ಗಾಂಜಾ ಕಳ್ಳಸಾಗಣೆಗೆ ಸಂಚು: ಭಾರತೀಯ ಮೂಲದ ವ್ಯಕ್ತಿಯನ್ನು ಗಲ್ಲಿಗೇರಿಸಿದ ಸಿಂಗಾಪುರ
ಸಿಂಗಾಪುರ: ಒಂದು ಕಿಲೋಗ್ರಾಂ ಗಾಂಜಾವನ್ನು ಕಳ್ಳಸಾಗಣೆ ಮಾಡಲು ಸಂಚು ರೂಪಿಸಿದ ಅಪರಾಧಿಯೊಬ್ಬನನ್ನು ಸಿಂಗಾಪುರ ಬುಧವಾರ ಗಲ್ಲಿಗೇರಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮರಣದಂಡನೆ ಶಿಕ್ಷೆಯನ್ನು "ತುರ್ತಾಗಿ ಮರುಪರಿಶೀಲಿಸುವಂತೆ" ಸಿಂಗಾಪುರ ಸರ್ಕಾರಕ್ಕೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಕಚೇರಿ ಮನವಿ ಮಾಡಿದ್ದರೂ ಮತ್ತು ಬ್ರಿಟಿಷ್ ಉದ್ಯಮಿ ರಿಚರ್ಡ್ ಬ್ರಾನ್ಸನ್ ಗಲ್ಲು ಶಿಕ್ಷೆ ನಿಲ್ಲಿಸುವಂತೆ ಕೇಳಿಕೊಂಡಿದ್ದರೂ ಸಹ ಅದನ್ನು ನಿರ್ಲಕ್ಷಿಸಿ ಮರಣದಂಡನೆ ಶಿಕ್ಷೆ ಜಾರಿಗೊಳಿಸಲಾಗಿದೆ.
"46 ವರ್ಷದ ಸಿಂಗಪುರದ ತಂಗರಾಜು ಸುಪ್ಪಯ್ಯ ಅವರಿಗೆ ಇಂದು ಚಾಂಗಿ ಜೈಲು ಸಂಕೀರ್ಣದಲ್ಲಿ ಮರಣದಂಡನೆ ಶಿಕ್ಷೆಯನ್ನು ಜಾರಿಗೊಳಿಸಲಾಗಿದೆ" ಎಂದು ಸಿಂಗಾಪುರ್ ಜೈಲು ಸೇವೆಯ ವಕ್ತಾರರು ಎಎಫ್ ಪಿಗೆ ತಿಳಿಸಿದ್ದಾರೆ.
1,017.9 ಗ್ರಾಂ(35.9 ಔನ್ಸ್) ಗಾಂಜಾ ಕಳ್ಳಸಾಗಣೆಗೆ ಸಂಚು ರೂಪಿಸುವ ಮೂಲಕ ಗಾಂಜಾ ಸಾಗಣೆಗೆ ಕುಮ್ಮಕ್ಕು ನೀಡಿದ್ದಕ್ಕಾಗಿ 2017 ರಲ್ಲಿ ತಂಗರಾಜುಗೆ ಗಲ್ಲು ಶಿಕ್ಷೆ ವಿಧಿಸಲಾಗಿತ್ತು.
ಜಿನೀವಾ ಮೂಲದ ಡ್ರಗ್ ಪಾಲಿಸಿ ಕುರಿತ ಗ್ಲೋಬಲ್ ಕಮಿಷನ್ ಸದಸ್ಯ ಬ್ರಾನ್ಸನ್ ಸೋಮವಾರ ತಮ್ಮ ಬ್ಲಾಗ್ನಲ್ಲಿ ತಂಗರಾಜು ಅವರನ್ನು ಬಂಧಿಸುವ ಸಮಯದಲ್ಲಿ ಡ್ರಗ್ಸ್ "ಎಲ್ಲಿಯೂ ಇರಲಿಲ್ಲ" ಎಂದು ಬರೆದಿದ್ದಾರೆ ಮತ್ತು ಸಿಂಗಾಪುರ್ ಅಮಾಯಕ ವ್ಯಕ್ತಿಯನ್ನು ಕೊಲ್ಲುವ ಸಾಧ್ಯತೆಯಿದೆ ಎಂದು ಹೇಳಿದ್ದರು.
ಮಂಗಳವಾರ ಇದಕ್ಕೆ ಪ್ರತಿಕ್ರಿಯಿಸಿದ್ದ ಸಿಂಗಾಪುರದ ಗೃಹ ವ್ಯವಹಾರಗಳ ಸಚಿವಾಲಯ, ತಂಗರಾಜು ಅವರ ಅಪರಾಧವು ಸಾಬೀತಾಗಿದೆ ಎಂದು ಹೇಳಿತ್ತು.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