ವಿರೋಧಿಗಳ ವಾದಕ್ಕೂ ಅವರ ವಾದವೇ ಆಕರ, ಧರ್ಮಕ್ಕೂ ಅವರೇ ಆಧಾರ: ನಮಾಮಿ ಭಗವತ್ಪಾದ ಶಂಕರ!

ಶಂಕರರು ಕೇವಲ ತಮ್ಮ ವಾದಗಳಿಂದಷ್ಟೆ ನಮಗೆ ಆಪ್ತರಾಗುವುದಿಲ್ಲ, ಶಂಕರರಲ್ಲಿ ನಾವು ಅದ್ಭುತ ಕಾವ್ಯರಚಿಸುವ ಸಾಮರ್ಥ್ಯವನ್ನೂ ಕಾಣಬಹುದಾಗಿದೆ. ಅವರು ರಚಿಸಿದ್ದ ಎಷ್ಟೋ ಸಾವಿರ ಸ್ತೋತ್ರಗಳಲ್ಲಿ....
ಆದಿ ಶಂಕರಾಚಾರ್ಯ
ಆದಿ ಶಂಕರಾಚಾರ್ಯ
ತುಂಬಾ ಹಿಂದಿನ ಘಟನೆಯೇನು ಅಲ್ಲ, 1912 ರ ಮಾತು. ಶೃಂಗೇರಿಯ ಪೀಠಕ್ಕೆ
ಉತ್ತರಾಧಿಕಾರಿಯಾಗಿ ನಿಯುಕ್ತಿಗೊಂಡಿದ್ದ ಪ್ರಿಯ ಶಿಷ್ಯನಿಗೆ ಸನ್ಯಾಸ ದೀಕ್ಷೆ ಕೊಡುವ ಮುನ್ನವೇ 33 ನೇ ಪೀಠಾಧಿಪತಿಗಳಾಗಿದ್ದ ಶಿವಾಭಿನವ ನೃಸಿಂಹ ಭಾರತೀ ಸ್ವಾಮಿಗಳು ವಿದೇಹ ಮುಕ್ತಿ ಪಡೆದರು. ಆಗ ಶೃಂಗೇರಿಯ ಮುಂದಿನ ಪೀಠಾಧಿಪತಿಗಳಾಗಬೇಕಿದ್ದ ನೃಸಿಂಹ(ಚಂದ್ರಶೇಖರ ಭಾರತೀ ಸ್ವಾಮಿಗಳು) ಬೆಂಗಳೂರಿನ ವೇದಪಾಠಶಾಲೆಯಲ್ಲಿ ಅಧ್ಯಯನ ಮಾಡುತ್ತಿದ್ದರು. ಬ್ರಹ್ಮಚಾರಿ ನೃಸಿಂಹ ಸನ್ಯಾಸ ದೀಕ್ಷೆಗಾಗಿ ಬೆಂಗಳೂರಿನಿಂದ ಶೃಂಗೇರಿಗೆ ತಲುಪುವುದಕ್ಕೆ ಬರೊಬ್ಬರಿ ಮೂರು ದಿನಗಳು ಬೇಕಾದವು. ವಾಹನ ಸಂಚಾರವಿರಲಿಲ್ಲ, ಸೌಲಭ್ಯವೂ ಇರಲಿಲ್ಲ. 100 ವರ್ಷಗಳ ಹಿಂದಿನ ಪರಿಸ್ಥಿತಿಯೇ ಹೀಗಿರಬೇಕಾದರೆ ಇನ್ನು ಕನಿಷ್ಠವೆಂದರೂ 1,000 ವರ್ಷಗಳ ಹಿಂದಿನ ಪರಿಸ್ಥಿತಿ ಇನ್ನು ಹೇಗಿರಬಹುದು? ಯಾವ ಸೌಲಭ್ಯವಿದ್ದೀತು? ಯಾವ ಆರ್ಥಿಕ ನೆರವು ಇದ್ದೀತು? ಅವರು ಸ್ಥಾಪಿಸಿದ ಪೀಠಗಳಿಗೆ ಕಾಲಾನುಕ್ರಮದಲ್ಲಿ ರಾಜ ಪರಿವಾರ ಮಾನ್ಯತೆ ನೀಡಿ ಸಕಲ ಮರ್ಯಾದೆಗಳನ್ನೂ ನೀಡುತ್ತಿದ್ದವು. ಆದರೆ ಶಂಕರರಿಗೆ ರಾಜಾಶ್ರಯವೂ ಇರಲಿಲ್ಲ. ಆದಾಗ್ಯೂ ಭಾರತ ದೇಶವನ್ನು ಕಾಲ್ನಡಿಗೆಯಲ್ಲಿ ಸಂಚರಿಸಿ ವೇದಾಂತ ಚಿಂತನೆ, ಸನಾತನ ಧರ್ಮದ ಅದ್ವೈತ ಸಿದ್ಧಾಂತವನ್ನು ಪುನಃ ಪ್ರತಿಷ್ಠಾಪಿಸಿದರಲ್ಲಾ ಶಂಕರರು... ಅವರ ಪರಿಭ್ರಮಣ ಶಕ್ತಿ ಅದೆಂಥಹ ಪ್ರಭಾವಿಯಾಗಿದ್ದೀತು? ಅವರ ವಾದದಲ್ಲಿ ಅದೆಂಥಹ ಪ್ರಭಾವವಿದ್ದಿರಬಹುದು? ಹಾಗಾಗಿಯೇ ಅವರ ವಾದ ಮಂಡನೆಗೆ ಎಲ್ಲಾ ಶಾಖೆಗಳೂ ಮಾನ್ಯತೆ ಕೊಟ್ಟಿದ್ದವು. 
