ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯಂದು ಪ್ರಾರಂಭವಾಗುವ ಈ ಸಭೆ ವಿದ್ವತ್ ವಲಯದಲ್ಲಿ, ಜಿಜ್ಞಾಸುಗಳ ವಲಯದಲ್ಲಿ ಮಹಾಗಣಪತಿ ವಾಕ್ಯಾರ್ಥ ಸಭೆ ಎಂದೇ ಪ್ರಸಿದ್ಧಿ ಪಡೆದಿದೆ. ಶಾಸ್ತ್ರವೇತ್ತರೂ, ಪಂಡಿತರೂ, ವಿದ್ವಾಂಸರೂ ಆದ ಶೃಂಗೇರಿಯ ಜಗದ್ಗುರುಗಳ ಸಮ್ಮುಖದಲ್ಲಿ ಪ್ರತಿ ವರ್ಷ ಸತತ 12 ದಿನಗಳ ಕಾಲ ನ್ಯಾಯ, ಸಾಂಖ್ಯಾದಿಯಗಿ ಷಟ್ದರ್ಶನಗಳ ವಿಷಯಗಳ ಕುರಿತು ಪ್ರತಿ ದಿನವೂ 3-4 ಗಂಟೆಗಳ ಕಾಲ ವಾಕ್ಯಾರ್ಥ ಸಭೆ ನಡೆಯುತ್ತದೆ. ಭಾರತೀಯ ದರ್ಶನಗಳ ಬಗ್ಗೆ ಆಳವಾದ ಚರ್ಚೆ, ಚಿಂತನೆ ಅಂದರೇನೆಂದು ತಿಳಿಯಲು ಮಹಾಗಣಪತಿ ವಾಕ್ಯಾರ್ಥ ಸಭೆ ಅತ್ಯುತ್ತಮ ವೇದಿಕೆಯಾಗಿದ್ದು, ಭಾರತದ ಪುರಾತನ ವಿದ್ಯೆಗಳನ್ನು ಈ ಕ್ಷಣಕ್ಕೂ ಶ್ರೇಷ್ಠ ಮಾರ್ಗದಲ್ಲಿ ಪೋಷಿಸಿಕೊಂಡು ಬರುತ್ತಿದೆ. ಈ ವಾಕ್ಯಾರ್ಥ ಸಭೆಗೆ ಕೇವಲ ದಕ್ಷಿಣ ಭಾರತವಷ್ಟೇ ಅಲ್ಲದೇ ಭಾರತದ ಯಾವುದೇ ಭಾಗದಲ್ಲಿನ ಸಂಸ್ಕೃತ ಪರಂಪರಾಗತ ವಿದ್ವಾಂಸರೂ ಇದರಲ್ಲಿ ಭಾಗವಹಿಸುತ್ತಾರೆ. ವಿದ್ವತ್ ವಲಯದಲ್ಲಿ ಶೃಂಗೇರಿಯ ಗಣಪತಿ ಮಹಾವಾಕ್ಯಾರ್ಥ ಸಭೆ ಎಂದರೆ ಅದೊಂದು ರೋಮಾಂಚನಗೊಳಿಸುವ, ವಿದ್ಯುತ್ ಸಂಚಾರವಾಗಿಸುವ ಭಾವನೆ ಇದೆ. ಒಂದೇ ಒಂದು ಪದವನ್ನೂ ತಪ್ಪಾಡದ ಸಿದ್ಧಿಯೊಂದು ಇರುವವ ಮಾತ್ರ ಆ ಸಭೆಯಲ್ಲಿ ಮಾತಾಡಬಲ್ಲ ಅವಕಾಶವಿದೆ. ಹಾಗಾಗಿಯೇ ಪ್ರತಿಯೊಬ್ಬ ವಿದ್ವಾಂಸನಿಗೂ ತನ್ನ ಜೀವಿತಾವಧಿಯಲ್ಲಿ ಶಾರದೆಯ ಅಪರಾವತಾರದಂತಿರುವ ಜಗದ್ಗುರುಗಳ ಸಮ್ಮುಖದಲ್ಲಿ ಶಾಸ್ತ್ರ ಚರ್ಚೆ ಮಾಡುವುದು ಒಂದು ಬಲುದೊಡ್ಡ ಕನಸಾಗಿರುತ್ತದೆ.