ಗ್ರಹಣದಿಂದ ಆಧ್ಯಾತ್ಮಿಕ ಸಕಾರಾತ್ಮಕ ಉಪಯೋಗವೂ ಸಾಧ್ಯ: ಇಲ್ಲಿದೆ ಮಾಹಿತಿ

ಗ್ರಹಣದಿಂದ ಆಧ್ಯಾತ್ಮಿಕ ಸಕಾರಾತ್ಮಕ ಉಪಯೋಗವೂ ಸಾಧ್ಯ: ಇಲ್ಲಿದೆ ಮಾಹಿತಿ
ಗ್ರಹಣದಿಂದ ಆಧ್ಯಾತ್ಮಿಕ ಸಕಾರಾತ್ಮಕ ಉಪಯೋಗವೂ ಸಾಧ್ಯ: ಇಲ್ಲಿದೆ ಮಾಹಿತಿ

ಗ್ರಹಣಗಳ ಬಗ್ಗೆ ಭಯ ನಮ್ಮ ನಂಬಿಕೆಯ ಜಾಲದಲ್ಲಿ,  ವ್ಯೂಹದಲ್ಲಿ ಬಹಳ ಆಳವಾಗಿ ಹೊಕ್ಕಿದ್ದು, ಏನೇ ಪ್ರಯತ್ನ ಪಟ್ಟರೂ ಆ ಭಯದಿಂದ ಹೊರಗೆ ಬರಲು ಕಷ್ಟವಾಗಿದೆ. ನಾನು ಹಲವಾರು ಜ್ಯೋತಿಷ್ಯ ಗ್ರಂಥಗಳನ್ನು ಆಧರಿಸಿ ಗ್ರಹಣ ಕಾಲದಲ್ಲಿನ ಗ್ರಹಗಳ ಸ್ಥಿತಯನ್ನು ವಿಶ್ಲೇಷಿಸಿ ಗ್ರಹಣಗಳ ಅದರಲ್ಲೂ ಈಗ ಆಗುತ್ತಿರುವ ಸೂರ್ಯ ಗ್ರಹಣ ನಮ್ಮನ್ನು ಹೇಗೆ ಅಭಿವೃದ್ಧಿಯತ್ತ ಕೊಂಡೊಯ್ಯುತ್ತದೆ ಹಾಗೂ ನಾವು ಈ ಅವಕಾಶವನ್ನು ಉಪಯೋಗಿಸಿಕೊಳ್ಳಬೇಕು ಎಂಬ ಬಗ್ಗೆ  ಈ ಲೇಖನದಲ್ಲಿ ಬರೆದಿದ್ದೇನೆ.

ನಿಜ, ಗ್ರಹಣಗಳು ಪ್ರಕೃತಿಯಲ್ಲಿ ಒಂದು ಅಸಮಾನ್ಯವಾದ ಪರಿಸರವನ್ನು ಸೃಷ್ಟಿಸುತ್ತದೆ. ಆ ಪರಿಸ್ಥಿತಿಯನ್ನು ನಾವು ನಮ್ಮ ಅನುಕೂಲಕ್ಕೆ ಉಪಯೋಗಿಸಿಕೊಳ್ಳವ ಬಗ್ಗೆ  ಚಿಂತಿಸಬೇಕಿದೆ.