ಹಿಂದೆ ಶಂಕರರನ್ನು ವಿರೋಧಿಸುತ್ತಿದ್ದ ವಿರೋಧಿಗಳೂ ಸಹ ಮುಂದೆ ತಮ್ಮ ವಾದದಲ್ಲಿ ಶಂಕರರನ್ನೇ ಆಕರವಾಗಿಟ್ಟುಕೊಳ್ಳಬೇಕಾದಂತೆ ಶಂಕರರು ಧರ್ಮಪ್ರಚಾರ ಮಾಡಿದ್ದರು. ಶಂಕರರು ಇಷ್ಟೆಲ್ಲಾ ಮಾಡಿದರೆಂದ ಮಾತ್ರಕ್ಕೆ ಅವರೇನು ಹೊಸದಾಗಿ ಸೃಷ್ಟಿಸಿ ಸನಾತನ ಧರ್ಮಕ್ಕೆ ಕೊಡುಗೆಯಾಗಿ ನೀಡಲಿಲ್ಲ, ಅನಾದಿ ಕಾಲದಿಂದಲೂ ವೇದ ಭೂಮಿಯಾಗಿರುವ ಭಾರತ ಸಾರಿದ್ದು ಅದ್ವೈತ ಸಿದ್ಧಾಂತವನ್ನೇ. ಆ ಸಿದ್ಧಾಂತದ ವಿಸ್ಮೃತಿಯಲ್ಲಿದ್ದ ಸನಾತನ ಜಗತ್ತಿಗೆ ಅದನ್ನೇ ಶಂಕರರು ಮತ್ತೊಮ್ಮೆ ನೆನಪಿಸಿದರಷ್ಟೆ.
ಶಂಕರರಿಗೂ ಮುನ್ನ ವೇದಗಳ ಅದ್ವೈತ ಸಾರವನ್ನು ವೇದವ್ಯಾಸರಿಂದ ಯಾಜ್ಞವಲ್ಕ್ಯವರೆಗೂಸಾರಿದ್ದಾರೆ, ವೇದಾಂತ ಸಿದ್ಧಾಂತದ ಅದ್ವೈತವನ್ನು ದೃಢವಾಗಿ ಪ್ರತಿಪಾದಿಸಿದ್ದಾರೆ. ಅದ್ವೈತ ಸಿದ್ಧಾಂತ ವೇದ-ಉಪನಿಷತ್ ಗಳಲ್ಲೇ ಸ್ಪಷ್ಟವಾಗಿ ಉಲ್ಲೇಖವಾಗಿತ್ತು. ಕಾಲಕ್ರಮೇಣ ಧರ್ಮಕ್ಕೆ ಗ್ಲಾನಿಯುಂಟಾದಾಗ ಪಂಡಿತರೂ ವಿದ್ವಾಂಸರು ತಪ್ಪಾಗಿ ಅರ್ಥೈಸಿಕೊಂಡು ಅದ್ವೈತವನ್ನು ಮರೆತರು. ಜ್ಞಾನ ಮಾರ್ಗಕ್ಕಿಂತ ಕರ್ಮಕಾಂಡಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದರು. ಶೃತಿ (ವೇದ)ಯ ಸಿದ್ಧಾಂತದ ಮೂಲ ಉದ್ದೇಶಕ್ಕೆ ಧಕ್ಕೆ ಉಂಟಾದಂತೆಲ್ಲಾ ಧರ್ಮಕ್ಕೂ ಗ್ಲಾನಿಯುಂಟಾಗಿತ್ತು. ಮೂಲ ತತ್ವವನ್ನೇ ಮರೆತು ಜಡವಾಗುತ್ತಿದ್ದ ಭಾರತವನ್ನು, ಭಾರತದ ತತ್ವವನ್ನು ಪುನಃ ಸ್ಥಾಪಿಸಲು, ಶೃತಿ ಸಾರವನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಸುವ ಜ್ಞಾನಿಯ ಅಗತ್ಯತೆ ಶಂಕರರ ಕಾಲದಲ್ಲಿ ಅತ್ಯವಶ್ಯಕವಾಗಿತ್ತು. ದಾರಿ ತಪ್ಪಿದವರನ್ನು ಸರಿ ದಾರಿಗೆ ತರುವ ಕೆಲಸವನ್ನು ಶಂಕರರು ಸಮರ್ಥವಾಗಿ ಮಾಡಿದರು. ಹೊಸ ಸಿದ್ಧಾಂತವನ್ನು ತಾವಾಗಿಯೇ ಸೃಷ್ಟಿಸಿ ಅದನ್ನು ಪ್ರಚಾರ ಮಾಡಲಿಲ್ಲ. ಹಾಗಾಗಿಯೇ ಶಂಕರರ ಸಿದ್ಧಾಂತ ಇಂದಿಗೂ, ಎಂದಿಗೂ ಅಪ್ರಕಂಪ್ಯವಾಗಿ ಉಳಿಯಲು ಸಾಧ್ಯವಾಗಿದೆ.
