
ಮೈಸೂರು: ಬಹುಭಾಷಾ ನಾಯಕ ನಟ, ಕನ್ನಡಿಗ ಪ್ರಕಾಶ್ ರೈ ಸೋಮವಾರ ಚಲನಚಿತ್ರ ಗೌಜುಗದ್ದಲದಿಂದ ಬಿಡುವು ಮಾಡಿಕೊಂಡು ಅಪ್ಪಟ ಕೃಷಿ ರಂಗದಲ್ಲಿದ್ದರು. ಮೈಸೂರಿನ ಬೋಗಾದಿ ರಸ್ತೆಯ ಜಟ್ಟಿಹುಂಡಿ ಬಳಿ ಬರುವ ಸಾಹಿತಿ ದೇವನೂರು ಮಹಾದೇವರ ಬನವಾಸಿ ಫಾರಂನಲ್ಲಿ ವಿಧೇಯ ವಿದ್ಯಾರ್ಥಿಯಂತೆ ನೈಸರ್ಗಿಕ ಕೃಷಿ ಪ್ರತಿಪಾದಕ ಸುಭಾಷ್ ಪಾಳೇಕರ್ ಪಾಠ ಕೇಳಿದರು.
ಪ್ರಕಾಶ್ ರೈ, ಹೈದರಾಬಾದ್ ಬಳಿ 20 ಎಕರೆ ಜಮೀನು ಖರೀದಿಸಿ ಕೃಷಿ ಮಾಡುತ್ತಿರುವುದು ಹಲವರಿಗೆ ತಿಳಿದಿಲ್ಲ. ಅವರಿಗೆ ಮೈಸೂರು, ಇಲ್ಲಿನ ರಂಗಾಯಣ, ಕಲಾವಿದರ ಬಗ್ಗೆ ಅಪಾರ ಪ್ರೀತಿ. ಆಗಾಗ ಮೈಸೂರಿಗೆ ಬಂದು, ಮಂಡ್ಯ ರಮೇಶ್, ಎಚ್. ಜನಾರ್ದನ್ ಮತ್ತಿತ್ತರರನ್ನು ಭೇಟಿ ಆಗುತ್ತಿರುತ್ತಾರೆ. ಅವರು ಸೋಮವಾರ ಮೈಸೂರಿನ ಜಟ್ಟಿಹುಂಡಿ ಬಳಿ ಇರುವ ದೇವನೂರ ಮಹಾದೇವರ ಜಮೀನಿನಲ್ಲಿ ಕಾಣಿಸಿಕೊಂಡರು.
ಮೈಸೂರಿನ ಕಲಾಮಂದಿರದಲ್ಲಿ ಜನಚೇತನ ಸಂಸ್ಥೆ, ಗ್ರಾಮೀಣ ಸಂಸ್ಥೆ, ರೈತ ಸಂಘಟನೆಗಳ ಸಹಯೋಗದಲ್ಲಿ 5 ದಿನ ಜರುಗಿದ ನೈಸರ್ಗಿಕ ಕೃಷಿ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದ ಸುಭಾಷ್ ಪಾಳೇಕರ್, ಮಹಾರಾಷ್ಟ್ರದ ಅಮರಾವತಿಗೆ ವಾಪಸ್ ಆಗುವ ಮುನ್ನ ದೇವನೂರರ ತೋಟಕ್ಕೆ ಭೇಟಿ ನೀಡುವವರಿದ್ದರು. ಈ ವಿಷಯ ತಿಳಿದು, ಕೃಷಿ ಬಗ್ಗೆ ಆಸಕ್ತಿ ಬೆಳೆಸಿಕೊಂಡಿರುವ, ಪಾಳೇಕರ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಲು ಮುಂದಾಗಿರುವ ಪ್ರಕಾಶ್ ರೈ, ರಂಗಾಯಣ ನಿರ್ದೇಶಕ ಎಚ್. ಜನಾರ್ದನ್ ಅವರೊಂದಿಗೆ ಅಲ್ಲಿಗೆ ಬಂದರು. ದೇವನೂರು ಮಹಾದೇವ, ಅವರ ಅಳಿಯ ಅವಿನಾಶ್, ಅಭಿರುಚಿ ಪ್ರಕಾಶನದ ಗಣೇಶ್, ಚಿನ್ನಸ್ವಾಮಿ ವಡ್ಡಗೆರೆ, ಬನ್ನೂರು ಕೃಷ್ಣಪ್ಪ, ಚಂದ್ರಶೇಖರ ಕಲಾದಗಿ ಮೊದಲಾದವರು ಅಲ್ಲಿದ್ದರು.