ಯಾವುದೇ ಕ್ರಿಯೆ ಸಕಾರಾತ್ಮಕ ಮತ್ತು ನಕಾರಾತ್ಮಕ ಪರಿಣಾಮಗಳಿಗೆ ಕಾರಣವಾಗುವುದು ಪ್ರಕೃತಿಯ ಸಹಜ ನಿಯಮ. ನಾವು ಆ ಕ್ರಿಯೆಯ ಸಕಾರಾತ್ಮಕ ಪ್ರಯೋಜನ ಹೊಂದುವುದು ನಮ್ಮ ಕೈಯಲ್ಲೇ ಇದೆ.  ಆಧ್ಯಾತ್ಮಕ ಸಾಧಕರು, ಗ್ರಹಣಕಾಲದಲ್ಲಿ, ಗ್ರಹಣ ಎಲ್ಲಿ ಗೋಚರವಾಗುತ್ತದೋ ಅಂತಹ ತೀರ್ಥ ಕ್ಷೇತ್ರಗಳಿಗೆ ಹೋಗಿ ಗ್ರಹಣ ಕಾಲದಲ್ಲಿ ತಮ್ಮ ಸಾಧನೆ ಮಾಡುವುದರ ಮೂಲಕ ಗ್ರಹಣದಿಂದ ಆಗುವ ಸಕಾರಾತ್ಮಕ ಪರಿಣಾಮಗಳನ್ನು ಉಪಯೋಗಿಸಿಕೊಳ್ಳುತ್ತಿದ್ದರು ಎಂಬ ಬಗ್ಗೆ ಇತಿಹಾಸದಲ್ಲಿ ನಾವು ಓದಿದ್ದೇವೆ, ಕೇಳಿದ್ದೇವೆ.

ನವಧಾನ್ಯಗಳನ್ನು ನವಗ್ರಹಗಳೊಂದಿಗೆ ಸಮೀಕರಿಸಿರುವ ನಮ್ಮ ಅಂದಿನ ಕಾಲದ ಋಷಿಗಳ ಉದ್ದೇಶ, ಈ ಧಾನ್ಯಗಳ ಜೈವಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯನ್ನು ರಕ್ಷಿಸುವುದಕ್ಕಾಗಿ ಎನ್ನುವುದು ನಮಗೆ ತಿಳಿಯಬೇಕು. ನವಗ್ರಹಗಳ ಆರಾಧನೆಯ ಹೆಸರಿನಲ್ಲಿ ಈ ಧಾನ್ಯಗಳನ್ನು ದಾನ ಮಾಡುವ ಉದ್ದೇಶವೂ ಇದೇ ಆಗಿದೆ.  ರವಿಯ ಧಾನ್ಯ “ಯುವ” ಅಂದರೆ ಬಾರ್ಲಿ, ಅದು ನಂತರದ ದಿನಗಳಲ್ಲಿ ಗೋಧಿಯಾಗಿ ಬದಲಾವಣೆ ಹೊಂದಿತು ಎನ್ನುವುದನ್ನು ಸಹ ಇಲ್ಲಿ ಹೇಳಬಯಸುತ್ತೇನೆ. ಹಾಗೆಯೇ,  ಮಂಗಳನ ಧಾನ್ಯ ದಕ್ಷಿಣ ಭಾರತದಲ್ಲಿ ತೊಗರಿ ಬೇಳೆಯಾದರೆ, ಮಸೂರಿ ಕಾಳು ಬೆಳೆಯುವ ಪ್ರದೇಶಗಳಲ್ಲಿ ಮಂಗಳನ ಧಾನ್ಯ ಮಸೂರಿ ಬೇಳೆಯಾಗಿದೆ.