ಶಂಕರ ಭಗವತ್ಪಾದರ ಗುರುಗಳಾಗಿದ್ದ ಗೌಡಪಾದರೇ ಮಾಯಾಮಾತ್ರಂ ಇದಂ ದ್ವೈತಂ, ಅದ್ವೈತಂ ಪರಮಾರ್ಥತಃ ಎಂದು ಹೇಳಿದ್ದರು. ಆದರೆ ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಸಾಂಖ್ಯಾದಿಗಳು ಪ್ರತಿಪಾದಿಸಿದ್ದ ದ್ವೈತದಲ್ಲೇ ಮುಳುಗಿದ್ದ ಪಂಡಿತರು, ಶೃತಿಯ ಸಾರವನ್ನು ತಪ್ಪಾಗಿ ಅರ್ಥೈಸಿಕೊಂಡು ಕರ್ಮಕಾಂಡಕ್ಕೇ ಹೆಚ್ಚಿನ ಮಹತ್ವ ನೀಡಿ ಜ್ಞಾನ ಮಾರ್ಗವನ್ನು ನಿರಾಕರಿಸಿದ್ದರು. ಅಂದರೆ ವೇದಗಳಲ್ಲಿ ಹೇಳಿದ ಒಂದು ಹಂತವನ್ನು ಬಿಟ್ಟು ಮುಂದಕ್ಕೆ ಹೋಗದೇ ಜಡವಾಗಿ ಅಂಟಿಕೊಂಡು ಕರ್ಮಕಾಂಡದಿಂದ ಮೋಕ್ಷ ಪ್ರಾಪ್ತಿ ಎಂಬ ಭ್ರಮೆಯಲ್ಲಿದ್ದರು. ಅದನ್ನು ಕಳಚಿದ್ದೇ ಶಂಕರರು. ಶಂಕರರು ಕೇವಲ ಅಜ್ಞಾನವನ್ನಷ್ಟೇ ಕಳೆಯಲಿಲ್ಲ. ವಿಷಕಂಠ ಹಾಲಾಹಲವನ್ನು ತಾನು ಸೇವಿಸಿ ಅಮೃತವನ್ನು ನೀಡಿ ದೇವತೆಗಳನ್ನು, ಸೃಷ್ಟಿಯನ್ನು ರಕ್ಷಿಸಿದಂತೆ, ಬಂದ ಕಷ್ಟಗಳನ್ನೆಲ್ಲಾ ಎದುರಿಸಿ ಅಜ್ಞಾನದ ರೂಪದಲ್ಲಿ ಭಾರತದ ಸನಾತನ ಧರ್ಮಕ್ಕೆ ಎದುರಾಗಿದ್ದ ಅಪಾಯವನ್ನೂ ಕಳೆದರು. ಸನಾತನ ಧರ್ಮವನ್ನು ಪುನಃ ಪ್ರತಿಷ್ಠಾಪಿಸಿ, ಅದ್ವೈತದ ಸುಧೆಯನ್ನು ಅನುಗ್ರಹಿಸಿದರು.
ಆದರೆ ಪ್ರಸ್ತುತ ನಾವೆಲ್ಲಾ ಎಷ್ಟು ಅಜ್ಞಾನಿಗಳಾಗಿದ್ದೇವೆ ಎಂದರೆ ಸನ್ಯಾಸಿ ಎಂದರೆ ಕೇವಲ ಮೂಗು ಹಿಡಿದು ತಪಸ್ಸು ಮಾಡುವುದು ಅಥವಾ ಲೋಕ ವ್ಯವಹಾರಗಳಿಂದ ದೂರವಿದ್ದುಬಿಡುವುದು ಅಥವಾ ಒಂದು ವ್ಯವಸ್ಥೆಯಿಂದ ದೂರ ಇರುವುದು ಎಂಬ ಭಾವನೆ ಗಟ್ಟಿಯಾಗುತ್ತಿವೆ. ಆದರೆ ಭಾರತದ ಉಸಿರಾಗಿರುವ ತರ್ಕಬದ್ಧ ವಿಚಾರ ಮಂಡನೆ ಅಂದರೆ ಲಾಜಿಕ್ ನಲ್ಲಿ ನಮ್ಮ ಸನಾತನ ಧರ್ಮ ಅದೆಷ್ಟು ಮುಂದುವರೆದಿತ್ತು ಎನ್ನುವುದಕ್ಕೆ ಶಂಕರರು ಅತ್ಯುತ್ತಮ ಉದಾಹರಣೆಯಾಗಿ ನಿಲ್ಲುತ್ತಾರೆ. ಎಷ್ಟರ ಮಟ್ಟಿಗೆ ಎಂದರೆ ಸಾವಿರ ವರ್ಷಗಳು ಕಳೆದರೂ ಅವರ ತರ್ಕಬದ್ಧ ಮಂಡನೆ ಈ ಕ್ಷಣಕ್ಕೂ ಮಾದರಿಯಾಗುತ್ತದೆ. ವಿರೋಧಿಗಳೂ ಸಹ ತಮ್ಮ ವಾದದ ಸೌಧ ಕಟ್ಟುವುದಕ್ಕೆ ಶಂಕರರನ್ನೇ ಅಡಿಪಾಯವನ್ನಾಗಿರಿಸಿಕೊಳ್ಳುತ್ತಾರೆ. ಒಂದು ವಿಷಯದ ಬಗ್ಗೆ ಎರಡು ಪಕ್ಷಗಳ ನಡುವಿನ ವಾದ ಎಂದರೆ ಶಂಕರರು-ಮಂಡನ ಮಿಶ್ರರ ನಡುವಿನ ವಾದ ಸರಣಿಯೇ ಇಂದಿಗೂ ಮಾದರಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಧ್ಯಯನಕ್ಕೆ ಸೂಕ್ತ ಉದಾಹರಣೆ.
