ಶಂಕರರಿಲ್ಲದಿದ್ದಿದ್ದರೆ ಛಿದ್ರ-ಛಿದ್ರವಾಗಿರುತ್ತಿತ್ತು ಸನಾತನ ತತ್ವಾದರ್ಶ, ಇರುತ್ತಿರಲಿಲ್ಲ ಭರತ ವರ್ಷ!

ನರ್ಮದೆ ಉಕ್ಕಿ ಹರಿಯುತ್ತಿದ್ದಳು, ಪ್ರವಾಹ... ಸಮತೋಲನ ಕಳೆದುಕೊಂಡು ಧಾರಿಣಿಗೆ ಬಂದೊದಗಿತ್ತು ವಿಪತ್ತು. ಧರ್ಮಕ್ಕೂ.... ಅಸಮತೋಲನದ ಅತಿವೃಷ್ಟಿಯಿಂದ ಜಲ ಪ್ರವಾಹ... ಸಮಚಿತ್ತತೆಯ ಜ್ಞಾನ
ಆದಿ ಶಂಕರಾಚಾರ್ಯ
ಆದಿ ಶಂಕರಾಚಾರ್ಯ
ನರ್ಮದೆ ಉಕ್ಕಿ ಹರಿಯುತ್ತಿದ್ದಳು..., ಪ್ರವಾಹ... ಸಮತೋಲನ ಕಳೆದುಕೊಂಡು ಧಾರಿಣಿಗೆ ಬಂದೊದಗಿತ್ತು ವಿಪತ್ತು. ಧರ್ಮಕ್ಕೂ.... ಅಸಮತೋಲನದ ಅತಿವೃಷ್ಟಿಯಿಂದ ಜಲ ಪ್ರವಾಹ...  ಸಮಚಿತ್ತತೆಯ ಜ್ಞಾನ ಮಾರ್ಗವನ್ನು ಮರೆತು ಕರ್ಮಕಾಂಡದ ಅತಿವೃಷ್ಟಿಯಾಗಿದ್ದರಿಂದ ಅಜ್ಞಾನದ ಪ್ರವಾಹ... 
ಅಜ್ಞಾನ ಅಸಮತೋಲನದ ಪ್ರವಾಹ, ಹಾಲಾಹಲದಿಂದ ಧರ್ಮವನ್ನು ರಕ್ಷಿಸಲು.. ಅಂದು  ಸಮುದ್ರಮಥನದಲ್ಲಿ ಆವಿರ್ಭವಿಸಿದ್ದ ಹಾಲಾಹಲದಿಂದ ಸೃಷ್ಟಿಯನ್ನು ಉಳಿಸಿದ್ದ ಶಂಕರನೇ ಇಂದು ಮತ್ತೊಮ್ಮೆ ಅವತರಿಸಿದ್ದ. ಶಂಕರರು ಗುರು ಗೋವಿಂದ ಭಗವತ್ಪಾದರ ಆಶ್ರಯ ಪಡೆದರು. ಕಮಂಡಲದಿಂದ ನರ್ಮದೆಯ ಪ್ರವಾಹವನ್ನು ತಗ್ಗಿಸಿದರು. ಭರತ ಮಂಡಲವನ್ನು ಕಾಲ್ನಡಿಗೆಯಲ್ಲಿ ಸುತ್ತಿ ಉಕ್ಕುತ್ತಿದ್ದ ಅಜ್ಞಾನದ ಹರಿವನ್ನೂ ನಿವಾರಿಸಿದರು.  
'ಶಂ ಕರೋತಿ ಇತಿ ಶಂಕರಃ|' 'ಶಂಮ' ಎಂದರೆ ಕಲ್ಯಾಣ ಮತ್ತು 'ಕರೋತಿ' ಎಂದರೆ ಮಾಡುವವನು. ಯಾರು ಸಮಸ್ತ ಸೃಷ್ಟಿಗೆ ಒಳಿತು ಮಾಡುತ್ತಾನೆಯೋ ಅವನೇ ಶಂಕರ.   