ಈಗ ಗ್ರಹಣಗಳ ಸಮಯವನ್ನು ಸಕಾರಾತ್ಮಕವಾಗಿ ಉಪಯೋಗಿಸಿಕೊಳ್ಳುವ ಬಗ್ಗೆ ಚಿಂತಿಸೋಣ. ನಮ್ಮಲ್ಲಿ  ಆಳವಾಗಿ ಹೊಕ್ಕಿರುವ ನಂಬಿಕೆಗಳನ್ನು ಅದುಮಿಕ್ಕುವ ಪ್ರಯತ್ನ ಸಾಧುವಲ್ಲಾ, ಏಕೆಂದರೆ ಅದು ಸಾಧ್ಯವೂ ಅಲ್ಲ. ಹಾಗಾಗಿ ಎಲ್ಲ ನಕ್ಷತ್ರ, ರಾಶಿಯವರೂ ಸಹಾ ಗೋಧಿ ಮತ್ತು ಹುರುಳಿಕಾಳನ್ನು ದಾನವಾಗಿ ಕೊಡೋಣ. ಸಾಧ್ಯವಾದರೆ, ಕೆಂಪು ಬಟ್ಟೆ ಮತ್ತು ಬಣ್ಣ ಬಣ್ಣ ಚಿತ್ತಾರವುಳ್ಳ ಬಟ್ಟೆಯನ್ನೂ ದಾನ ಮಾಡೋಣ. ದಾನ ಮಾಡುವಾಗ ಅದರ ಅವಶ್ಯಕತೆ ಇರುವವರಿಗೆ ದಾನ ಮಾಡುವುದು ಹೆಚ್ಚು ಶ್ರೇಯಸ್ಕರ.

ದರ್ಭೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಅಡಿಗೆಮನೆಯಲ್ಲಿ, ನೀರಿನ ಟ್ಯಾಂಕ್, ಸಂಪ್, ದೇವರ ಮನೆ ಯಲ್ಲಿ ಇಡುವುದರಿಂದ ಗ್ರಹಣ  ಸಮಯದ ವಿಕಿರಣವನ್ನು  ತಡೆಗಟ್ಟುತ್ತದೆ ಎಂದು ವೈಜ್ಞಾನಿಕ ವಾಗಿಯೂ ಸಾಬೀತಾಗಿದೆ.

ನಾವು ಗ್ರಹಣ ಸಮಯದಲ್ಲಿ ಏನು ಮಾಡಬೇಕು:-

ಗ್ರಹಣ ಕಾಲಕ್ಕೆ ಹೊಟ್ಟೆ ಖಾಲಿ ಇಡುವುದರಿಂದ, ಆಹಾರದ ಜೀರ್ಣಶಕ್ತಿಗೆ ಬೇಕಾದ ಶಕ್ತಿಯು ಮನಸ್ಸನ್ನು ಒಂದೆಡೆ ನಿಲ್ಲಿಸಲು ಉಪಯೋಗವಾಗುತ್ತದೆ ಎಂಬುದು ಅನುಭವದಿಂದ ತಿಳಿದವರು ಹೇಳುತ್ತಾರೆ.

ಗ್ರಹಣ ಆರಂಭ ಆದ ತಕ್ಷಣ ಸ್ನಾನ ಮಾಡುವುದು. ಗ್ರಹಣ ಮುಗಿಯುವವರೆಗೂ, ನಮ್ಮ ನಮ್ಮ ಇಷ್ಟದೈವದ ಸ್ತೋತ್ರ, ಪ್ರಾರ್ಥನೆ, ಸಹಸ್ರನಾಮ ಗಳನ್ನು ಹೇಳುವುದು ಇಲ್ಲವೇ  ಭಕ್ತಿಯಿಂದ ಒಂದು ಕಡೆ ಕುಳಿತು ಕೇಳುವುದು.. ಆದಿತ್ಯ ಹೃದಯದ ಪಠಣೆ ಅಥವಾ ಶ್ರವಣವೂ ಒಳ್ಳೆಯದು. ಯಾವುದೇ  ಮಂತ್ರ ಉಪದೇಶ ಆಗಿರುವವರಿಗೆ,  ಗ್ರಹಣದ ಸಮಯದಲ್ಲಿ ಮಂತ್ರ ಸಾಧನೆಯನ್ನು ತಪ್ಪದೆ ಮಾಡಿ ಮಂತ್ರ ಸಿದ್ಧಿ  ಪಡೆದುಕೊಳ್ಳಲು ಪ್ರಕೃತಿಯು ನೀಡಿರುವ ಕೊಡುಗೆಯೇ  ಗ್ರಹಣವಾಗಿದೆ.

