ಸೀತೆ ಸಿಕ್ಕಿದ್ದು ನೇಗಿಲಿಗೆ ಸಿಲುಕಿದ ಪೆಟ್ಟಿಗೆಯಲ್ಲಿ ಅಲ್ಲ, ಜನಕ ರಾಜನಿಗೆ ಜಾನಕಿ ದೊರೆತಿದ್ದು ಹೇಗೆ ಗೊತ್ತೆ?

ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಸೀತೆಯನ್ನು ಉದಾಹರಣೆ ನೀಡಿ "ಟೆಸ್ಟ್ ಟ್ಯೂಬ್ ಬೇಬಿ ಅರ್ಥಾತ್ ಪ್ರಣಾಳ ಶಿಶು ಪರಿಕಲ್ಪನೆ ರಾಮಾಯಣ ಕಾಲದಲ್ಲೇ ಇತ್ತು ಎಂದು ಹೇಳಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಸೀತೆ ಸಿಕ್ಕಿದ್ದು ನೇಗಿಲಿಗೆ ಪೆಟ್ಟಿಗೆಯಲ್ಲಿ ಅಲ್ಲ, ಜನಕ ರಾಜನಿಗೆ ಜಾನಕಿ ದೊರೆತಿದ್ದು ಹೇಗೆ ಗೊತ್ತೆ?
ಸೀತೆ ಸಿಕ್ಕಿದ್ದು ನೇಗಿಲಿಗೆ ಪೆಟ್ಟಿಗೆಯಲ್ಲಿ ಅಲ್ಲ, ಜನಕ ರಾಜನಿಗೆ ಜಾನಕಿ ದೊರೆತಿದ್ದು ಹೇಗೆ ಗೊತ್ತೆ?
ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಸೀತೆಯನ್ನು ಉದಾಹರಣೆ ನೀಡಿ "ಟೆಸ್ಟ್ ಟ್ಯೂಬ್ ಬೇಬಿ ಅರ್ಥಾತ್ ಪ್ರಣಾಳ ಶಿಶು ಪರಿಕಲ್ಪನೆ ರಾಮಾಯಣ ಕಾಲದಲ್ಲೇ ಇತ್ತು ಎಂದು ಹೇಳಿದ್ದಾರೆ. ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ. 
ಸೀತೆ ಎಂದಾಕ್ಷಣ ಆಕೆ ಜನಕ ರಾಜ ಭೂಮಿ ಉಳುತ್ತಿದ್ದಾಗ ನೇಗಿಲಿಗೆ ಪೆಟ್ಟಿಗೆಯಲ್ಲಿ ಸಿಕ್ಕಿದ ಮಗು ಎಂಬುದು ಸಾಮಾನ್ಯವಾಗಿ ಕೇಳಿಬರುವ ವಿವರಣೆ. ಅದು ನಿಜವೇ? ಮೂಲ ರಾಮಾಯಣದಲ್ಲಿ ಈ ಬಗ್ಗೆ ಏನು ಹೇಳಿದೆ ಎಂಬುದನ್ನ ಕನ್ನಡಪ್ರಭ.ಕಾಂ ನ ರಾಮಾಯಣ ಅವಲೋಕನ ಅಂಕಣಕಾರರಾದ ಡಾ.ಪಾವಗಡ ಪ್ರಕಾಶ್ ರಾವ್ ಅವರು ಅಂಕಣದಲ್ಲಿ ವಿವರಣೆ ನೀಡಿದ್ದರು.  ಸೀತೆಯ ಜನ್ಮವೃತ್ತಾಂತಕ್ಕೆ ಸಂಬಂಧಿಸಿದ ಅಂಕಣದ ಆಯ್ದ ಭಾಗ ಇಲ್ಲಿದೆ,  ಅದನ್ನೇ ಮರು ಪ್ರಕಟ ಮಾಡಲಾಗಿದೆ. ಆಸಕ್ತರು ಓದಬಹುದು.  