ಶಂಕರರು ತಮ್ಮ ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸುವ ವೇಳೆ ಕರ್ಮಕಾಂಡವೇ ಅಂತಿಮ, ಮೋಕ್ಷಕ್ಕೆ ಕಾರಕ ಎಂಬ ದೃಢ ನಂಬಿಕೆ ಹೊಂದಿದ್ದ ಮಂಡನಮಿಶ್ರರು ಸೇರಿದಂತೆ ಹಲವು ಪಂಡಿತರೊಂದಿಗೆ ವಾದ ಮಂಡಿಸಿದ್ದರು. ಶಂಕರರು ಹಾಗೂ ಮಂಡನ ಮಿಶ್ರರ ವಾದ ಸರಣಿಯಷ್ಟೇ ರೋಚಕವಾಗಿರುವ ಸಂವಾದಗಳು ಶಂಕರ ಮಾಧವೀಯ ವಿಜಯದಲ್ಲಿ ಉಲ್ಲೇಖವಾಗಿವೆ. ಶಂಕರರು ಭೇಟಿ ಮಾಡಿದ ಎಲ್ಲಾ ಪಂಡಿತರು, ವಿದ್ವಾಂಸರೆಲ್ಲಾ ಶಂಕರರ ತತ್ವ-ಸಿದ್ಧಾಂತಗಳನ್ನು ಒಂದೇ ಏಟಿಕೆ ಒಪ್ಪುತ್ತಿರಲಿಲ್ಲ. ಮಾಧವೀಯ ಶಂಕರ ವಿಜಯದಲ್ಲಿ ಇದಕ್ಕೆ ಸಂಬಂಧಿಸಿದ ಸ್ವಾರಸ್ಯಕರವಾದ ಸಂಗತಿಗಳು, ಸಂದರ್ಭಗಳನ್ನು ವಿವರಿಸಿದ್ದಾರೆ. ಬ್ರಹ್ಮನೇ ಎದುರಾದರೂ ವಾದದಲ್ಲಿ ಜಯಿಸುತ್ತೇವೆ ಎಂಬ ಅಹಂಕಾರದ ಸ್ಥಿತಿಯಲ್ಲಿದ್ದ ಪಂಡಿತರನ್ನೂ ಸಹ ಶಂಕರರು ವಾದದಲ್ಲಿ ಗೆದ್ದು ಜಿತೋಸ್ಮಿ ಎನಿಸಿದ್ದರು. ಶಂಕರರೊಂದಿಗೆ ವಾದದಲ್ಲಿ ಪರಾಜಯಗೊಂಡ ನಂತರ ತಮ್ಮ ಗುರುಗಳಾದ ಜೈಮಿನಿ ಮಹರ್ಷಿಗಳು ಹೇಳಿದ್ದ ಕರ್ಮ ಸಿದ್ಧಾಂತ ತಪ್ಪು ಎಂದು ಸಾಬೀತಾಗಿದ್ದ ವ್ಯಥೆಯಲ್ಲಿದ್ದ ಮಾಂಸಕ, ಯಜ್ಞ ಕರ್ಮವೇ ಮೋಕ್ಷ ಸಾಧನ ಎಂದು ನಂಬಿದ್ದ ಮಂಡನಮಿಶ್ರರಿಗೆ ಸ್ವತಃ ಜೈಮಿನಿ ಮಹರ್ಷಿಗಳೇ ಬಂದು " ನಾನು ಹೇಳಿದ್ದ ಸಿದ್ಧಾಂತವನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲವೆಂದೂ ಶಂಕರರು ಹೇಳಿರುವ ತತ್ವ ನಮ್ಮ ಗುರುಗಳಾದ ವ್ಯಾಸರು ಹೇಳಿರುವ ತತ್ವವೇ ಎಂದು ಹೇಳಬೇಕಾಗಿ ಬಂತು, ಶಂಕರರಿಗೆ ಅದ್ವೈತ ಸಿದ್ಧಾಂತದ ಬಗ್ಗೆ ಅಂತಹ ತಿಳುವಳಿಕೆ, ಅಪ್ರಕಂಪ್ಯವಾದ ನಂಬಿಕೆ ಇತ್ತು, ಆದ್ದರಿಂದಲೇ ಶಂಕರರನ್ನು ಯಾರೂ ಸಹ ವಾದದಲ್ಲಿ ಗೆಲ್ಲಲು ಸಾಧ್ಯವಾಗಲಿಲ್ಲ.
