ದೇಶ

ಮೇಘಾಲಯದಲ್ಲಿ ಮೊಬೈಲ್ ಇಂಟರ್ನೆಟ್ ನಿಷೇಧ ಮುಂದುವರಿಕೆ

Lingaraj Badiger

ಗುವಾಹಟಿ: ಅಸ್ಸಾಂ-ಮೇಘಾಲಯ ಗಡಿ ಹಿಂಸಾಚಾರದ ಬಳಿಕ ಮೇಘಾಲಯ ಸರ್ಕಾರ ಏಳು ಜಿಲ್ಲೆಗಳಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಡೇಟಾ ಸೇವೆಗಳನ್ನು ಅಮಾನತುಗೊಳಿಸಿತ್ತು. ಅದನ್ನು ಗುರುವಾರ ಇನ್ನೂ 48 ಗಂಟೆಗಳ ಕಾಲ ವಿಸ್ತರಿಸಿದೆ.

ಅಧಿಸೂಚನೆಯಲ್ಲಿ, ರಾಜ್ಯದ ಗೃಹ ಕಾರ್ಯದರ್ಶಿ ಸಿವಿಡಿ ಡೀಂಗ್ಡೋಹ್ ಅವರು, ಶಿಲ್ಲಾಂಗ್‌ನ ವಿವಿಧ ಭಾಗಗಳಲ್ಲಿ ಮತ್ತು ಮೇಘಾಲಯದ ಜೈನ್ತಿಯಾ ಹಿಲ್ಸ್ ಜಿಲ್ಲೆಗಳಲ್ಲಿ ಅಸ್ಸಾಂ-ನೋಂದಾಯಿತ ವಾಹನಗಳಿಗೆ ಬೆಂಕಿ ಹಚ್ಚಿ ಹಾನಿ ಮಾಡಿದ ಬಗ್ಗೆ ವರದಿ ಬಂದಿವೆ ಎಂದು ಹೇಳಿದ್ದಾರೆ. 

ಕಾನೂನು ಮತ್ತು ಸುವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು, ಪಶ್ಚಿಮ ಜೈನ್ತಿಯಾ ಹಿಲ್ಸ್‌ನಲ್ಲಿ ಮೊಬೈಲ್ ಇಂಟರ್ನೆಟ್ ಮತ್ತು ಡೇಟಾ ಸೇವೆಗಳ ನಿಷೇಧವನ್ನು 48 ಗಂಟೆಗಳವರೆಗೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ ಎಂದು ಅವರು ತಿಳಿಸಿದ್ದಾರೆ. 

ಮಂಗಳವಾರ ಬೆಳಗ್ಗೆ ಅಸ್ಸಾಂನ ಪಶ್ಚಿಮ ಕರ್ಬಿ ಆಂಗ್ಲಾಂಗ್ ಜಿಲ್ಲೆ ಮತ್ತು ಮೇಘಾಲಯದ ಪಶ್ಚಿಮ ಜೈನ್ತಿಯಾ ಹಿಲ್ಸ್ ಜಿಲ್ಲೆಯ ಗಡಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಐವರು ಮೇಘಾಲಯ ಗ್ರಾಮಸ್ಥರು ಮತ್ತು ಅಸ್ಸಾಂನ ಅರಣ್ಯ ಸಿಬ್ಬಂದಿಯೊಬ್ಬರು ಸಾವನ್ನಪ್ಪಿದ್ದರು.

ಹಿಂಸಾಚಾರದ ಹಿನ್ನೆಲೆಯಲ್ಲಿ ಅಸ್ಸಾಂ ಸರ್ಕಾರ ಪಶ್ಚಿಮ ಕರ್ಬಿ ಅಂಗ್ಲಾಂಗ್ ಜಿಲ್ಲೆಯ ಎಸ್ಪಿಯನ್ನು ವರ್ಗಾವಣೆ ಮಾಡಿದೆ ಮತ್ತು ಇಬ್ಬರು ಪೊಲೀಸ್ ಹಾಗೂ ಅರಣ್ಯ ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಅಸ್ಸಾಂ ಸರ್ಕಾರದ ಈ ಕ್ರಮವನ್ನು ವಿರೋಧ ಪಕ್ಷಗಳು ಖಂಡಿಸಿದ್ದು, ಮೇಘಾಲಯದ ಮುಂದೆ ಅಸ್ಸಾಂ ಸರ್ಕಾರ "ಶರಣಾಗಿದೆ" ಎಂದು ಆರೋಪಿಸಿವೆ.

"ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು NEDA (ನಾರ್ತ್ ಈಸ್ಟ್ ಡೆಮಾಕ್ರಟಿಕ್ ಅಲೈಯನ್ಸ್, ಈಶಾನ್ಯದ ಕಾಂಗ್ರೆಸ್ಸೇತರ ರಾಜಕೀಯ ಪಕ್ಷಗಳ ಒಕ್ಕೂಟ)ದ ಸಂಚಾಲಕರಾಗಿ ಮುಂದುವರಿಯಲು ಮೇಘಾಲಯದ ಮುಂದೆ ಶರಣಾಗಿದ್ದಾರೆ" ಎಂದು ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಭೂಪೇನ್ ಕುಮಾರ್ ಬೋರಾಹ್ ಹೇಳಿದ್ದಾರೆ.

SCROLL FOR NEXT