ಹಾಗಂತ ಶಂಕರರೇನು ಹೊಸತನ್ನು ಸೃಷ್ಟಿಸಿ ಕೊಡಲಿಲ್ಲ. ಆ ಶಂಕರ ಹೇಗೆ ಲಯಕರ್ತನೋ ಹಾಗೆಯೇ ಈ ಆದಿ ಶಂಕರರೂ ಲಯವನ್ನಷ್ಟೇ ಮಾಡಿದರು. ಯಾವುದರ ಲಯ? ಅಜ್ಞಾನದ ಲಯ....
ಅದ್ವೈತ ಸಿದ್ಧಾಂತ ವೇದ-ಉಪನಿಷತ್ ಗಳಲ್ಲೇ ಸ್ಪಷ್ಟವಾಗಿ ಉಲ್ಲೇಖವಾಗಿತ್ತು. ಕಾಲಕ್ರಮೇಣ ಧರ್ಮಕ್ಕೆ ಗ್ಲಾನಿಯುಂಟಾದಾಗ ಪಂಡಿತರೂ ವಿದ್ವಾಂಸರು ತಪ್ಪಾಗಿ ಅರ್ಥೈಸಿಕೊಂಡು ಅದ್ವೈತವನ್ನು ಮರೆತರು. ಜ್ಞಾನ ಮಾರ್ಗಕ್ಕಿಂತ ಕರ್ಮಕಾಂಡಕ್ಕೆ ಹೆಚ್ಚಿನ ಮಹತ್ವ ಕೊಟ್ಟಿದ್ದರು. ಶೃತಿ (ವೇದ)ಯ ಸಿದ್ಧಾಂತದ ಮೂಲ ಉದ್ದೇಶಕ್ಕೆ ಧಕ್ಕೆ ಉಂಟಾದಂತೆಲ್ಲಾ ಧರ್ಮಕ್ಕೂ ಗ್ಲಾನಿಯುಂಟಾಗಿತ್ತು. ಮೂಲ ತತ್ವವನ್ನೇ ಮರೆತು ಜಡವಾಗುತ್ತಿದ್ದ ಭಾರತವನ್ನು, ಭಾರತದ ತತ್ವವನ್ನು ಪುನಃ ಸ್ಥಾಪಿಸಲು, ಶೃತಿ ಸಾರವನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಸುವ ಜ್ಞಾನಿಯ ಅಗತ್ಯತೆ ಶಂಕರರ ಕಾಲದಲ್ಲಿ ಅತ್ಯವಶ್ಯಕವಾಗಿತ್ತು. ದಾರಿ ತಪ್ಪಿದವರನ್ನು ಸರಿ ದಾರಿಗೆ ತರುವ ಕೆಲಸವನ್ನು ಶಂಕರರು ಸಮರ್ಥವಾಗಿ ಮಾಡಿದರೇ ಹೊರತು ಹೊಸ ಸಿದ್ಧಾಂತವನ್ನು ತಾವಾಗಿಯೇ ಸೃಷ್ಟಿಸಿ ಅದನ್ನು ಪ್ರಚಾರ ಮಾಡಲಿಲ್ಲ. ಹಾಗಾಗಿಯೇ ಶಂಕರರ ಸಿದ್ಧಾಂತ ಇಂದಿಗೂ, ಎಂದಿಗೂ ಅಪ್ರಕಂಪ್ಯವಾಗಿ ಉಳಿಯಲು ಸಾಧ್ಯವಾಗಿದೆ. 