ಶಂಕರರು ಕೇವಲ ತಮ್ಮ ವಾದಗಳಿಂದಷ್ಟೆ ನಮಗೆ ಆಪ್ತರಾಗುವುದಿಲ್ಲ, ಶಂಕರರಲ್ಲಿ ನಾವು ಅದ್ಭುತ ಕಾವ್ಯರಚಿಸುವ ಸಾಮರ್ಥ್ಯವನ್ನೂ ಕಾಣಬಹುದಾಗಿದೆ. ಅವರು ರಚಿಸಿದ್ದ ಎಷ್ಟೋ ಸಾವಿರ ಸ್ತೋತ್ರಗಳಲ್ಲಿ ಸೌಂದರ್ಯ ಲಹರಿ, ಶಿವಾನಂದ ಲಹರಿ, ಶಾರದಾ ಭುಜಂಗ ಅಷ್ಟಕಗಳೆಂಬುದು ಹೆಸರಿಸಬಹುದಾದ ಕೆಲವಷ್ಟೇ... ಶಂಕರರನ್ನು ನೆನೆದಾಗಲೆಲ್ಲಾ ನಮಗೆ ಓರ್ವ ವ್ಯಕ್ತಿಯಿಂದ ಕೇವಲ 32 ವರ್ಷಗಳಲ್ಲಿ ಇಷ್ಟೊಂದು ಸಾಧನೆ ಮಾಡಲು ಸಾಧ್ಯವಾಯಿತೇ ಎಂದು ಅಚ್ಚರಿಯಾಗುತ್ತದೆ. ನಾವೆಲ್ಲಾ ಯೂತ್ ಐಕಾನ್, ಶಕ್ತಿಯ ಚಿಲುಮೆ ಎಂದು ಪ್ರತಿ ಜನವರಿ 12 ರಂದು ಆರಾಧಿಸುವ ವಿವೇಕಾನಂದರು ಸಹ ಶಂಕರಭಗವತ್ಪಾದರ ಕುರಿತು "In Shankaracharya we saw tremendous intellectual power, throwing the scorching light of reason upon everything. We want today that bright sun of intellectuality joined with the heart of Buddha", ಅಂದರೆ "ಶಂಕರಭಗವತ್ಪಾದರು ಪ್ರಚಂಡ ಬೌದ್ಧಿಕ ಶಕ್ತಿಯನ್ನು ಹೊಂದಿದ್ದರು "ನಮಗೆ ಈಗ ಅಗತ್ಯವಿರುವುದು ಶಂಕರರ ರೀತಿಯ ಬುದ್ಧಿಮತ್ತೆ ಹಾಗೂ ಬುದ್ಧನ ರೀತಿಯ ಪ್ರೀತಿ ಎಂದಿದ್ದಾರೆ. ಅಷ್ಟೇ ಏಕೆ ಸ್ವಾಮಿ ವಿವೇಕಾನಂದರ ಗುರುಗಳಾಗಿದ್ದ ರಾಮಕೃಷ್ಣ ಪರಮಹಂಸರಿಗೂ ಸಹ ಪ್ರೇರಕ ಶಕ್ತಿಯಾಗಿದ್ದದ್ದು ಇದೇ ಶಂಕರ ಭಗವತ್ಪಾದರು. ಇಂದು ಇಡೀ ಭಾರತವೇ ಯೂತ್ ಐಕಾನ್ ಎಂದು ಮೆಚ್ಚಿ ಮೆರೆಸುವ ಇತ್ತೀಚಿನ ವಿವೇಕಾನಂದರಂತಹ ಧೀಶಕ್ತಿಯುಳ್ಳ ಸನ್ಯಾಸಿಗೇ ಆರಾಧ್ಯ ಮೂರ್ತಿಯಾಗಿದ್ದರು 12 ಶತಮಾನಗಳ ಹಿಂದಿನ ಶಂಕರ ಭಗವತ್ಪಾದರು!
