾಲಿಬಾನ್ ಮಾತುಕತೆ ನಡೆಸುತ್ತಿದೆ.
Advertisement