ಈ ಸೃಷ್ಟಿಯು ಕೆಲವು ನಿರ್ದಿಷ್ಟ ಶಕ್ತಿಗಳ ಹತೋಟಿಯಲ್ಲಿದೆ. ನೀವು ಯೋಗ ಸಾಧನೆಯಲ್ಲಿ ಪ್ರಗತಿ ಸಾಧಿಸುತ್ತಾ ಹೋದಂತೆಲ್ಲ ನಿಮಗೆ ಆ ಶಕ್ತಿಗಳು ಅರಿವಿಗೆ ಬರಲಾರಂಭಿಸುತ್ತವೆ. ಪ್ರತಿ ದಿನ ಅಂದರೆ ವರ್ಷಧ ಎಲ್ಲ ಮುನ್ನೂರ ಐವತ್ತು ದಿನಗಳೂ ಒಂದೊಂದು ಶಕ್ತಿ ಈ ಸೃಷ್ಟಿಯನ್ನು ಆಳುತ್ತದೆ. ಆದ್ದರಿಂದ ಯೋಗಾಭ್ಯಾಸದಲ್ಲಿ ನಿಯಮಪಾಲನೆ ಮತ್ತು ನಿತ್ಯ ಅಭ್ಯಾಸಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುವುದು ಅತ್ಯಗತ್ಯ.
ಸಾಧನಾ ಯೋಗವನ್ನು ಒಂದೇ ಒಂದು ದಿನ ತಪ್ಪಿಸಿದರೂ ನೀವು ಆ ದಿನದ ಶಕ್ತಿಯಿಂದ ವಂಚಿತರಾದಂತೆ ಹಾಗೂ ಆ ಇಡೀ ವರ್ಷದ ಸಾಧನೆಯೂ ಫಲಹೀನವಾಗಿ ಬಿಡುತ್ತದೆ. ಬ್ರಹ್ಮಾಂಡ ಇರೋದೇ ಹೀಗೆ. ಒಂದು ದಿನ ನಿರ್ಲಕ್ಷಿಸಿದರೂ ಅದರ ಪರಿಣಾಮ ದೇಹ, ಭೂಮಿ ಮತ್ತು ಇತರೆ ಗ್ರಹ-ನಕ್ಷತ್ರಗಳ ಮೇಲೆ ಆಗುತ್ತದೆ. ಅವುಗಳಿಂದ ನಿಮ್ಮ ಮೇಲೆ ಅಡ್ಡ ಪರಿಣಾಮಗಳೂ ಎರಗುತ್ತವೆ. ಪ್ರತಿಶಕ್ತಿಗೂ ಒಂದೊಂದು ದಿನ ಮೀಸಲಾಗಿದೆ.
ಅದಕ್ಕಾಗಿ ನೀವೇನೋ ಹೋಮಶಾಸ್ತ್ರಗಳನ್ನು ಮಾಡಬೇಕಿಲ್ಲ. ಅದರಿಂದ ಈ ಶಕ್ತಿಯನ್ನು ಒಲಿಸಿಕೊಳ್ಳಲಾಗದು. ಯೋಗ ಮತ್ತು ತಂತ್ರದಲ್ಲಿ ಸಾಧನೆಯೊಂದೇ ಶಕ್ತಿ ಹೊಂದಲು ಇರುವ ಮಾರ್ಗ.
ನಾವು ಪ್ರತಿದಿನದ ಆ ವಿಶೇಷ ಶಕ್ತಿಯ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ. ಅದರ ಸ್ವರೂಪದ ಬಗ್ಗೆ ಅರಿವು ಬೆಳೆಸಿಕೊಳ್ಳಬೇಕಿದೆ. ಪ್ರತಿ ಶಕ್ತಿಗೂ ಒಂದು ಹೆಸರಿದೆ. ಸದ್ಯಕ್ಕೆ ಆ ಮುನ್ನೂರ ಅರವತ್ತೈದು ಶಕ್ತಿಗಳ ಹೆಸರುಗಳ ಬಗ್ಗೆ ಚರ್ಚಿಸುವ ಬದಲು ಅವುಗಳ ಸ್ವರೂಪದ ಬಗ್ಗೆ ಸಂಕ್ಷಿಪ್ತವಾಗಿ ಅರಿಯೋಣ. ಏಕೆಂದರೆ ಪ್ರತಿ ಶಕ್ತಿಯ ಸ್ವರೂಪದ ಮೇಲೆ ಅದರ ಹೆಸರು ಅವಲಂಬಿತವಾಗಿದೆ.
ಗುರುಮುಖೇನ ನೀವು ಧ್ಯಾನ ವಿದ್ಯೆ ಕಲಿತಾಗ ನೀವು ಗುರುವಿನಲ್ಲಿ ಸೂರ್ಯ ಅಥವಾ ಚಂದ್ರನ ರೂಪದ ಶಕ್ತಿಯನ್ನು ನೋಡಬಲ್ಲಿರಿ.
