ಗಣೇಶ ಹಬ್ಬದ ವಿಶೇಷ: ಭಾರತೀಯ ಪುರಾತನ ವಿದ್ಯೆಗಳನ್ನು ಪೋಷಿಸುತ್ತಿರುವ ಶೃಂಗೇರಿಯ ಮಹಾಗಣಪತಿ ವಾಕ್ಯಾರ್ಥ ಸಭೆ!

ಆದಿ ಶಂಕರಾಚಾರ್ಯರು ಪ್ರಾರಂಭಿಸಿದ ದಕ್ಷಿಣಾಮ್ನಾಯ ಶೃಂಗೇರಿ ಪೀಠದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಮಹಾವಾಕ್ಯಾರ್ಥ ಸಭೆ (ವಿದ್ವತ್ ಸಭೆ) ನಡೆಯಲಿದ್ದು, ವಿದ್ವಾಂಸರ ಪಾಲಿಗೆ ನಿಜಕ್ಕೂ ಇದು ಮಹತ್ವದ ಹಬ್ಬವೇ...
ಶೃಂಗೇರಿ ಶಾರದಾ ಪೀಠದಲ್ಲಿ ನಡೆಯುವ ಮಹಾಗಣಪತಿ ವಾಕ್ಯಾರ್ಥ ಸಭೆ( ಸಂಗ್ರಹ ಚಿತ್ರ)
ಶೃಂಗೇರಿ ಶಾರದಾ ಪೀಠದಲ್ಲಿ ನಡೆಯುವ ಮಹಾಗಣಪತಿ ವಾಕ್ಯಾರ್ಥ ಸಭೆ( ಸಂಗ್ರಹ ಚಿತ್ರ)
ಗಣೇಶ ಚತುರ್ಥಿ ಭಾರತದಾದ್ಯಂತ ಅತಿ ಹೆಚ್ಚು ಸಂಭ್ರಮದಿಂದ, ಹೆಚ್ಚು ದಿನಗಳು ವಿವಿಧ ಸ್ವರೂಪಗಳಲ್ಲಿ ನಡೆಯುವ ಮನೆ ಮನೆಗಳ ಹಬ್ಬ. ಮನೆ ಮನೆಗಳ ಹಬ್ಬ ಎನ್ನುವುದಕ್ಕಿಂತಲೂ ಉಳಿದ ಹಬ್ಬಗಳಿಗಿಂತ ಹೆಚ್ಚು ಸಾಮಾಜಿಕವಾಗಿ, ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಹಬ್ಬ ಎಂದರೆ ಹೆಚ್ಚು ಸೂಕ್ತವಾಗುದೇನೋ. 
ಗಣೇಶ ಹಬ್ಬ ಸಾರ್ವಜನಿಕ ಕಾರ್ಯಕ್ರಮಗಳ ರೂಪದಲ್ಲಿ, ಚಳುವಳಿಗಳಿಗೆ ಜನರನ್ನು ಒಗ್ಗೂಡಿಸುವ, ಸಮಾಜದ ಹಿತಕ್ಕಾಗಿ ನಡೆಯುವ ಯೋಜನೆಗಳಿಗೆ ಸಾರ್ವಜನಿಕರನ್ನು ಒಂದಾಗಿ ಸೇರಿಸುವ ಹಬ್ಬವಾಗಿಯೂ ಅದೆಷ್ಟೋ ಸಂದರ್ಭಗಳಲ್ಲಿ ಆಚರಣೆಯಾಗಿದೆ. ಇದಕ್ಕೆ ಬಾಲಗಂಗಾಧರ ತಿಲಕರು ಗಣೇಶೋತ್ಸವವನ್ನು ಗಣೇಶನ ಹಬ್ಬವನ್ನು ಸ್ವಾತಂತ್ರ್ಯ ಹೋರಾಟದ ಉದ್ದೇಶ ಮತ್ತು ಅಗತ್ಯತೆಯನ್ನು ಜನರಿಗೆ ಮನವರಿಕೆ ಸಮರ್ಥವಾಗಿ ಬಳಸಿಕೊಂಡರು. ಅಂದು ತಿಲಕರು ಪ್ರಾರಂಭಿಸಿದ ಗಣೇಶೋತ್ಸವ ಮಹಾರಾಷ್ಟ್ರದಲ್ಲಿ ಇಂದಿಗೂ ಹಲವು ದಿನಗಳ ಕಾಲ ವಿಜೃಂಭಣೆಯಿಂದ ನಡೆಯುತ್ತದೆ. 
