ಬೆಲಗೂರು ಕ್ಷೇತ್ರದಲ್ಲಿ ವೀರ ಪ್ರತಾಪ ಆಂಜನೇಯ ಸ್ವಾಮಿಯಷ್ಟೇ ಅಲ್ಲದೇ ಶಿವ, ವಿಷ್ಣು ದೇವಾಲಯಗಳೂ ಇದ್ದು, ಪ್ರತಿ ಹುಣ್ಣಿಮೆಯ ದಿನದಂದು ವಿಶೇಷ ಪೂಜೆ, ಹೋಮಗಳು ನಡೆಯುವುದು ಕ್ಷೇತ್ರದ ಮತ್ತೊಂದು ವಿಶೇಷತೆಯಾಗಿದೆ. ಪ್ರಶಾಂತ ವಾತವಾರಣವಿರುವ ಬೆಲಗೂರಿನ ಆಂಜನೇಯ ಸ್ವಾಮಿಯ ದರ್ಶನದಿಂದ ಅನೇಕರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಿರುವ ಉದಾಹರಣೆಗಳು ಸಾಕಷ್ಟಿದ್ದು, ನಾಸ್ತಿಕರೂ ಸಹ ಕ್ಷೇತ್ರದ ಮಹಿಮೆಗೆ ಮಾರುಹೋಗಿರುವ ಅನೇಕ ನಿದರ್ಶನಗಳಿದ್ದು, ಬೆಲಗೂರು ಕ್ಷೇತ್ರ ಹನುಮಂತನ ಸಾನ್ನಿಧ್ಯವಿರುವ ಕರ್ನಾಟಕದಲ್ಲಿನ ಪವಿತ್ರ ಕ್ಷೇತ್ರಗಳಲ್ಲಿ ಒಂದೆನಿಸಿದೆ.