ಟೆಹ್ರಾನ್: ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯ ನಡುವೆ 17 ಭಾರತೀಯ ನಾವಿಕರಿದ್ದ ಇಸ್ರೇಲಿನ ಒಂದು ಕಂಟೈನರ್ ಹಡಗನ್ನು ಇರಾನ್ ಮಿಲಿಟರಿ ವಶಕ್ಕೆ ಪಡೆದುಕೊಂಡಿರುವುದಾಗಿ ವರದಿಯಾಗಿದೆ.
ಭಾರತೀಯ ನಾಗರಿಕರು ಇರಾನ್ ಮತ್ತು ಇಸ್ರೇಲ್ಗೆ ಪ್ರಯಾಣಿಸದಂತೆ ಭಾರತೀಯ ವಿದೇಶಾಂಗ ಇಲಾಖೆ ಸೂಚಿಸಿದ ಒಂದು ದಿನದ ನಂತರ ಈ ಘಟನೆ ನಡೆದಿದೆ. 17 ಭಾರತೀಯ ನಾವಿಕರಿದ್ದ ಇರಾನ್ ನ 'ಎಂಎಸ್ಸಿ ಏರೀಸ್' (ಮೆಡಿಟರೇನಿಯನ್ ಶಿಪ್ಪಿಂಗ್ ಕಂಪನಿ) ಸರಕು ಸಾಗಣೆ ಹಡಗನ್ನು ಇರಾನ್ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.
ಟೆಹ್ರಾನ್ ಮತ್ತು ದೆಹಲಿಯಲ್ಲಿರುವ ರಾಯಭಾರಿಗಳ ಮೂಲಕ ಭಾರತೀಯ ನಾಗರಿಕರ ಶೀಘ್ರ ಬಿಡುಗಡೆ ಖಚಿತಪಡಿಸಿಕೊಳ್ಳಲು ಭಾರತ ಇರಾನ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
12 ದಿನಗಳ ಹಿಂದೆ ಸಿರಿಯಾದಲ್ಲಿರುವ ಇರಾನ್ ಕಾನ್ಸುಲೇಟ್ ಮೇಲಿನ ದಾಳಿಗೆ ಪ್ರತೀಕಾರವಾಗಿ ಇಸ್ರೇಲ್ ನೆಲದ ಮೇಲೆ ದಾಳಿ ನಡೆಸಬಹುದು ಎಂಬ ಆತಂಕದ ನಡುವೆ "ಎಂಎಸ್ಸಿ ಏರೀಸ್" ಎಂಬ ಸರಕು ಸಾಗಣೆ ಹಡಗನ್ನು ಇರಾನ್ ನಿಯಂತ್ರಣಕ್ಕೆ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ. ಈ ಹಡಗಿನಲ್ಲಿ 17 ಭಾರತೀಯ ಪ್ರಜೆಗಳಿದ್ದಾರೆ ಎಂದು ಮೂಲಗಳು ಹೇಳಿವೆ.
ಇರಾನ್ ಸಾಮಾನ್ಯವಾಗಿ ಸರಕು ಸಾಗಣೆ ಹಡಗುಗಳನ್ನು ಗುರಿಯಾಗಿಸಿಕೊಳ್ಳುವುದಿಲ್ಲ (ತೈಲ ಟ್ಯಾಂಕರ್ಗಳನ್ನು ಅವರು ಗುರಿಯಾಗಿಸಿಕೊಂಡಿರುತ್ತಾರೆ) ಆದರೆ ಅವರು ಶನಿವಾರ ಹಾರ್ಮುಜ್ ಜಲಸಂಧಿಯ ಮೂಲಕ ಪ್ರಯಾಣಿಸುತ್ತಿದ್ದ ಇಸ್ರೇಲಿ ಹಡಗನ್ನು ನೋಡಿ ಅದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಹಡಗನ್ನು ಗಲ್ಫ್ ಆಫ್ ಓಮನ್ ಬಳಿ (ಹೋರ್ಮುಜ್ ಜಲಸಂಧಿ ಬಳಿ) ವಶಕ್ಕೆ ಪಡೆಯಲಾಗಿದೆ. ಇದು ಪೋರ್ಚುಗಲ್ನ ಧ್ವಜದ ಅಡಿಯಲ್ಲಿತ್ತು ಮತ್ತು ಇದು
ಇಸ್ರೇಲಿ ಬಿಲಿಯನೇರ್ ಇಯಾಲ್ ಆಫರ್ ಒಡೆತನದಲ್ಲಿದೆ ಎನ್ನಲಾದ 'ಜೋಡಿಯಾಕ್ ಮ್ಯಾರಿಟೈಮ್' ಎಂಬ ಲಂಡನ್ ಮೂಲದ ಕಂಪನಿಯೊಂದಿಗೆ ಸಂಬಂಧ ಹೊಂದಿದೆ. MSC ವಿಶ್ವದ ಅತಿದೊಡ್ಡ ಸರಕು ಸಾಗಣೆ ಮಾರ್ಗಗಳಲ್ಲಿ ಒಂದಾಗಿದೆ.
ಸಿರಿಯಾದ ಡಮಾಸ್ಕಸ್ನಲ್ಲಿರುವ ಇರಾನ್ನ ಕಾನ್ಸುಲರ್ ಕಟ್ಟಡದ ಮೇಲೆ ಶಂಕಿತ ಇಸ್ರೇಲಿ ವೈಮಾನಿಕ ದಾಳಿಗೆ ಸೇಡು ತೀರಿಸಿಕೊಳ್ಳುವುದಾಗಿ ಹೇಳಿದ ನಂತರ ಇರಾನ್ ಈ ಹಡಗನ್ನು ವಶಕ್ಕೆ ಪಡೆದುಕೊಂಡಿದೆ. ಈ ಮಧ್ಯೆ ವೈರಲ್ ಆಗಿರುವ ವಿಡಿಯೋದಲ್ಲಿ ಇಬ್ಬರು ಸೈನಿಕರು ಓಮನ್ ಕೊಲ್ಲಿಯಲ್ಲಿ ಹಡಗಿನ ಡೆಕ್ನಲ್ಲಿ ಹಗ್ಗಗಳ ಮೂಲಕ ಹೆಲಿಕಾಪ್ಟರ್ನಿಂದ ಕೆಳಗೆ ಜಾರಿಬೀಳುವುದನ್ನು ಕಾಣಬಹುದು.ಇಸ್ರೇಲ್ನ ವಿದೇಶಾಂಗ ಸಚಿವ ಇಸ್ರೇಲ್ ಕಾಟ್ಜ್ ಇದನ್ನು ಕಡಲುಗಳ್ಳರ ಕಾರ್ಯಾಚರಣೆ ಎಂದು ಬಣ್ಣಿಸಿದ್ದಾರೆ.
ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆಯ ನಡುವೆ, ಭಾರತ, ಯುಎಸ್, ಫ್ರಾನ್ಸ್, ಯುಕೆ, ರಷ್ಯಾ, ನಾರ್ವೆ, ಕೆನಡಾ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಕೆಲವು ದೇಶಗಳು ಈಗಾಗಲೇ ಪ್ರಯಾಣ ಸಲಹೆಗಳನ್ನು ನೀಡಿವೆ.
Advertisement