ಮಹಾಭಾರತದಲ್ಲೂ ಇದ್ದರು ರಾಮನ ವಂಶಸ್ಥರು? ಕುರುಕ್ಷೇತ್ರದ ಯುದ್ಧದಲ್ಲಿ ಬೆಂಬಲಿಸಿದ್ದು ಯಾರನ್ನ?

ರಾಮನ ಇಕ್ಷ್ವಾಕು ವಂಶಕ್ಕೆ ಸೇರಿದವರು ಮಹಾಭಾರತದ ಕಾಲದಲ್ಲೂ ಇದ್ದರೆಂದು ತಿಳಿಯುತ್ತದೆ.
ಮಹಾಭಾರತ
ಮಹಾಭಾರತ
ರಾಮಾಯಣ ಹಾಗೂ ಮಹಾಭಾರತ ಭಾರತದ ಎರಡು ಮಹಾನ್ ಚರಿತ್ರೆಗಳು. ರಾಮಾಯಣ ಮಹಾಭಾರತ ಎರಡೂ ನಿಜವಾಗಿಯೂ ನಡೆದ ಘಟನೆಗಳು ಎಂದು ಹಲವು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಪೂರಕವಾದ ದಾಖಲೆಗಳೂ ಸಿಕ್ಕಿವೆ. ಒಂದು ವೇಳೆ ರಾಮಾಯಣ ಹಾಗೂ ಮಹಾಭಾರತ ನಿಜವಾಗಿದ್ದರೆ ರಾಮಾಯಣದಲ್ಲಿನ ವಿಷ್ಣುವಿನ ಅವತಾರ ರಾಮನ ವಂಶಸ್ಥರು ಮಹಾಭಾರತದಲ್ಲೂ ಇದ್ದರಾ? ಇದ್ದರೆ ಕುರುಕ್ಷೇತ್ರ ಯುದ್ಧದಲ್ಲಿ ಯಾರ ಪರವಾಗಿ ಹೋರಾಡಿದ್ದರು ಎಂಬ ಕೂತೂಹಲ ಮೂಡುತ್ತದೆ. 
ರಾಮಾಯಣದಲ್ಲಿನ ಅವತಾರ ಪುರುಷ ರಾಮನ ಇಕ್ಷ್ವಾಕು ವಂಶಕ್ಕೆ ಸೇರಿದವರು ಮಹಾಭಾರತದ ಕಾಲದಲ್ಲೂ ಇದ್ದರೆಂದು ತಿಳಿಯುತ್ತದೆ. ಶ್ರೀರಾಮನಿಗೆ ಮೂರು ಸಹೋದರರು. ಈ ಪೈಕಿ ಭರತ ತಕ್ಷಶಿಲೆ ನಗರಿಯನ್ನು ನಿರ್ಮಿಸಿದ, ಅದೇ ಮುಂದೆ ತಕ್ಷಶಿಲಾ ವಿಶ್ವವಿದ್ಯಾನಿಲಯ ಎಂದು ಪ್ರಸಿದ್ಧಿ ಪಡೆದು ಇಂದು ಪಾಕಿಸ್ತಾನ ಪ್ರಾಂತ್ಯದಲ್ಲಿರುವ ತಕ್ಸಿಲಾ ನಗರ ಎಂದು ಕರೆಯಲ್ಪಡುತ್ತಿದೆ. ಲಕ್ಷ್ಮಣ ನಿರ್ಮಿಸಿದ್ದ ಲಕ್ಷ್ಮಣ ಪುರಿ ಎಂಬ ನಗರವನ್ನು ಇಂದು ಲಖನೌ ಎಂದು ಕರೆಯುತ್ತಿದ್ದೇವೆ. ಇನ್ನು ರಾಮನ ಮತ್ತೋರ್ವ ಸಹೋದರ ಶತೃಘ್ನ ನಿರ್ಮಿಸಿದ್ದ ಮಧುವನ ಮಥುರಾ ನಗರವಾಗಿದ್ದು ಮಹಾಭಾರತದಲ್ಲಿ ವಿಷ್ಣುವಿನ ಅವತಾರವಾಗಿದ್ದ ಶ್ರೀಕೃಷ್ಣ ಜನ್ಮಿಸಿದ ಪ್ರದೇಶವಾಗಿದೆ. 
ಇವಿಷ್ಟು ರಾಮನ ಸಹೋದರರ ಬಗೆಗಿನ ಮಾಹಿತಿ. ಎಲ್ಲರಿಗೂ ತಿಳಿದಿರುವಂತೆಯೇ ರಾಮನಿಗೆ ಲವ-ಕುಶ ಇಬ್ಬರು ಮಕ್ಕಳು ಅವರು ಹುಟ್ಟಿದ್ದು ಇಂದಿನ ಅಮೃತಸರವಾಗಿರುವ ಅಂದಿಮ ರಾಮತೀರ್ಥ ಎಂಬ ಪ್ರದೇಶದಲ್ಲಿದ್ದ ವಾಲ್ಮೀಕಿ ಋಷಿಗಳ ಆಶ್ರಮದಲ್ಲಿ. ವಾಲ್ಮೀಕಿಗಳು ಜೀವಿಸಿದ್ದರೆಂಬ ಪ್ರದೇಶದಲ್ಲಿ ರಾಮತೀರ್ಥ ದೇವಾಲಯವಿದ್ದು, ಸಣ್ಣ ಗುಡಿಸಲನ್ನು ನಿರ್ಮಿಸಲಾಗಿದೆ. 
