

ದ್ವಿದಳ ಧಾನ್ಯಗಳ ಪೈಕಿ ಕಡಲೆ ವಿಶಿಷ್ಟ ಬೆಳೆ. ಯಾಕೆಂದರೆ ಇದು ಕಡಿಮೆ ಮಳೆ ಮತ್ತು ಅಲ್ಪಾವಧಿಯಲ್ಲೇ ಫಸಲು ಕೊಡುವ ಬೆಳೆಯಾಗಿದೆ. ಇದನ್ನು ಹೆಚ್ಚಾಗಿ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕ ಭಾಗದಲ್ಲಿ ಹೆಚ್ಚು ಬೆಳೆಯುತ್ತಾರೆ.
ಬೆಳೆಯುವ ವಿಧಾನ
ಎಕರೆ ಜಮೀನಿಗೆ ಬಿತ್ತಲು 14ರಿಂದ 16 ಕೆಜಿಯಷ್ಟು ಕಡಲೆ ಬೇಕಾಗುತ್ತದೆ. ಮೊದಲು ಜಮೀನನ್ನು ಹದ ಮಾಡಿದ ಬಳಿಕ ಸಾಲಿನಿಂದ ಸಾಲಿಗೆ 2 ಅಡಿ ಅಂತರದಲ್ಲಿ ಬೀಜ ಬಿತ್ತಬೇಕು. ಬೀಜದಿಂದ ಬೀಜಕ್ಕೆ 1 ಅಡಿ ಅಂತರವಿರಬೇಕು. 2 ಸೆಂ.ಮೀ ಆಳದಲ್ಲಿ ಬೀಜ ಹಾಕಬೇಕು. ಸೆಪ್ಟೆಂಬರ್ ಕೊನೆಯ ವಾರ ಮತ್ತು ಅಕ್ಟೋಬರ್ ತಿಂಗಳು ಕಡಲೆ ಬಿತ್ತನೆಗೆ ಸಕಾಲ. ಇದು ಹೆಚ್ಚು ಮಳೆಯನ್ನು ತಾಳದು. ಹೆಚ್ಚು ಮಳೆ ಬಿದ್ದರೆ ಇದರಲ್ಲಿನ ಉಪ್ಪಿನಾಂಶ ಹೋಗುತ್ತದೆ. ಹಾಗಾಗಿ ಸೆಪ್ಟೆಂಬರ್ ಕೊನೆಯ ವಾರದಲ್ಲಿ ಬಿತ್ತನೆ ಮಾಡಬೇಕು. ಇದು ಇಬ್ಬನಿಯಲ್ಲಿನ ನೀರನ್ನು ಹೀರಿಕೊಂಡು ಬೆಳೆಯುವ ವಿಶಿಷ್ಟ ಬೆಳೆ. ಉಷ್ಣಾಂಶ 25ರಿಂದ 30 ಸೆಲ್ಸಿಯಸ್ ಇರಬೇಕು. ಬಿತ್ತಿದ 40ರಿಂದ 45 ದಿನಕ್ಕೆ ಫಸಲು ಕೈಗೆ ಬರುತ್ತದೆ. ಗೋದಿಯಲ್ಲೂ ಅಂತರ್ ಬೆಳೆಯಾಗಿ ಕಡಲೆ ಬೆಳೆಯಬಹುದು.
ಮಣ್ಣು
ಕಪ್ಪು ಮಣ್ಣು ಕಡಲೆಗೆ ಹೇಳಿ ಮಾಡಿಸಿದ್ದು. ಅದೇ ರೀತಿ ಕೆಂಪು ಮಣ್ಣಲ್ಲಿ ಬೆಳೆಯಬಹುದು.
ತಳಿಗಳು
ರಾಜ್ಯದಲ್ಲಿ ಹೆಚ್ಚಾಗಿ ಸ್ಥಳೀಯ ತಳಿಯ ಕಡಲೆಯೇ ಹೆಚ್ಚು ಪ್ರಚಲಿತದಲ್ಲಿದೆ. ಹಲವು ಕಡೆ ಅಣ್ಣಿಗೇರಿ ಎಂಬ ತಳಿಯ ಬೀಜಗಳು ಬಳಕೆಯಲ್ಲಿದೆ.
ರೋಗಗಳು
ಕಡಲೆಗೆ ಪ್ರಮುಖವಾಗಿ ಕಾಯಿಕೊರಕ ಮತ್ತು ಸುಳಿ ಕುಸಿ (ಎಲೆ ಮುರುಟು ರೋಗ) ಬರುತ್ತದೆ. ಇದಕ್ಕೆ ಗೋಮೂತ್ರ ಮತ್ತು ಬೇವಿನ ಕಷಾಯ ಸಿಂಪಡಿಸಿದರೆ ನಿಯಂತ್ರಣಕ್ಕೆ ಬರುತ್ತದೆ.
ಉಪಯೋಗ
ಕಡಲೆಯನ್ನು ಪ್ರಮುಖವಾಗಿ ಬೇಳೆ, ಹಿಟ್ಟು ಮತ್ತು ಪುಟಾಣಿ ತಯಾರಿಕೆ ಬಳಸುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ಹರಪನಹಳ್ಳಿ ತಾಲೂಕಿನ ಇ. ಬೇವಿನಹಳ್ಳಿ ಗ್ರಾಮದ ರೈತ ಬಿ.ಎ. ಶಿವಯೋಗಿ(9008279337) ಅವರನ್ನು ಸಂಪರ್ಕಿಸಬಹುದು.
- ಮಹೇಶ್ ಅರಳಿ
Advertisement