ಅಲ್ಲವೇ? 8 ವರ್ಷದ ಬಾಲ ಸನ್ಯಾಸಿ. 12 ಶತಮಾನಗಳ ಹಿಂದೆ ಯಾವ ಸಂಚಾರ ವ್ಯವಸ್ಥೆ? ಕೇರಳದ ಕಾಲಟಿಯೆಲ್ಲಿ? ನರ್ಮದಾ ನದಿಯ ತಟದ ಗುಹೆಯೆಲ್ಲಿ? ಯಾವ ನೆರವು? ಯಾವ ಅರ್ಥವ್ಯವಸ್ಥೆ? ಬುದ್ಧಿ ಚಿಗುರೊಡೆಯುವ ವಯಸ್ಸಿನಲ್ಲೇ ಗುರುವನ್ನು ಅರಸಿ ಹೊರಟರಲ್ಲಾ ಬಾಲ ಸನ್ಯಾಸಿ ಶಂಕರರು ಅವರ ಧೀರೋದಾತ್ತ ಮನಸ್ಥಿತಿ, ವ್ಯಕ್ತಿತ್ವವನ್ನು ಬಣ್ಣಿಸುವುದೆಂತು? ಪದಪುಂಜಗಳು ಸಾಲದೇ ನತಮಸ್ತಕರಾಗುತ್ತೇವೆ ಅಷ್ಟೇ! ಶಂಕರರು ತಮ್ಮ ಗುರು ಗೋವಿಂದ ಭಗವತ್ಪಾದರನ್ನು ಸಂದರ್ಶಿಸಿ ತಮ್ಮನ್ನು ಭವ ಸಾಗರದಿಂದ ಮುಕ್ತಗೊಳಿಸಿ ಅನುಗ್ರಹಿಸಬೇಕೆಂದು ಪ್ರಾರ್ಥಿಸುತ್ತಾರೆ. ಆದರೆ ಇದಕ್ಕೆ ಪ್ರತಿಯಾಗಿ " ಈ ಮರ್ತ್ಯ ಶರೀರದಿಂದ ಹೇಗೆ ಭವ ಸಾಗರದಿಂದ ಬಿಡುಗಡೆ ಹೊಂದುವೆ ಎಂದು ಕೇಳುತ್ತಾರೆ ಗೋವಿಂದ
ಭಗವತ್ಪಾದರು. ಗುರುಗಳ ಪ್ರಶ್ನೆಗೆ ಉತ್ತರಿಸಿದ್ದ ಶಂಕರರು ಜೀವನ್ಮರಣ ಶರೀರಕ್ಕೇ ಹೊರತು ಆತ್ಮಕ್ಕೆ ಅಲ್ಲ ಎಂದು ಹೇಳುತ್ತಾರೆ, ಗುರುಗಳನ್ನು ಆಶ್ರಯಿಸಿ ಅಧ್ಯಯನ ಮಾಡುವುದಕ್ಕೂ ಮುನ್ನವೇ ಇಂತಹ ಪಾರಮಾರ್ಥಿಕ ಉತ್ತರವನ್ನು ನೀಡುವಷ್ಟು ಜ್ಞಾನಿಗಳಾಗಿದ್ದರಲ್ಲಾ ಶಂಕರರು ಆದ್ದರಿಂದಲೆ ಅವರನ್ನು ಬುದ್ಧಿವಂತಿಕೆಯಲ್ಲಿ ಸೂರ್ಯನಿಗೆ ಹೋಲಿಸಿ ನಮಿಸಿದ್ದೇವೆ. ಆದ್ದರಿಂದಲೇ ಜಗತ್ತು ಶಂಕರರನ್ನು ನಮಾಮಿ ಭಗವತ್ಪಾದಂ ಲೋಕಶಂಕರಂ, ಆರಾದ್ ಜ್ಞಾನದಭಿಸ್ತಿಭಿಹಿ ಪ್ರತಿಹತಶ್ಚನ್ದ್ರಾಯುತೆ ಭಾಸ್ಕರಹ ತಸ್ಮೈ ಶಂಕರ ಭಾನವೇ ತನುಮನೋ ವಾಭಿರ್ನಮಸ್ಕುರ್ಮಹೆ ಎಂದು ಕೊಂಡಾಡಿದೆ. ಕೇವಲ ಕೊಂಡಾಡುವವರಿಗಷ್ಟೇ ಅಲ್ಲ, ಶಂಕರರು ತಮ್ಮನ್ನು ವಿರೋಧಿಸುವವರಿಗೂ ಕೊಂಡಾಡುವವರಷ್ಟೇ ಮುಖ್ಯವಾಗಿದ್ದಾರೆ ಅಥವಾ ಕೊಂಡಾಡುವವರಿಗಿಂತಲೂ ವಿರೋಧಿಸುವವರಿಗೆ ಸ್ವಲ್ಪ ಹೆಚ್ಚಾಗಿಯೇ ಮುಖ್ಯವಾಗಿದ್ದಾರೆ. ಏಕೆಂದರೆ ಶಂಕರರು ಸಂಪ್ರದಾಯಸ್ಥರಾಗಿದ್ದುಕೊಂಡೇ ಶಂಕರರು ಸಂಪ್ರದಾಯಸ್ಥರು ಮಾಡುತ್ತಿದ್ದ ತಪ್ಪುಗಳನ್ನು ವಿರೋಧಿಸಿದ್ದರು, ಕರ್ಮಠರಾಗಿದ್ದುಕೊಂಡೇ ಕರ್ಮಠರ ತಪ್ಪುಗಳನ್ನು ತಿದ್ದಿ ತೀಡಿದರು.