ಇಂದಿನ ಲಾಹೋರ್ ನ್ನು ರಾಮನ ಮಗ ಲವ ನಿರ್ಮಿಸಿದ್ದೆಂಬ ಪ್ರತೀತಿ ಇದೆ. ಶ್ರೀರಾಮನ ನಂತರ ಲವ-ಕುಶರು ಆಯೋಧ್ಯೆಯ ಉತ್ತರ ಭಾಗವನ್ನು ಹಾಗೂ ಅಲ್ಲಿಂದ ಕೋಸಲದ ಪೂರ್ವಭಾಗವನ್ನು ಆಳುತ್ತಿದ್ದರು. ಇದೇ ಪ್ರದೇಶ ಅಂದರೆ ಕೋಸಲ ಸಾಮ್ರಾಜ್ಯ ಮಹಾಭಾರತದ ಕಾಲದ ವೇಳೆಗೆ 5 ಭಾಗಗಳಾಗಿತ್ತು. ಅವೇ ಉತ್ತರ, ದಕ್ಷಿಣ, ಪೂರ್ವ ಹಾಗೂ ಮಧ್ಯ ಕೋಸಲಗಳು, ಮಧ್ಯ ಕೋಸಲ ಹಾಗೂ ದಕ್ಷಿಣ ಕೋಸಲದ ನಡುವಿನ ಒಂದಷ್ಟು ಭಾಗವನ್ನು ಆಳುತ್ತಿದ್ದವರೇ ರಾಮನ ವಂಶಸ್ಥರೆಂಬ ಪ್ರತೀತಿದೆ ಇದೆ.
ಮಹಾಭಾರತದ ಕಾಲಕ್ಕೆ ಪೂರ್ವ ಕೋಸಲವನ್ನು ಮಗಧ ರಾಜ ಜರಾಸಂಧ ವಶಪಡಿಸಿಕೊಂಡರೆ, ರಾಮ ಆಳುತ್ತಿದ್ದ ಮಧ್ಯ ಕೋಸಲವನ್ನು ಧೀರ್ಘಾಯಗ್ನ್ಯಾ ಎಂಬ ರಾಜ ಆಳುತ್ತಿದ್ದ ಹಾಗೂ ಅಯೋಧ್ಯೆಯನ್ನೇ ರಾಜಧಾನಿಯನ್ನಾಗಿರಿಸಿಕೊಂಡಿದ್ದ. ಇನ್ನು ಉತ್ತರ ಕೋಸಲ ಸಾಮ್ರಾಜ್ಯವನ್ನು ಪಾಂಡವ ಸಹೋದರರಾದ ಭೀಮ, ದಕ್ಷಿಣ ಕೋಸಲ ಸಾಮ್ರಾಜ್ಯವನ್ನು ಸಹದೇವ ಸೇನಾ ದಂಡಯಾತ್ರೆಯಲ್ಲಿ ವಶಪಡಿಸಿಕೊಂಡಿದ್ದರು. 
ಮಹಾಭಾರತದಲ್ಲಿ ರಾಮನ ಮಗ ಕುಶನ ಮುಂದಿನ ಪೀಳಿಗೆ
ಮಧ್ಯ ಕೋಸಲ ಹಾಗೂ ದಕ್ಷಿಣ ಕೋಸಲದ ನಡುವಿನ ಒಂದಷ್ಟು ಭಾಗವನ್ನು ಆಳುತ್ತಿದ್ದವರು ಕುಶನ ಮುಂದಿನ ಪೀಳಿಗೆಗೆ ಸೇರಿದ ಬೃಹದ್ಬಲ ಎಂಬ ರಾಜ. ರಾಮನ ಮಗ ಕುಶ ನ  ನಂತರ ಬಂದ 28 ನೇ ರಾಜನೇ ಈ ಬೃಹದ್ಬಲ ಎಂಬ ನಂಬಿಕೆ ಇದೆ. ಅಚ್ಚರಿಯೆಂದರೆ ಈ ಬೃಹದ್ಬಲ ಕುರುಕ್ಷೇತ್ರದಲ್ಲಿಯೂ ಭಾಗಿಯಾಗಿದ್ದು ಕೌರವರ ಪರವಾಗಿ ಹೋರಾಡಿದ್ದ ಎಂಬ ನಂಬಿಕೆ ಇದೆ. ರಾಮನ ಇಕ್ಷ್ವಾಕು ವಂಶಕ್ಕೆ ಸೇರಿದವರು ನಂದರ ಕಾಲದಲ್ಲಿಯೂ ಇದ್ದರೆಂದೂ ಕೊನೆಯ ರಾಜ ಸುಮಿತ್ರನನ್ನು ಮಹಾಪದ್ಮನಂದ ಸೋಲಿಸಿದನೆಂದೂ ಹೇಳಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com