ರಾಮ-ಸೀತೆಯ ವಿವಾಹದ ಸಂದರ್ಭದಲ್ಲಿ ದಶರಥನಿಗೆ ಜನಕ ರಾಜ ಹೇಳುವ ಮಾತುಗಳಿವು
"ಊರ್ಮಿಳೆ ನನ್ನ ಮಗಳು. ಸೀತೆ ಸಾಕು ಮಗಳು. ಆದರೆ ಅಪ್ಪನ ಅರಕೆಯನ್ನು ತೀರಿಸಿದ ಮಗಳು; ಹಿರಿಯ ಮಗಳು; ಅಕ್ಕರೆಯ ಮಗಳು. ಸಿಕ್ಕಿದ ಮಗಳು ಎಂಬುವುದನ್ನು ಬಿಟ್ಟರೆ ಯಾವುದೇ ಕಡಿಮೆ ಅವಳಿಗೆ ಮಾಡಲಿಲ್ಲ. ಅವಳು ನನಗೆ ಸಿಕ್ಕಾಗಲೇ ಆರೇಳು ವರ್ಷದ ಕನ್ಯೆ. ಅವಳೊಬ್ಬ ದೇವ ಕನ್ಯೆ ಇರಬೇಕು, ಅಥವ ಋಷಿಕನ್ಯೆ ಇರಬೇಕು. ಅಯೋನಿಜಾ (ಸಂಯೋಗದಿಂದ ಹುಟ್ಟದವಳು). ನನಗಿನ್ನೂ ಅಂದಿನ ಘಟನೆ ಸ್ಪಷ್ಟವಿದೆ.
 ನಾನಂದು ನೇಗಿಲಿನಿಂದ ಉಳುತ್ತಿದ್ದೆ. ಯಙ್ಞ ಮಾಡಲು ನಿಶ್ಚಯಿಸಿದಾಗ ಯಜಮಾನ ಯಾಗಭೂಮಿಯನ್ನು ಶುದ್ಧಿ ಮಾಡಬೇಕು. ಹಾಗೇ ಭೂಮಿಯನ್ನು ಶೋಧಿಸುತ್ತಿದ್ದಾಗ ಇವಳು ಕಂಡಳು. ಚಿನ್ನದ ಮೈಬಣ್ಣದ, ಮುದ್ದಾದ ಮುಖದ, ದುಂಡು ಗಲ್ಲದ, ನಯವಾದ ಚೂಪು ಮೂಗಿನ, ಹೊಳೆವ ಕಂಗಳ, ಕೆನ್ನೆ ಹೊಳಪಿನ, ಸುಂದರ; ಅತಿ ಸುಂದರ ಕನ್ಯೆ ಪ್ರತ್ಯಕ್ಷಳಾಗಿದ್ದಳು. ಅವಳಲ್ಲಿ ಹೇಗೆ ಬಂದಳು, ಎಲ್ಲಿಂದ ಬಂದಳು, ಯಾರು ಕರೆತಂದು ಬಿಟ್ಟರು ಎಂಬುದೊಂದೂ ಗೊತ್ತಾಗಲಿಲ್ಲ. ಅವಳನ್ನು ಕಂಡಾಗ ನಾನು ಉತ್ತಿದ್ದ ನೇಗಿಲ ಗೆರೆಯ ಮೇಲೆ ನಿಂತಿದ್ದಳು. ನೇಗಿಲಿನಿಂದ ಆದ ಗೆರೆಗೆ "ಸೀತಾ" ಎಂದು ತಮಗೂ ಗೊತ್ತು. ನಾನು "ಸೀತಾ" ಎಂದೆ, ಅವಳು "ಹಾಂ" ಎಂದಳು.
ತಮಗೆಲ್ಲ ಆ ಕಥೆ ಗೊತ್ತಿದ್ದರೂ ಸಭಾಸದರೆಲ್ಲ ಮೊದಲ ಬಾರಿಗೆ ಕೇಳುತ್ತಿದ್ದೇವೇನೋ ಎಂಬುವಂತೆ ಆಲಿಸುತ್ತಿದ್ದಾರೆ. ಒಟ್ಟಿನಲ್ಲಿ ಭೂಮಿಯನ್ನು ಊಳುತ್ತಿದ್ದಾಗ ಭೂಮಿಯಿಂದ  ಎದ್ದು ಬಂದಳೇನೋ ಎಂಬತೆ ಸಿಕ್ಕ ಇವಳು ನನ್ನ ಮಗಳಾಗಿ "ಸೀತಾ" ಎಂದೇ ವರ್ಧಿಸಿದಳು, ಪ್ರಖ್ಯಾತಳಾದಳು.