ಸಾಂಖ್ಯರನ್ನು, ಇತರ ಪ್ರತಿಪಕ್ಷದ ವಿದ್ವಾಂಸರುಗಳನ್ನು ಸಾತ್ವಿಕ ಮಾರ್ಗದಲ್ಲಿ ವಿರೋಧಿಸಿ, ಮರ್ಯಾದೆಯಿಂದಲೆ ಮಣಿಸಿದ್ದರು. ಬೌದ್ಧರ ತಪ್ಪುಗಳನ್ನೂ ತಿದ್ದಿ ಬುದ್ಧಿ ಹೇಳಿದರು. ವೇದಗಳ ಚೌಕಟ್ಟುಗಳನ್ನು ದಾಟದೇ, ವೇದದ ಪರಮ ತತ್ವಕ್ಕೆ ಚ್ಯುತಿ ಬಾರದಂತೆ ಅದ್ವೈತ ಸಿದ್ಧಾಂತವನ್ನು ಸಾರಲು ಅಂದಿನ ಜನರು ವಿಧಿಸಿದ್ದ ಕಟ್ಟುಪಾಡುಗಳನ್ನು ಮೀರಿದರು. ತಾವೊಬ್ಬರೇ ಒಂದು ಪಕ್ಷ ಉಳಿದವರೆಲ್ಲಾ ಒಂದು ಪಕ್ಷ ಎಂಬಂತಿದ್ದಾಗಲೂ ಸಂಚಾರ ವ್ಯವಸ್ಥೆಯೇ ಇಲ್ಲದ ಕಾಲದಲ್ಲಿ ಪ್ರತಿ ನಿತ್ಯವೂ ಯಾತ್ರೆ ಕೈಗೊಂಡರು. ಭಾರತ ದೇಶವನ್ನು ಸುತ್ತಿ, ವಾದ ಮಾಡಿ ಅನೇಕ ದುರಹಂಕಾರಿ ವಿದ್ವಾಂಸರು ತಮ್ಮ ತಪ್ಪನ್ನು ತಾವೇ ಅರ್ಥಮಾಡಿಕೊಳ್ಳುವಂತೆ, ಜ್ಞಾನ ಮಾರ್ಗದ ಮೂಲಕವೇ ಮೋಕ್ಷ ಪ್ರಾಪ್ತಿ ಎಂಬುದನ್ನು ಒಪ್ಪಿ ಜಿತೋಸ್ಮಿ ಎನ್ನಿಸಿದ್ದರು. ಕರ್ಮಕಾಂಡದಲ್ಲಿ ಅಪ್ರಕಂಪ್ಯವಾದ ನಂಬಿಕೆ ಹೊಂದಿದ್ದ ಮಂಡನ ಮಿಶ್ರರಂತಹ ಪಂಡಿತರನ್ನು ಶಿಷ್ಯರನ್ನಾಗಿಸಿಕೊಂಡರು. ಕೇವಲ 35 ವರ್ಷಗಳಲ್ಲಿನ ಜೀವಿತಾವಧಿಯಲ್ಲಿ ಭಾರತದ ಸನಾತನ ಧರ್ಮದ ಸತ್ವವನ್ನು ಪುನಃ ಪ್ರತಿಷ್ಠಾಪಿಸಿದ
ಶಂಕರರಲ್ಲದೇ ಇಂದಿನ ಯುವ ಪೀಳಿಗೆಗೆ, ವಿವೇಕಾನಂದರು ಹೇಳಿದಂತೆ ಭಾರತಕ್ಕೆ ಅಗತ್ಯವಿರುವ ತೀಕ್ಷ್ಣ ಬುದ್ಧಿವಂತಿಕೆಗೆ ಶಂಕರರಲ್ಲದೇ ಮತ್ಯಾರು ತಾನೆ ಪ್ರೇರಕ ಶಕ್ತಿಯಾಗಬಲ್ಲರು? ಭಾರತ ಎದುರಿಸುತ್ತಿರುವ ಬೌದ್ಧಿಕ ದಾಸ್ಯ, ವಿಸ್ಮೃತಿಯಿಂದ
ಹೊರಬರಲು ಶಂಕರರಲ್ಲದೇ ಮತ್ಯಾರು ತಾನೆ ಪ್ರೇರೇಪಿಸಬಲ್ಲರು?
ಇಷ್ಟಕ್ಕೂ ನಾವೇಕೆ ಶಂಕರರಿಗೆ ಕೃತಜ್ನರಾಗಿರಬೇಕು ಅಥವಾ ಗೌರವಿಸಬೇಕೆಂದರೆ ಅವರು ಜೀವಿಸಿ- ಮುಕ್ತರಾದ ಸಾವಿರ ವರ್ಷಗಳು ಕಳೆದರೂ ನಾವು ಧರ್ಮದ ವಿಷಯದಲ್ಲಿ ಯಾವುದೇ ಸಮಸ್ಯೆಯನ್ನೂ ಎದುರಿಸದಂತಹ ಸ್ಥಿತಿಯನ್ನು ನಿರ್ಮಾಣ ಮಾಡಿ ಹೋಗಿದ್ದಾರೆ. ಸಾವಿರ ವರ್ಷಗಳು ಕಳೆದರೂ ಧರ್ಮಕ್ಕೆ ವಿಪ್ಲವ ಬರದಂತಹ ವಾತಾವರಣ ನಿರ್ಮಿಸಿದ್ದರು.
ಇನ್ನು ಕೊನೆಯದಾಗಿ, ಸಾ.ಕೃ ರಾಮಚಂದ್ರರಾಯರಂತಹ ವಿದ್ವಾಂಸರು ತಮ್ಮ ದರ್ಶನ ಪ್ರಬಂಧದಲ್ಲಿ ಶಂಕರರ ಬಗ್ಗೆ ಹೀಗೆ ಬರೆಯುತ್ತಾರೆ, "ನಾಡಿನ ಮೇಧಾವಿಗಳಲ್ಲಿ, ಮಾರ್ಗದರ್ಶಕರಲ್ಲಿ ಬುದ್ಧನನ್ನು ಬಿಟ್ಟರೆ ಶ್ರೀಶಂಕರರದ್ದೆ ಅಗ್ರಸ್ಥಾನ. 