ಸಾರ್ವಜನಿಕ ಕಾರ್ಯಕ್ರಮವಾಗಿಯಷ್ಟೇ ಅಲ್ಲದೇ ಗಣೇಶ ಹಬ್ಬ ಸಂಸ್ಕೃತಿ, ಪುರಾತನ ವಿದ್ಯೆಗಳನ್ನು ಪೋಷಿಸುವ ಹಬ್ಬವಾಗಿಯೂ ಪರಂಪರಾಗತವಾಗಿ ನಡೆದುಕೊಂಡು ಬರುತ್ತಿರುವುದು ಮತ್ತೊಂದು ವಿಶೇಷವಾಗಿದೆ. ಜೀವಾತ್ಮ-ಪರಮಾತ್ಮ ಎರಡೂ ಒಂದೇ ಆಗಿದೆ ಎಂದ್ಮು ಅದ್ವೈತ ತತ್ವವನ್ನು ಸಾರಿದ ಆದಿ ಶಂಕರಾಚಾರ್ಯರು ಪ್ರಾರಂಭಿಸಿದ ದಕ್ಷಿಣಾಮ್ನಾಯ ಶೃಂಗೇರಿ ಪೀಠದಲ್ಲಿ ಗಣೇಶ ಹಬ್ಬದ ಸಂದರ್ಭದಲ್ಲಿ ಮಹಾವಾಕ್ಯಾರ್ಥ ಸಭೆ (ವಿದ್ವತ್ ಸಭೆ) ನಡೆಯಲಿದ್ದು, ವಿದ್ವಾಂಸರ ಪಾಲಿಗೆ ನಿಜಕ್ಕೂ ಇದು ಮಹತ್ವದ ಹಬ್ಬವೇ ಆಗಿದೆ. 
ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲಪಕ್ಷದ ಚತುರ್ಥಿಯಂದು ಪ್ರಾರಂಭವಾಗುವ ಈ ಸಭೆ ವಿದ್ವತ್ ವಲಯದಲ್ಲಿ, ಜಿಜ್ಞಾಸುಗಳ ವಲಯದಲ್ಲಿ  ಮಹಾಗಣಪತಿ ವಾಕ್ಯಾರ್ಥ ಸಭೆ ಎಂದೇ ಪ್ರಸಿದ್ಧಿ ಪಡೆದಿದೆ. ಶಾಸ್ತ್ರವೇತ್ತರೂ, ಪಂಡಿತರೂ, ವಿದ್ವಾಂಸರೂ ಆದ ಶೃಂಗೇರಿಯ ಜಗದ್ಗುರುಗಳ ಸಮ್ಮುಖದಲ್ಲಿ ಪ್ರತಿ ವರ್ಷ ಸತತ 12 ದಿನಗಳ ಕಾಲ ನ್ಯಾಯ, ಸಾಂಖ್ಯಾದಿಯಗಿ ಷಟ್ದರ್ಶನಗಳ ವಿಷಯಗಳ ಕುರಿತು ಪ್ರತಿ ದಿನವೂ 3-4 ಗಂಟೆಗಳ ಕಾಲ ವಾಕ್ಯಾರ್ಥ ಸಭೆ ನಡೆಯುತ್ತದೆ. ಭಾರತೀಯ ದರ್ಶನಗಳ ಬಗ್ಗೆ ಆಳವಾದ ಚರ್ಚೆ, ಚಿಂತನೆ ಅಂದರೇನೆಂದು ತಿಳಿಯಲು ಮಹಾಗಣಪತಿ ವಾಕ್ಯಾರ್ಥ ಸಭೆ ಅತ್ಯುತ್ತಮ ವೇದಿಕೆಯಾಗಿದ್ದು, ಭಾರತದ ಪುರಾತನ ವಿದ್ಯೆಗಳನ್ನು ಈ ಕ್ಷಣಕ್ಕೂ ಶ್ರೇಷ್ಠ ಮಾರ್ಗದಲ್ಲಿ ಪೋಷಿಸಿಕೊಂಡು ಬರುತ್ತಿದೆ. ಈ ವಾಕ್ಯಾರ್ಥ ಸಭೆಗೆ ಕೇವಲ ದಕ್ಷಿಣ ಭಾರತವಷ್ಟೇ ಅಲ್ಲದೇ ಭಾರತದ ಯಾವುದೇ ಭಾಗದಲ್ಲಿನ ಸಂಸ್ಕೃತ ಪರಂಪರಾಗತ ವಿದ್ವಾಂಸರೂ ಇದರಲ್ಲಿ ಭಾಗವಹಿಸುತ್ತಾರೆ. ವಿದ್ವತ್ ವಲಯದಲ್ಲಿ ಶೃಂಗೇರಿಯ ಗಣಪತಿ ಮಹಾವಾಕ್ಯಾರ್ಥ ಸಭೆ ಎಂದರೆ ಅದೊಂದು ರೋಮಾಂಚನಗೊಳಿಸುವ, ವಿದ್ಯುತ್ ಸಂಚಾರವಾಗಿಸುವ ಭಾವನೆ ಇದೆ. ಒಂದೇ ಒಂದು ಪದವನ್ನೂ ತಪ್ಪಾಡದ ಸಿದ್ಧಿಯೊಂದು ಇರುವವ ಮಾತ್ರ ಆ ಸಭೆಯಲ್ಲಿ ಮಾತಾಡಬಲ್ಲ ಅವಕಾಶವಿದೆ. ಹಾಗಾಗಿಯೇ ಪ್ರತಿಯೊಬ್ಬ ವಿದ್ವಾಂಸನಿಗೂ ತನ್ನ ಜೀವಿತಾವಧಿಯಲ್ಲಿ ಶಾರದೆಯ ಅಪರಾವತಾರದಂತಿರುವ ಜಗದ್ಗುರುಗಳ ಸಮ್ಮುಖದಲ್ಲಿ ಶಾಸ್ತ್ರ ಚರ್ಚೆ ಮಾಡುವುದು ಒಂದು ಬಲುದೊಡ್ಡ ಕನಸಾಗಿರುತ್ತದೆ. 
