
ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಪಾಕಿಸ್ತಾನ ವಿರುದ್ಧ ಹಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿರುವ ಭಾರತ, ಭಾರತದಿಂದ ಪಾಕಿಸ್ತಾನಕ್ಕೆ ಹರಿಯುವ ಚೆನಾಬ್ ನದಿ ನೀರನ್ನು ಸ್ಥಗಿತಗೊಳಿಸಿದೆ. ಈ ಬಗ್ಗೆ ಪಾಕಿಸ್ತಾನ ಸರ್ಕಾರ ಗಂಭೀರ ಕಳವಳ ವ್ಯಕ್ತಪಡಿಸಿದ್ದು, ನೀರಿನ ಕೊರತೆಯು ದೇಶದಲ್ಲಿ ಖಾರಿಫ್ನ ಆರಂಭಿಕ ಮತ್ತು ತಡವಾದ ಬೆಳೆಗಳ ಮೇಲೆ ತೀವ್ರ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದೆ.
ಪಾಕಿಸ್ತಾನದ ಸಿಂಧೂ ನದಿ ವ್ಯವಸ್ಥೆ ಪ್ರಾಧಿಕಾರ(IRSA) ನೀಡಿರುವ ಹೇಳಿಕೆಯ ಪ್ರಕಾರ, ಭಾರತದ ಈ ಕ್ರಮದಿಂದ ಪಾಕಿಸ್ತಾನದ ಪಂಜಾಬ್ನಲ್ಲಿರುವ ಪ್ರಮುಖ ನೀರಾವರಿ ಮೂಲವಾದ ಮರಾಲಾ-ರವಿ ಲಿಂಕ್ (MRL) ಕಾಲುವೆಯಲ್ಲಿ ಸಾಕಷ್ಟು ನೀರಿನ ಕೊರತೆ ಎದುರಾಗಿದೆ.
IRSA ಪ್ರಕಾರ, ಮೇ ನಿಂದ ಜೂನ್ 10 ರವರೆಗೆ ನಡೆಯುವ ಮುಂಚಿನ ಖಾರಿಫ್ ಅವಧಿಯು ನೀರಿನ ಲಭ್ಯತೆಯಲ್ಲಿನ ಹಠಾತ್ ಏರಿಳಿತಗಳಿಂದ ಬೆಳೆ ನಷ್ಟವಾಗಲಿದೆ. ಪ್ರಸ್ತುತ ಪರಿಸ್ಥಿತಿ ಮುಂದುವರಿದರೆ ಜೂನ್ 11 ರಿಂದ ಸೆಪ್ಟೆಂಬರ್ ವರೆಗೆ ಇರುವ ಕೊನೆಯ ಖಾರಿಫ್ ಋತುವಿನ ಮೇಲೂ ಪರಿಣಾಮ ಬೀರುವ ನಿರೀಕ್ಷೆಯಿದೆ ಎಂದು ಎಚ್ಚರಿಕೆ ನೀಡಿದೆ.
ಇಸ್ಲಾಮಾಬಾದ್ನ IRSA ಪ್ರಧಾನ ಕಚೇರಿಯಲ್ಲಿ ಮೇ 5 ರಂದು ನಡೆದ IRSA ಸಲಹಾ ಸಮಿತಿ(IAC) ಸಭೆಯ ನಂತರ ಬಿಡುಗಡೆಯಾದ ಹೇಳಿಕೆಯಲ್ಲಿ, ಅಧ್ಯಕ್ಷ ಸಾಹಿಬ್ಜಾದಾ ಮುಹಮ್ಮದ್ ಶಬೀರ್, ಮರಾಲಾ ಪ್ರಧಾನ ಕಾರ್ಯಾಲಯದಲ್ಲಿ ಚೆನಾಬ್ ನದಿಯ ಒಳಹರಿವು ಗಮನಾರ್ಹವಾಗಿ ಕಡಿಮೆಯಾಗುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
"ಮರಾಲಾದಲ್ಲಿ ಒಳಹರಿವು ಹಠಾತ್ ಕುಸಿತವು ಆತಂಕಕಾರಿಯಾಗಿದೆ" ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಬಾಗ್ಲಿಹಾರ್ ಅಣೆಕಟ್ಟೆಯಿಂದ ನೀರು ಸ್ಥಗಿತಗೊಳಿಸಿದ ಭಾರತದ ಕ್ರಮದಿಂದ ಪಾಕಿಸ್ತಾನದ ಸಿಂಧ್ ಹಾಗೂ ಪಂಜಾಬ್ ಪ್ರಾಂತ್ಯದಲ್ಲಿ ನೀರಿನ ಅಭಾವ ತಲೆದೋರುವ ಸಾಧ್ಯತೆಗಳಿವೆ. ಕೃಷಿ, ಕುಡಿಯುವ ನೀರು, ಜಲವಿದ್ಯುತ್ ಯೋಜನೆಗಳಿಗೆ ಕಂಟಕ ಎದುರಾಗಲಿದೆ.
ಚೆನಾಬ್ ನದಿ ನೀರಿನ ಅಭಾವದಿಂದ ಪ್ರಮುಖ ಆಹಾರ ಹಾಗೂ ವಾಣಿಜ್ಯ ಬೆಳೆಗಳಾದ ಮೆಕ್ಕೆಜೋಳ, ಗೋಧಿ, ಭತ್ತ, ಹತ್ತಿ ಸೇರಿ ಹಲವು ಬೆಳೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಜಲ ವಿದ್ಯುತ್ ಘಟಕಗಳಾದ ಚಿಚೋಂಕಿ ಮಾಲಿಯನ್, ನಂದಿಪುರ ಜಲ ವಿದ್ಯುತ್ ಸ್ಥಾನವರಗಳು ಸ್ಥಗಿತಗೊಳ್ಳುವ ಅಪಾಯವಿದೆ.
Advertisement