(ವಾಚಕರಲ್ಲಿ ವಿನಂತಿ: ಉಳುತ್ತಿದ್ದಾಗ ನೇಗಿಲಿಗೆ ಪೆಟ್ಟಿಗೆ ಸಿಕ್ಕಿತು, ಅದರಲ್ಲಿ ಮಗುವಿತ್ತು ಎಂಬುದಕ್ಕಾಗಲೀ, ಅದು ಮಗುವೇ ಎನ್ನುವುದಕ್ಕಾಗಲೀ ಮೂಲದಲ್ಲಿ ಆಧಾರವಿಲ್ಲ. ಅವೆಲ್ಲಾ ಚಲನಚಿತ್ರಗಳ ನಿರೂಪಣೆ. ಉಳುವಾಗ ಸಿಕ್ಕಿದ್ದೆಂಬ ಅರ್ಥದಲ್ಲಿ ಭೂಮಿಜೆ ಎಂಬುದು ಕಾವ್ಯಾಲಂಕಾರ. ಪೆಟ್ಟಿಗೆಯ ಕಥೆ ಒಪ್ಪಿದರೆ ಎಷ್ಟು ವರ್ಷಗಳಿಂದ ಅಲ್ಲಿತ್ತು, ಆಗ ಆ ಮಗುವಿಗೆ ಉಸಿರಾಟ/ ಆಹಾರ, ಇವುಗಳೆಲ್ಲ ಪ್ರಶ್ನೆಯಾಗುತ್ತದೆ. ಬಹುಶಃ ಸೀತೆ ಕಂಡಾಗ ದೇವತೆಯೊಬ್ಬಳು ತಂದು ಬಿಟ್ಟಿರಬಹುದು, ಅಥವ ಬಹುಮಂದಿ ಬಯಸುವಂತೆ ಭೂದೇವಿಯೇ ಅವಳನ್ನಲ್ಲಿ ನಿಲ್ಲಿಸಿ ಹೋಗಿರಬಹುದು. ಇನ್ನು ಸಿಕ್ಕಾಗ ಅವಳಿಗೆ ಆರೇಳು ವರ್ಷಗಳಾದರೂ ಆಗಿರಲೇ ಬೇಕು. ಮಗು ಎಂದುಬಿಟ್ಟರೆ, ಊರ್ಮಿಳೆಗಿನ್ನಾ ಕಿರಿಯಳಾಗಿಬಿಟ್ಟು ಲಕ್ಷ್ಮಣನಿಗೆ ಅತ್ತಿಗೆಯಾಗುವುದು ಮುಜುಗರವಾಗುತ್ತದೆ. "ಭೂಗರ್ಭದಲ್ಲಿ ದೊರೆತ ದಿವ್ಯ ಸ್ತ್ರೀಯ ವಯಸ್ಸನ್ನು ಊಹಿಸಲು ಶಕ್ತ್ಯವಿಲ್ಲ" ಎಂದು ಮುಕ್ತಾಯ ಮಾಡುತ್ತಾ, ದಿ.ವಿದ್ವಾನ್ ರಂಗನಾಥ ಶರ್ಮಾ ಅವರು ಶ್ರೀಮದ್ ವಾಲ್ಮೀಕಿ ರಾಮಾಯಣಂ ಬಾಲಕಾಂಡಃ ಎಂಬ ಅನುವಾದದ ಅನುಬಂಧದಲ್ಲಿ ವಯಸ್ಸಿನ ಬಗ್ಗೆ ಚರ್ಚೆ ಮಾಡಿರುವುದನ್ನು ಆಸಕ್ತರು ಓದಬಹುದು- ಲೇಖಕರು)
ಧನುವಿದ್ದ ಪೆಟ್ಟಿಗೆ ಮುಚ್ಚಳ ತಗೆದರು. ಅದರೆಡೆ ಅಭಿಮಾನದಿಂದ ನೋಡಿದ ಜನಕ ಮಹಾರಾಜ, " ಮಹರ್ಷಿಗಳೇ, ನಮ್ಮ ಜನಕ ವಂಶ ಅಂದಿನಿಂದ ಪೂಜಿಸಿಕೊಂಡು ಬಂದಿರುವ ಧನುಶ್ರೇಷ್ಠ ಇದು. ಎಂತಹ ಮಹಾವೀರರಿಗೂ ಇದನ್ನು ಬಗ್ಗಿಸಲಾಗಲಿಲ್ಲ. ಸುರರು ಸೋತರು. ಅಸುರರು ಅಲ್ಲಾಡಿ ಹೋದರು. ರಾಕ್ಷಸರ ರೆಟ್ಟೆ ಬಿದ್ದು ಹೋಯಿತು. ಗಂಧರ್ವರು ಗೆಲ್ಲಲಿಲ್ಲ. ಯಕ್ಷರು ಯಾರೂ ಜಯಿಸಲಿಲ್ಲ. ಕಿನ್ನರರು ಕಿರಿಚಿದರು. ಉರಗರು ಉರುಳಿಬಿದ್ದರು. ಇವರೆಲ್ಲಾ ಈ ಧನುಸ್ಸಿನ ಮುಂದೆ ಮುರುಟಿ ಹೋಗಿರುವಾಗ, ಮನುಷ್ಯರಾವ ಗಿಡದ ತೊಪ್ಪಲು? ಯಾರಾದರೂ ಬಗ್ಗಿಸಬಲ್ಲರೇ ಇದನ್ನು? ಬಗ್ಗಿಸಿ ಆ ದಾರ ಕಟ್ಟಬಲ್ಲರೇ? ಕಟ್ಟಿ ಬಾಣ ಹೂಡಬಲ್ಲರೇ? ಅಥವ ಹೆದೆಯನ್ನೇರಿಸಿ ಠೇಂಕಾರ ಮಾಡಬಲ್ಲರೆ? ಕನಿಷ್ಠ ಯಾರಿಗಾದರೂ ಇದನ್ನು ಅಲ್ಲಾಡಿಸಲು ಸಾಧ್ಯವೇ? 