ನಳನಳಿಸುತ್ತಿದೆ ಬನವಾಸಿ ತೋಟ: ಮಹಾದೇವ ಅವರು ಸುಮಾರು 5 ಎಕರೆ ಇರುವ ಬನವಾಸಿ ತೋಟ ಖರೀದಿಸಿ 25 ವರ್ಷಗಳಾಗಿವೆ. ಅಲ್ಲಿ ಮಾವು, ತೆಂಗು, ಅಡಕೆ ಮರಗಳು ಬೆಳೆದು ನಿಂತಿವೆ. ಅವರು ಯಾವತ್ತೂ ಔಷಧ, ಗೊಬ್ಬರ ಹಾಕಿದವರಲ್ಲ. ಇಲ್ಲಿ ದೇವನೂರರ ಅಳಿಯ ಅವಿನಾಶ್ ನೇತೃತ್ವದಲ್ಲಿ ಕಳೆದ 4 ತಿಂಗಳಿಂದ ಸುಭಾಷ್ ಪಾಳೇಕರ್ರ ನೈಸರ್ಗಿಕ ಕೃಷಿ ಪದ್ಧತಿ ಅಳವಡಿಸಲಾಗಿದೆ. ಇದಕ್ಕೆ ದೇವನೂರು ಅವರಿಗೆ ಬನ್ನೂರು ಕೃಷ್ಣಪ್ಪ ಅವರ ತೋಟವೇ ಸ್ಪೂರ್ತಿ. ಹೀಗಾಗಿ ಈಗ ಮಾವು, ತೆಂಗು, ಅಡಕೆಯ ಜೊತೆಗೆ ಮೂಸಂಬಿ, ಕಿತ್ತಳೆ, ಕೋಕ್, ಕಾಫಿ, ದಾಳಿಂಬೆ, ಪಪ್ಪಾಯಿ, ಚೆಂಡು ಹೂವು, ಮೆಣಸಿನಕಾಯಿ ಬೆಳೆಸಲಾಗಿದೆ. ಇದನ್ನು ಪಾಳೇಕರ್ ನೋಡಿ, ಆಗಿರುವ ತಪ್ಪು ಸರಿಪಡಿಸಿಕೊಂಡಲ್ಲಿ ತೋಟ ಇನ್ನು ಉತ್ತಮವಾಗುತ್ತದೆ ಎಂದರು. ಪಾಳೇಕರ್ರ ಕೃಷಿ ಬಗ್ಗೆ ಓದಿಕೊಂಡಿರುವ ಪ್ರಕಾಶ ರೈ ಕೂಡ ರೈತರ ಕೆಲ ಪ್ರಶ್ನೆಗಳಿಗೆ ಉತ್ತರಿಸಿದರು. ಪಾಳೇಕರ್ರಿಂದಲೂ ಕೇಳಿ ತಿಳಿದುಕೊಂಡರು. ಕನ್ನಡದ ಜತೆಗೆ ಹಿಂದಿ, ಮರಾಠಿಯನ್ನೂ ರೈ ನಿರರ್ಗಳವಾಗಿ ಬಳಿಸಿದರು.
ನಂತರ, ರೈ ಅಲ್ಲಿಯೇ ಉಪಾಹಾರ ಸೇವಿಸಿದರು. ಮೈಸೂರಲ್ಲೂ 20 ಎಕರೆ ಜಮೀನು ಖರೀದಿಸಿ, ನೈಸರ್ಗಿಕ ಕೃಷಿ ಮಾಡುವ ಇಚ್ಛೆ ವ್ಯಕ್ತಪಡಿಸಿದರು. ಇದಕ್ಕಾಗಿ ಜಮೀನು ಹುಡುಕುವಂತೆ ಗೆಳೆಯರಿಗೆ ಮನವಿ ಮಾಡಿದರು.
-ಅಂಶಿ ಪ್ರಸನ್ನಕುಮಾರ್
Advertisement