ಧ್ಯಾನ ಆಶ್ರಮದಲ್ಲಿ ಹಲವು ಸಾಧಕರಿದ್ದಾರೆ. ಧ್ಯಾನದ ಮೂಲಕ ಇವರಲ್ಲಿ ಹಲವರು ಸೂರ್ಯರೂಪದ ಶಕ್ತಿಯನ್ನು ಕಂಡಿದ್ದಾರೆ. ಸೂರ್ಯೋದಯ ಅಥವಾ ಸೂರ್ಯಾಸ್ತದ ಹೊತ್ತಿನಲ್ಲಿ ನೀವು ಮಣಿಪೂರಕ ಸ್ಥಿತಿಯಲ್ಲಿ ರಾಮ ಮಂತ್ರವನ್ನು ಜಪಿಸಿ ನೋಡಿ. ನಿಮ್ಮ ಮೈ ಸುತ್ತ ಒಂದು ಕಾಂತಿ ಸೃಷ್ಟಿಯಾಗುತ್ತದೆ. ಆ ಕಾಂತಿ ನಿಮ್ಮ ದೇಹದಿಂದ ಹೊರಸೂಸಲಾರಂಭಿಸುತ್ತದೆ.
ಒಂದೇ ತಿಂಗಳಲ್ಲಿ ನೀವು ಭಿನ್ನವಾಗಿ ಕಾಣಲಾರಂಭಿಸುತ್ತೀರಿ. ನಾನು ಗುರುಮುಖೇನವೇ ಯೋಗಾಭ್ಯಾಸ ಮತ್ತು ಧ್ಯಾನಾಭ್ಯಾಸ ನಡೆಯಬೇಕೆಂದು ಪದೇಪದೇ ಹೇಳಲಿಚ್ಛಿಸುತ್ತೇನೆ. ಇಲ್ಲವಾದರೆ ಅಡ್ಡ ಪರಿಣಾಮಗಳಿಂದ ಕಷ್ಟ ಅನುಭವಿಸುವಂತಾಗುತ್ತದೆ ಎಂಬುದು ನೆನಪಲ್ಲಿಟ್ಟುಕೊಳ್ಳಿ.
ಸೂರ್ಯನ ಹಾಗೆಯೇ ಚಂದ್ರನೂ ಕೂಡ ಶಕ್ತಿಶಾಲಿಯೇ. ಸೂರ್ಯನ ಬೆಳಕಿನ ಪ್ರತಿಫಲನದಿಂದ ಆತ ಬೆಳಗುವುದು ನಿಜವೇ ಆದರೂ, ಬರೀ ಅಷ್ಟೇ ಬೆಳಕಿನ ಶಕ್ತಿಯ ಮುಖಾಂತರ ಸಮುದ್ರಗಳ ಉಬ್ಬರವಿಳಿತ ನಿಯಂತ್ರಿಸುತ್ತಾನೆ ಹಾಗೂ ಪೂರ್ಣಿಮೆಯಂದು ಇಡೀ ಭೂಮಿಯನ್ನು ಬೆಳಗುತ್ತಾನೆ ಎಂಬುದು ಅಚ್ಚರಿಯ ವಿಷಯವಲ್ಲವೇ?
ತುಂಬು ಹುಣ್ಣಿಮೆಯ ದಿನ ಪ್ರಾಣಿಗಳು ಹಿಂಸ್ರಜೀವಿಗಳಾಗುತ್ತವೆ. ಮಾನಸಿಕ ದೌರ್ಬಲ್ಯವಿರುವವರು ಹುಚ್ಚರಂತಾಡ ತೊಡಗುತ್ತಾರೆ, ಅಪಘಾತಗಳು ಗಲಾಟೆ ದೊಂಬಿಗಳು ವಿನಾಕಾರಣವೆಂಬಂತೆ ನಡೆಯುತ್ತವೆ. ಇದು ಶಕ್ತಿಯ ಸತ್ಪರಿಣಾಮಗಳೋ ದುಷ್ಪರಿಣಾಮಗಳೋ ಎಂಬುದು ಪರಿಸ್ಥಿತಿಯ ಮೇಲೆ ಅವಲಂಬಿತ. ಆದರೆ ಇದರ ಸಂಪೂರ್ಣ ಅರಿವು ಮೂಡಿಸಿಕೊಳ್ಳುವಲ್ಲಿ ಸನಾತನ ಕ್ರಿಯೆಯ ಅಭ್ಯಾಸದ ಪಾತ್ರ ದೊಡ್ಡದು.
- ಯೋಗಿ ಅಶ್ವಿನಿ
Advertisement