ಮಹರ್ಷಿಗಳು ರಾಮರೆಡೆಗೆ ನೋಡಿದರು. ಶ್ರೀರಾಮರೆದ್ದರು. ಬಳಿಗೆ ಬಂದರು. ಮುನಿಗಳಿಗೆ ವಂದಿಸಿದರು. " ಇದು ಕೇವಲ ನೋಡುವುದರಲ್ಲಿ ಮುಗಿಯುವುದಿಲ್ಲ, ಮುಂದೇನೋ ಇದೆ" ಎಂದು ಯೋಚಿಸುತ್ತಿದ್ದಾಗ ಗುರುಗಳು ಹೇಳಿದರು; "ರಾಮ, ನಿನ್ನನ್ನು ಕರೆತಂದದ್ದು ಇದಕ್ಕೇ! ಯಾಗ ಎನ್ನುವುದೊಂದು ನೆಪ!! ನಿನ್ನ ಆಗಮನದ ಉದ್ದಿಶ್ಯ ಈಗ ಸಫಲವಾಗುತ್ತಿದೆ. "ಜನಕ ಮಹಾರಾಜ ರಾಮರನ್ನೀಗ ಬಯಸಿ-ಬಯಸಿ ನೋಡಿದ. ದುಂಡಾದ ಪುಷ್ಟ ಬಾಹುಗಳು, ನೆಟ್ಟನೆಯ ನಿಲುವು, ಕೌಮಾರ್ಯವಿದ್ದರೂ ದೃಢ ಶರೀರ, ಮುಖದಲ್ಲಿ ಮಂದಹಾಸವಿದ್ದರೂ ಅದರಲ್ಲಿ ಗೆಲ್ಲುವ ಕೆಚ್ಚು. ಈತನೇನಾದರೂ ಬಿಲ್ಲೆತ್ತಿಬಿಟ್ಟರೆ ಸಾಕು; ನಮ್ಮ ಸೀತೆಗೆ ಒಳ್ಳೆಯ ಗಂಡ. ವಿಶ್ವಮಿತ್ರರು ರಾಮರಿಗೆ ಹೇಳಿದರು; "ರಾಮ, ಬಿಲ್ಲನ್ನು ನೋಡು. " (ವತ್ಸರಾಮ ಧನುಃ ಪಶ್ಯ)  ರಾಮರಿಗೆ ಮಾತ್ರ ಕೇಳುವಂತೆ ವಿಶ್ವಮಿತ್ರರು ಹೇಳಿದ್ದರು. ಅದರೆ ಜನರೆಲ್ಲರಿಗೂ ಕೇಳಿಸುವಂತೆ ಘೋಷಿಸಿದ ಜನಕ; " ಅಕಸ್ಮಾತ್ ರಾಮರೇನಾದರೂ ಧನುಸ್ಸಿಗೆ ಹೆದೆ ಏರಿಸಿದರೆ ಅಯೋನಿಜಳಾದ ಸೀತೆಯನ್ನು ದಾಶರಥಿಗೆ ಕೊಡುವೆ. ಕೊಟ್ಟು ಮದುವೆ ಮಾಡುವೆ" 
- ಡಾ.ಪಾವಗಡ ಪ್ರಕಾಶ್ ರಾವ್
pavagadaprakashrao@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com