ಗಣೇಶ ಚತುರ್ಥಿಯ ದಿನದಂದು ಪ್ರಾರಂಭವಾಗುವ ಈ ವಾಕ್ಯಾರ್ಥ ಸಭೆ ಅನಂತಪದ್ಮನಾಭ ವ್ರತ (ಭಾದ್ರಪದ ಶುಕ್ಲ ಪಕ್ಷದ ಚತುರ್ದಶಿ)ಯ ದಿನದವರೆಗೆ ನಡೆಯಲಿದ್ದು, ವಿದ್ವತ್ ಸಭೆ ಮುಕ್ತಾಯಗೊಳ್ಳುವ ದಿನದಂದು ಉತ್ತಮವಾಗಿ ಪ್ರಸ್ತುತಿ ನೀಡಿದ ವಿದ್ವಾಂಸರುಗಳಿಗೆ ಸುವರ್ಣ ಅಂಗುಲಿ (ಮುದ್ರೆಯನ್ನು ಹೊಂದಿರುವ ಬಂಗಾರದ ಉಂಗುರ)ವನ್ನು ನೀಡಿ ಆಶೀರ್ವದಿಸುತ್ತಾರೆ. 
ಮಹಾಗಣಪತಿ ವಾಕ್ಯಾರ್ಥ್ಯ ಸಭೆ ಮೊದಲು ಪ್ರಾರಂಭಗೊಂಡಿದ್ದು ಅಭಿನವ ಶಂಕರರೆಂದೇ ಖ್ಯಾತರಾಗಿದ್ದ  ಜಗದ್ಗುರು ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮಿಗಳ ಅವಧಿಯಲ್ಲಿ  
ಶೃಂಗೇರಿಯ ಅವಿಚ್ಛಿನ್ನ ಗುರುಪರಂಪರೆಯಲ್ಲಿ 33 ನೇ ಪೀಠಾಧಿಪತಿಗಳಾಗಿದ್ದ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮಿಗಳು ಅಭಿನವ ಶಂಕರರೆಂದೇ ಪ್ರಸಿದ್ಧಿ ಪಡೆದಿದ್ದರು. ದೇಶ ವಿದೇಶಗಳಲ್ಲಿ ಅವರಿಗೆ ಅನುಯಾಯಿಗಳಿದ್ದರು. ಶಂಕರ ಜಯಂತಿಯ ದಿನವನ್ನು ಸ್ಪಷ್ಟವಾಗಿ ತಿಳಿಸಿ ಶಂಕರ ಜಯಂತಿಯ ಆಚರಣೆಯನ್ನು ಪ್ರಾರಂಭಿಸಿದ್ದೂ, ಕೇರಳದಲ್ಲಿ ಶಂಕರರು ಜನ್ಮಿಸಿದ ಸ್ಥಳವನ್ನು ಗುರುತಿಸಿ ಆ ಪ್ರದೇಶವನ್ನು ಅಭಿವೃದ್ಧಿಪಡಿಸಿ ಶಂಕರ ಮಠವನ್ನು ಸ್ಥಾಪಿಸಿದವೂ ಸಹ ಸಚ್ಚಿದಾನಂದ ಶಿವಾಭಿನವ ನೃಸಿಂಹ ಭಾರತೀ ಸ್ವಾಮಿಗಳೇ ಆಗಿರುತ್ತಾರೆ. ನಶಿಸುತ್ತಿರುವ ವೇದ-ವೇದಾಂತ, ಭಾರತೀಯ ದರ್ಶನಗಳ ವಿದ್ಯೆಯನ್ನು ಪುನರುದ್ಧಾರ ಮಾಡುವ ನಿಟ್ಟಿನಲ್ಲಿ ವೇದ ವಿದ್ವಾಂಸರನ್ನು ಪೋಷಿಸುವ ಉದ್ದೇಶದಿಂದ ಈಗ ಶೃಂಗೇರಿಯಲ್ಲಿ ನಡೆಯುತ್ತಿರುವ ಮಹಾಗಣಪತಿ ವಾಕ್ಯಾರ್ಥ ಸಭೆಯನ್ನು ಮೊಟ್ಟ ಮೊದಲಿಗೆ ಪ್ರಾರಂಭಿಸಿದ ಗುರುಗಳಾಗಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com