ಶಂಕರರ ಪರಮ ಗುರು ಗೌಡಪಾದರೇ ಮಾಯಾಮಾತ್ರಂ ಇದಂ ದ್ವೈತಂ, ಅದ್ವೈತಂ ಪರಮಾರ್ಥತಃ ಎಂದು ಹೇಳಿದ್ದರು. ಆದರೆ ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಸಾಂಖ್ಯಾದಿಗಳು ಪ್ರತಿಪಾದಿಸಿದ್ದ ದ್ವೈತದಲ್ಲೇ ಮುಳುಗಿದ್ದ ಪಂಡಿತರು, ಶೃತಿಯ ಸಾರವನ್ನು ತಪ್ಪಾಗಿ ಅರ್ಥೈಸಿಕೊಂಡು ಕರ್ಮಕಾಂಡಕ್ಕೇ ಹೆಚ್ಚಿನ ಮಹತ್ವ ನೀಡಿ ಜ್ಞಾನ ಮಾರ್ಗವನ್ನು ನಿರಾಕರಿಸಿದ್ದರು. ಅಂದರೆ ವೇದಗಳಲ್ಲಿ ಹೇಳಿದ ಒಂದು ಹಂತವನ್ನು ಬಿಟ್ಟು ಮುಂದಕ್ಕೆ ಹೋಗದೇ ಜಡವಾಗಿ ಅಂಟಿಕೊಂಡು ಕರ್ಮಕಾಂಡದಿಂದ ಮೋಕ್ಷ ಪ್ರಾಪ್ತಿ ಎಂಬ ಭ್ರಮೆಯಲ್ಲಿದ್ದರು. ಅದನ್ನು ಕಳಚಿದ್ದೇ ಶಂಕರರು. ಶಂಕರರು ಕೇವಲ ಅಜ್ಞಾನವನ್ನಷ್ಟೇ ಕಳೆಯಲಿಲ್ಲ. ವಿಷಕಂಠ ಹಾಲಾಹಲವನ್ನು ತಾನು ಸೇವಿಸಿ ಅಮೃತವನ್ನು ನೀಡಿ ದೇವತೆಗಳನ್ನು, ಸೃಷ್ಟಿಯನ್ನು ರಕ್ಷಿಸಿದಂತೆ, ಬಂದ ಕಷ್ಟಗಳನ್ನೆಲ್ಲಾ ಎದುರಿಸಿ ಅಜ್ಞಾನದ ರೂಪದಲ್ಲಿ ಭಾರತದ ಸನಾತನ ಧರ್ಮಕ್ಕೆ ಎದುರಾಗಿದ್ದ ಅಪಾಯವನ್ನೂ ಕಳೆದರು. ಸನಾತನ ಧರ್ಮವನ್ನು ಪುನಃ ಪ್ರತಿಷ್ಠಾಪಿಸಿ, ಅದ್ವೈತದ ಸುಧೆಯನ್ನು ಅನುಗ್ರಹಿಸಿದರು. 
ಆದರೆ ಪ್ರಸ್ತುತ ನಾವೆಲ್ಲಾ ಎಷ್ಟು ಅಜ್ಞಾನಿಗಳಾಗಿದ್ದೇವೆ ಎಂದರೆ ಸನ್ಯಾಸಿ ಎಂದರೆ ಕೇವಲ ಮೂಗು ಹಿಡಿದು ತಪಸ್ಸು ಮಾಡುವುದು ಅಥವಾ ಲೋಕ ವ್ಯವಹಾರಗಳಿಂದ ದೂರವಿದ್ದುಬಿಡುವುದು ಅಥವಾ ಒಂದು ವ್ಯವಸ್ಥೆಯಿಂದ ದೂರ ಇರುವುದು ಎಂಬ ಭಾವನೆ ಗಟ್ಟಿಯಾಗುತ್ತಿವೆ. ಆದರೆ ಭಾರತದ ಉಸಿರಾಗಿರುವ ತರ್ಕಬದ್ಧ ವಿಚಾರ ಮಂಡನೆ ಅಂದರೆ ಲಾಜಿಕ್ ನಲ್ಲಿ ನಮ್ಮ ಸನಾತನ ಧರ್ಮ ಅದೆಷ್ಟು ಮುಂದುವರೆದಿತ್ತು ಎನ್ನುವುದಕ್ಕೆ ಶಂಕರರು ಅತ್ಯುತ್ತಮ ಉದಾಹರಣೆಯಾಗಿ ನಿಲ್ಲುತ್ತಾರೆ. ಎಷ್ಟರ ಮಟ್ಟಿಗೆ ಎಂದರೆ ಸಾವಿರ ವರ್ಷಗಳು ಕಳೆದರೂ ಅವರ ತರ್ಕಬದ್ಧ ಮಂಡನೆ ಈ ಕ್ಷಣಕ್ಕೂ ಮಾದರಿಯಾಗುತ್ತದೆ. ವಿರೋಧಿಗಳೂ ಸಹ ತಮ್ಮ ವಾದದ ಸೌಧ ಕಟ್ಟುವುದಕ್ಕೆ ಶಂಕರರನ್ನೇ ಅಡಿಪಾಯವನ್ನಾಗಿರಿಸಿಕೊಳ್ಳುತ್ತಾರೆ. ಒಂದು ವಿಷಯದ ಬಗ್ಗೆ ಎರಡು ಪಕ್ಷಗಳ ನಡುವಿನ ವಾದ ಎಂದರೆ ಶಂಕರರು-ಮಂಡನ ಮಿಶ್ರರ ನಡುವಿನ ವಾದ ಸರಣಿಯೇ ಇಂದಿಗೂ ಮಾದರಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಧ್ಯಯನಕ್ಕೆ ಸೂಕ್ತ ಉದಾಹರಣೆ. 