 ಮಂತ್ರ, ಸ್ತೋತ್ರ, ಪ್ರಾರ್ಥನೆಗಳ  ಶಬ್ಧತರಂಗಗಳು ನಮ್ಮ ಮನಸ್ಸಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುವುದು ನಮ್ಮೆಲ್ಲರ ಅನುಭವಕ್ಕೆ ಬಂದಿದೆ.  ಗ್ರಹಣ ಕಾಲವನ್ನು ಅದಕ್ಕಾಗಿ ಉಪಯೋಗಿಸಿಕೊಳ್ಳೋಣ.

ಆದಿತ್ಯ ಹೃದಯದ ಪಾಠವನ್ನು ಇಲ್ಲಿ ನೀಡಿದೆ,ಅಲ್ಲದೆ ಅದನ್ನು ಪಠಿಸಿರುವ ಯೂ ಟ್ಯೂಬ್ ಕೊಂಡಿ ಸಹ ಇಲ್ಲಿದೆ

ಗ್ರಹಣ ಮುಗಿದನಂತರ ಸಚೇಲ ಸ್ನಾನ ( ಉಟ್ಟ ಬಟ್ಟೆಯಲ್ಲಿ ಸ್ನಾನ) ಮಾಡಿ, ಸ್ವಲ್ಪ ಕಾಲ ಮನಸ್ಸನ್ನು ಕೇಂದ್ರೀಕರಿಸಿ ಧ್ಯಾನ ಮಾಡಿ, ಗ್ರಹಣದ ಎಲ್ಲಾ ಸಕಾರಾತ್ಮಕ ಪರಿಣಾಮಗಳು ನಮ್ಮ ಮೇಲೆ ಆಗಿದೆ, ನಾವು ಎಲ್ಲ ರೀತಿಯಲ್ಲಿಯೂ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದೇವೆ ಎಂಬ ಚಿಂತನೆಯನ್ನು, ಆಲೋಚನೆಯನ್ನು ನಮ್ಮ ಮನದಾಳದಲ್ಲಿ ನೆಲಸುವಂತೆ ಮಾಡೋಣ.  ನಂತರ ಪದ್ಧತಿಯಿರುವವರು, ದೇವರಿಗೆ ಪೂಜೆಸಲ್ಲಿಸಿ, ನೈವೇದ್ಯ ಆರತಿಗಳನ್ನು ಮಾಡಿ, ದೈನಂದಿನ ಕಾರ್ಯಗಳಲ್ಲಿ ಅತ್ಯಂತ ಉತ್ಸುಕತೆಯಿಂದ ತೊಡಗಿಸಿಕೊಳ್ಳೋಣ..

ನಮ್ಮೆಲರಿಗೂ, ಈ ಗ್ರಹಣವು ಅತ್ಯಂತ ಶುಭ ಫಲಗಳನ್ನು ನೀಡುವಂತೆ ಅನುಗ್ರಹಿಸಲಿ ಎಂದು ನನ್ನ ಗುರುಗಳ, ಗುರುಮಂಡಲ ರೂಪಿಣಿ, ಶ್ರೀ ಲಲಿತಾ ಮಹಾತ್ರಿಪುರಸುಂದರಿಯ ಪಾದ ಪದ್ಮಗಳಲ್ಲಿ ಅತ್ಯಂತ ಭಕ್ತಿ ಪೂರ್ವಕವಾಗಿ ಪ್ರಾರ್ಥನೆಯನ್ನು ಸಲ್ಲಿಸಬಹುದಾಗಿದೆ.  ಗ್ರಹಣ, ಜ್ಯೋತಿಷ್ಯದ ಕುರಿತ ಹೆಚ್ಚಿನ ವಿಶ್ಲೇಷಣೆಗಾಗಿ ಈ ಲೇಖನಗಳನ್ನೂ ಓದಿ

-ಜೆಎಸ್ ಡಿ ಪಾಣಿ (ಆತ್ಮಾನಂದನಾಥ)

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com