

ಮನುಷ್ಯ ಮಾಡುವ ಎಲ್ಲಾ ತರಹದ ವ್ಯಾಪಾರ- ವ್ಯವಹಾರ ಅಥವಾ ಉದ್ಯೋಗದ ಮೂಲ ಕಾರಣ ಧನ ಸಂಪಾದನೆ. 'ಧನ ಮೂಲಂ ಇದಂ ಜಗತ್' ಎಂದು ಅರಿತಿರುವ ಇಂದಿನ ಜನಾಂಗ ಅದರ ಸಂಪಾದನೆಗಾಗಿ ನಾನಾ ಮಾರ್ಗಗಳನ್ನು ಆಯ್ದುಕೊಳ್ಳುತ್ತಿದೆ.
ಯಾವುದೇ ಮಾರ್ಗದಲ್ಲಿ ಹೋದರೂ ಸಹ ಧನಲಾಭ ಚೆನ್ನಾಗಿ ಆಗಬೇಕು ಎಂದಾದರೆ ಅದಕ್ಕೆ ಜಾತಕದಲ್ಲಿನ ಗ್ರಹಬಲ ಹಾಗೂ ದೈವಬಲ ಎರಡೂ ಅತ್ಯವಶ್ಯ. ಯಾವುದೇ ವ್ಯಾಪಾರ ಮಾಡಬೇಕಾದರೂ ಜಾತಕದಲ್ಲಿ ಶುಕ್ರನ ಸ್ಥಾನ ಚೆನ್ನಾಗಿರಬೇಕು. ಯಾರ ಜಾತಕದಲ್ಲಿ ಶುಕ್ರ ಕನ್ಯಾ ರಾಶಿಯಲ್ಲಿ ಇರುತ್ತಾನೋ ಅವರು ವ್ಯಾಪಾರ ಮಾಡಿ, ಧನಲಾಭ ಪಡೆಯುವುದು ಕಷ್ಟಕರ.
ಜಾತಕದಲ್ಲಿನ ಕರ್ಮಾಧಿಪತಿಯ ಬಲಾಬಲ ಹಾಗೂ ಧನಾಧಿಪತಿಯ ದೃಷ್ಟಿ ಹಾಗೂ ದಶಾಕಾರಕನ ಅನುಕೂಲತೆಯಿಂದ ವ್ಯಾಪಾರದಲ್ಲಿ ಲಾಭ- ನಷ್ಟಗಳ ಲೆಕ್ಕಾಚಾರವನ್ನು ಹಾಕಬಹುದು.
ಪ್ರತಿಯೊಬ್ಬರೂ ಅವರ ಜಾತಕ ಪರಿಶೀಲಿಸಿ ಕರ್ಮಾಧಿಪತಿಯ ಸೂಚಿತ ವ್ಯಾಪಾರವನ್ನೇ ಆರಿಸಿಕೊಂಡು ವ್ಯವಹಾರ ನಡೆಸಿದರೆ ಮಾತ್ರ ಧನ ಲಾಭ ಸಾಧ್ಯ. ಯಾರೇ ಆಗಲಿ ಕರ್ಮಾಧಿಪತಿ ರವಿ ಆಗಿದ್ದ ಪಕ್ಷದಲ್ಲಿ ಅಥವಾ ಅವರ ಜಾತಕದಲ್ಲಿ ಚಂದ್ರ ಅಥವಾ ಲಗ್ನದಿಂದ ದಶಮ ಸ್ಥಾನದಲ್ಲಿ ರವಿ ಅಥವಾ ದಶಮ ಸ್ಥಾನಕ್ಕೆ ರವಿಯ ಪೂರ್ಣ ದೃಷ್ಟಿ ಇದ್ದರೆ ಅಂಥವರು ವ್ಯಾಪಾರಕ್ಕಿಂತಲೂ ಉದ್ಯೋಗ ಮಾಡುವುದೇ ಶುಭ.