ಅವರ ಬುದ್ಧಿಶಕ್ತಿ, ವಿಚಾರನೈಪುಣ್ಯ, ಸಂಪ್ರದಾಯಶ್ರದ್ಧೆ, ಸಮನ್ವಯ ಬುದ್ಧಿ, ಲೋಕಾನುಗ್ರಹ ದೃಷ್ಟಿ, ಪ್ರತಿಪಾದನಾ ಸಾಮರ್ಥ್ಯ ಇವೆಲ್ಲವೂ ಅನಾದೃಶ್ಯವಾದುವು. ಅವರ ನಂತರ ತೋರಿಕೊಂಡ ಯಾವ ಪಂಥದ ಆಚಾರ್ಯರಾಗಲಿ ವ್ಯಾಖ್ಯಾನಕಾರರಾಗಲಿ ಅವರ ಬರಹಗಳನ್ನು ಅಲ್ಲಗಳೆಯುವಂತಿರಲಿಲ್ಲ. ಅವರನ್ನು ಅನುಸರಿಸಿದವರಿಗೂ ವಿರೋಧಿಸಿದವರಿಗೂ ಅವರು ಸಮನಾಗಿಯೇ ಉಪಜೀವ್ಯರು! ವೇದಾಂತ ಸಂಪ್ರದಾಯ ಸ್ಪಷ್ಟವಾದುದು ಅವರ ಕಾಲದಲ್ಲಿಯೇ. ಅವರಿಂದಲೇ. ಮುಂದೆ ಒಂದು ಸಾವಿರಕ್ಕೂ ಮಿಕ್ಕು ವರ್ಷಗಳು ಕಳೆದ ಮೇಲೂ ಅವರ ಈ ನಾಡಿದ ಎಲ್ಲರ ನೆನಪಿನಲ್ಲಿ ಅಚ್ಚಳಿಯದೇ ಉಳಿದುಕೊಂಡಿದೆ". ಅದ್ವೈತ ತತ್ವ ಸಿದ್ದಾಂತ, ಅದರ ಸಮರ್ಥನೆಗಾಗಿ ಅವರು ಮಾಡಿದ ವಾದ ಮಂಡನೆ, ತರ್ಕ, ಇಡೀ ಜಗತ್ತನ್ನೇ ಬೆರಗುಗೊಳಿಸಿದೆ. ಇಂದು ಶಂಕರ ಜಯಂತಿ.ಸಾವಿರಕ್ಕೂ ಮಿಕ್ಕು ವರ್ಷಗಳು ಕಳೆದರೂ ಅವರ ಸಿದ್ಧಾಂತ ಅಚ್ಚಳಿಯದೇ ಉಳಿದುಕೊಂಡಿದೆ ಎಂದರೆ, ಶಂಕರರಿಲ್ಲದಿದ್ದಿದ್ದರೆ ಯಾವ ಸನಾತನ ಧರ್ಮದ ಅನುಯಾಯಿಗಳು ಇಂದು "ಹಿಂದೂ" ಎಂದು ಹೇಳಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಇಂದಿಗೆ ವೇದಾಂತ ತತ್ವ ಎಂದರೆ ಯಾರಿಗೂ ಅರ್ಥವೇ ಆಗುತ್ತಿರಲಿಲ್ಲ. ವೇದಾಂತ ತತ್ವ ಎಂದರೇನು ಎಂಬುದೇ ಅರ್ಥವಾಗದೇ ಇದ್ದಿದ್ದರೆ ಇತ್ತೀಚಿನ ಶತಮಾನಗಳಲ್ಲಿ ನಾವು ರಾಮಕೃಷ್ಣ ಪರಮಹಂಸ, ರಮಣ ಮಹರ್ಷಿಗಳು, ವಿವೇಕಾನಂದರಂತಹವರನ್ನೂ ಕಾಣಲು ಬಹುಶಃ ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಏಕೆ ಅಸಲಿಗೆ ಭಾರತ ಭಾರತವಾಗೇ ಉಳಿಯುತ್ತಿರಲಿಲ್ಲ, ಭಾರತದ ಸನಾತನ ಧರ್ಮ ಜೀವಂತವಾಗಿದ್ದರೆ ಅದಕ್ಕೆ ಶಂಕರರ ಕೊಡುಗೆ ಅಪಾರ. ಹಾಗಾಗಿಯೇ ಸಾವಿರ ಅಲ್ಲ ಮತ್ತೂ ಸಾವಿರ ವರ್ಷ ಕಳೆದರೂ ಶಂಕರರು ಪ್ರಸ್ತುತ. ಏ.20 ರಂದು ಶಂಕರ ಜಯಂತಿ ಹಿನ್ನೆಲೆಯಲ್ಲಿ ಶಂಕರರನ್ನು ಸ್ಮರಿಸೋಣ ಅನವರತ.
-ಶ್ರೀನಿವಾಸ್ ರಾವ್
Srinivas.v4274@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com