
ವ್ಯಾಟಿಕನ್ ಸಿಟಿ: ಇತ್ತೀಚೆಗಷ್ಟೇ ನಿಧನರಾಗಿದ್ದ ಕ್ರೈಸ್ತ ಧರ್ಮದ ಪರಮೋಚ್ಛ ಗುರು ಪೋಪ್ ಫ್ರಾನ್ಸಿಸ್ ಅಂತ್ಯಕ್ರಿಯೆಯ ಪ್ರಕ್ರಿಯೆ ಇಂದಿನಿಂದ ಆರಂಭಗೊಂಡಿದೆ.
200,000 ಮಂದಿ ಪೋಪ್ ಫ್ರಾನ್ಸಿಸ್ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಸಹ ಪೋಪ್ ಫ್ರಾನ್ಸಿಸ್ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಪೋಪ್ ಗೆ ಗೌರವ ಸಲ್ಲಿಸಿದ್ದಾರೆ.
ಕೇಂದ್ರ ರಾಜ್ಯ ಸಚಿವ ಜಾರ್ಜ್ ಕುರಿಯನ್ ಶನಿವಾರ ಮಾತನಾಡಿ, ದಿವಂಗತ ಪೋಪ್ ಫ್ರಾನ್ಸಿಸ್ ಅವರು ಎಲ್ಲಾ ಜನಾಂಗಗಳು ಮತ್ತು ಧರ್ಮಗಳನ್ನು ಒಪ್ಪಿಕೊಂಡು ಗೌರವಿಸುತ್ತಿದ್ದರು ಮತ್ತು ಎಲ್ಲರಿಗೂ ಸೇವೆ ಸಲ್ಲಿಸುತ್ತಿದ್ದರು ಎಂದು ಹೇಳಿದ್ದಾರೆ. ಏಪ್ರಿಲ್ 21 ರಂದು ನಿಧನರಾದ ಪೋಪ್ ಫ್ರಾನ್ಸಿಸ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಅಧ್ಯಕ್ಷ ದ್ರೌಪದಿ ಮುರ್ಮು ನೇತೃತ್ವದ ನಿಯೋಗದ ಭಾಗವಾಗಿ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ರಾಜ್ಯ ಸಚಿವರು ವ್ಯಾಟಿಕನ್ ನಗರದಲ್ಲಿದ್ದಾರೆ.
ವ್ಯಾಟಿಕನ್ ಸಿಟಿಯಿಂದ ಟಿವಿ ಚಾನೆಲ್ ಒಂದಕ್ಕೆ ಮಾತನಾಡಿದ ಸಚಿವ ಕುರಿಯನ್, ಪೋಪ್ "ಮಾನವಕುಲದ ನಾಯಕ" ಆಗಿದ್ದರಿಂದ ಅವರ ನಿಧನದಿಂದ ಅಪಾರ "ನಷ್ಟದ ಭಾವನೆ" ಉಂಟಾಗಿದೆ ಎಂದು ಹೇಳಿದ್ದಾರೆ
"ಅವರು ಎಲ್ಲಾ ಜನಾಂಗಗಳು ಮತ್ತು ಧರ್ಮಗಳನ್ನು ಗುರುತಿಸಿದರು ಮತ್ತು ಗೌರವಿಸಿದರು ಮತ್ತು ಎಲ್ಲರಿಗೂ ಸೇವೆ ಸಲ್ಲಿಸಿದರು" ಎಂದು ಅವರು ಹೇಳಿದರು.
ರಾಷ್ಟ್ರಪತಿ ಮುರ್ಮು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಬಂದಿರುವುದು ಭಾರತ ಮತ್ತು ಪೋಪ್ ನಡುವಿನ ಬಾಂಧವ್ಯ ಸ್ಪಷ್ಟವಾಗಿ ತಿಳಿಸುತ್ತದೆ ಎಂದು ಕುರಿಯನ್ ಹೇಳಿದ್ದಾರೆ.
ಪೋಪ್ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಯುಕ್ರೇನ್ ನ ಅಧ್ಯಕ್ಷ ಝೆಲೆನ್ಸ್ಕಿ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳ ನಾಯಕರು ಭಾಗಿಯಾಗಿದ್ದಾರೆ.
Advertisement