ಇನ್ನು ಕೆಲವರಿಗೆ ದಶಾಭುಕ್ತಿಯಲ್ಲಿ ಶುಕ್ರಮಹಾದಶೆ ಮುಗಿದು ರವಿ ಮಹಾದಶಾ ಪ್ರಾರಂಭ ಆದರೆ ಅವರೂ ವ್ಯಾಪಾರ ಮಾಡದಿರುವುದು ಅಥವಾ ವ್ಯಾಪಾರ ಅನಿವಾರ್ಯ ಎಂದಾದಲ್ಲಿ ಮನೆಯಲ್ಲಿ ಯಾರ ಜಾತಕದಲ್ಲಿ ಶುಕ್ರ ಅಥವಾ ಧನ ಲಾಭಾಧಿಪತಿ ಬಲಾಢ್ಯನೋ ಅವರ ಹೆಸರಿನಲ್ಲಿ ವ್ಯವಹಾರ ಮುಂದೆವರಿಸುವುದು ಉತ್ತಮ. ವ್ಯಾಪಾರವನ್ನು ಮಾಡುತ್ತಾ ಚೆನ್ನಾಗಿ ಧನ ಲಾಭ ಗಳಿಸುತ್ತಿರುವವರೂ ಸಹ ಶುಕ್ರವಾರ ಹಾಗೂ ಮಂಗಳವಾರಗಳಲ್ಲಿ ಅನ್ಯರಿಗೆ ಹಣ ಸಂದಾಯ ಮಾಡುತ್ತಾ ಬಂದರೆ ಕ್ರಮೇಣ ವ್ಯಾಪಾರ ಕ್ಷೀಣಿಸಿ ಮುಂದೆ ನಷ್ಟ ಅನುಭವಿಸಬೇಕಾಗುತ್ತದೆ.
ವ್ಯಾಪಾರದಲ್ಲಿ ಧನಲಾಭ ಆಗಬೇಕಾದ ಪಕ್ಷದಲ್ಲಿ ಇನ್ನೊಂದು ಬಹಳ ಮುಖ್ಯವಾಗಿ ಚೆನ್ನಾಗಿ ಇರಬೇಕಾಗಿರುವುದು ವ್ಯಾಪಾರ ಸ್ಥಳ. ಕೇವಲ ವಾಸ್ತು ದೋಷಗಳೇ ಅಲ್ಲದೆ ದೃಷ್ಟಿ, ಮಾಟಮಂತ್ರ, ನಾಗಸಂಚಾರ, ಪ್ರೇತಬಾಧೆ ಹೀಗೆ ಧನ ಲಾಭವನ್ನು ನಾಶ ಮಾಡಲು ಹತ್ತು ಹಲವು ಕಾರಣಗಳಿರುತ್ತವೆ. ಇದನ್ನೆಲ್ಲಾ ತಿಳಿಯಲು ಪ್ರಶ್ನೆ ಶಾಸ್ತ್ರದಲ್ಲಿ ಮಾತ್ರ ಸಾಧ್ಯವಿರುತ್ತದೆ. ಹೀಗಾಗಿ ಜಾತಕ ಇರುವವರಾಗಲಿ, ಇಲ್ಲದವರಾಗಲಿ ವ್ಯಾಪಾರ ಮಾಡಬಯಸಿದರೆ ಮೊದಲು ಪ್ರಶ್ನಾ ಶಾಸ್ತ್ರದ ಮುಖಾಂತರ ಸ್ಥಳ ಶುದ್ಧಿಯ ಬಗ್ಗೆ ತಿಳಿದು ನಂತರ ವ್ಯಾಪಾರ ಮಾಡುವುದು ಉತ್ತಮ. ಮಾಹಿತಿಗಾಗಿ ಮೊ. 9845682380 ಸಂಪರ್ಕಿಸಿ.
- ವಿಠ್ಠಲ್ ಭಟ್
Advertisement