ಹತ್ತನೇ ಶತಮಾನದಲ್ಲಿ ಬರುವ ಪರ್ಷಿಯನ್ ಪ್ರವಾಸಿ ಆಲ್ಬೆರುನಿ ಶಾರದಾ ಮಂದಿರವನ್ನು ವರ್ಣಿಸುವುದರ ಜೊತೆಗೆ ಮಂದಿರವನ್ನು ಸೋಮನಾಥೇಶ್ವರ, ಥಾಣೇಶ್ವರ ಮತ್ತು ಮುಲ್ತಾನಿನ ದೇವಾಲಯಗಳಿಗೆ ಹೋಲಿಸುತ್ತಾನೆ. ಪ್ರಸ್ತುತ ಶಾರದಾ ಪೀಠವು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದೆ. 2005 ರ ಭೂಕಂಪನದಿಂದಾಗಿ ಮಂದಿರದ ಬಹುಭಾಗ ನಷ್ಟವಾಗಿ ಮಂಟಪವೊಂದು ಮಾತ್ರ ಉಳಿದಿದೆ. ಇದೇ ಗರ್ಭಗೃಹವೇ ಅಥವಾ ಬೇರೆ ಭಾಗವೇ ಎಂದು ಖಚಿತವಾಗಿ ಈ ವರೆಗೆ ತಿಳಿದಿಲ್ಲ. ಆದರೂ ಅದು ಶಾರದಾ ಪೀಠ ಎನ್ನುವ ಕಾರಣದಿಂದ ನಮಗೆ ಪೂಜನೀಯವಾಗಿದೆ. ದಕ್ಷಿಣ ಭಾರತದವರಿಗೆ ಶಾರದಾ ಪೀಠ, ಶಂಕರಾಚಾರ್ಯರು ಆರೋಹಣ ಮಾಡಿದ ಸರ್ವಜ್ಞಪೀಠವೆನ್ನುವ ಭಾವನೆಯಿಂದ ಪವಿತ್ರ ಕ್ಷೇತ್ರವಾಗುತ್ತದೆ. ಕಾಶ್ಮೀರದವರಿಗೆ ಶಾರದಾ ದೇಶ, ಶಾರದಾ ಲಿಪಿ, ಶಾರದಾ ಗ್ರಾಮ, ಶಾರದಾಮಂದಿರ, ಕುಲದೇವತೆ ಹೀಗೆ ಕಣಕಣದಲ್ಲಿ ಬೆರೆತುಹೋದ ಪುಣ್ಯ ಭೂಮಿಯಾಗಿ ಪೂಜನೀಯಳಾಗುತ್ತಾಳೆ. ಒಟ್ಟಾರೆಯಾಗಿ ಆ ಸನ್ನಿಧಿಗೆ ಹೋಗಲು ಎಲ್ಲರ ಮನಸ್ಸೂ ತುಡಿಯುತ್ತಿದೆ. ಆ ಕಾಲವು ತ್ವರಿತವಾಗಿ ಬರಲಿ ಎನ್ನುವ ಉತ್ಸಾಹದಿಂದ ಮುಂದುವರಿಯುವ ಕಾಲ ಸನ್ನಿಹಿತವಾಗಿದೆ. ಭಾರತದಲ್ಲಿ ಒಂದಷ್ಟು ಸಮಾನ ಮನಸ್ಕರು ಶಾರದಾ ಪೀಠದ ಬಗ್ಗೆ ಸಮಗ್ರ ಅಧ್ಯಯನ ಮಾಡುವ ಸಂಶೋಧನೆಯನ್ನು ಪ್ರಾರಂಭಿಸಿದ್ದೇವೆ.