ನಾವೆಲ್ಲಾ ಯೂತ್ ಐಕಾನ್ ಎಂದು ಪ್ರತಿ ಜನವರಿ 12 ರಂದು ಆರಾಧಿಸುವ ವಿವೇಕಾನಂದರು ಸಹ  ಶಂಕರಭಗವತ್ಪಾದರ ಕುರಿತು "In Shankaracharya we saw tremendous intellectual power, throwing the scorching light of reason upon everything. We want today that bright sun of intellectuality joined with the heart of Buddha", ಅಂದರೆ "ಶಂಕರಭಗವತ್ಪಾದರು ಪ್ರಚಂಡ ಬೌದ್ಧಿಕ ಶಕ್ತಿಯನ್ನು ಹೊಂದಿದ್ದರು "ನಮಗೆ ಈಗ ಅಗತ್ಯವಿರುವುದು ಶಂಕರರ ರೀತಿಯ ಬುದ್ಧಿಮತ್ತೆ ಹಾಗೂ ಬುದ್ಧನ ರೀತಿಯ ಪ್ರೀತಿ ಎಂದಿದ್ದಾರೆ. ಅಷ್ಟೇ ಏಕೆ ಸ್ವಾಮಿ ವಿವೇಕಾನಂದರ ಗುರುಗಳಾಗಿದ್ದ ರಾಮಕೃಷ್ಣ ಪರಮಹಂಸರಿಗೂ ಸಹ ಪ್ರೇರಕ ಶಕ್ತಿಯಾಗಿದ್ದದ್ದು ಇದೇ ಶಂಕರ ಭಗವತ್ಪಾದರು. 
ಯೂತ್ ಐಕಾನ್
ಇಂದು ಇಡೀ ಭಾರತವೇ ಯೂತ್ ಐಕಾನ್ ಎಂದು ಮೆಚ್ಚಿ ಮೆರೆಸುವ ಇತ್ತೀಚಿನ ವಿವೇಕಾನಂದರಂತಹ ಧೀಶಕ್ತಿಯುಳ್ಳ ಸನ್ಯಾಸಿಗೇ ಆರಾಧ್ಯ ಮೂರ್ತಿಯಾಗಿದ್ದರು 12 ಶತಮಾನಗಳ ಹಿಂದಿನ ಶಂಕರ ಭಗವತ್ಪಾದರು! 
ಅಲ್ಲವೇ? 8 ವರ್ಷದ ಬಾಲ ಸನ್ಯಾಸಿ. 12 ಶತಮಾನಗಳ ಹಿಂದೆ ಯಾವ ಸಂಚಾರ ವ್ಯವಸ್ಥೆ? ಕೇರಳದ ಕಾಲಟಿಯೆಲ್ಲಿ? ನರ್ಮದಾ ನದಿಯ ತಟದ ಗುಹೆಯೆಲ್ಲಿ? ಯಾವ ನೆರವು? ಯಾವ ಅರ್ಥವ್ಯವಸ್ಥೆ? ಬುದ್ಧಿ ಚಿಗುರೊಡೆಯುವ ವಯಸ್ಸಿನಲ್ಲೇ ಗುರುವನ್ನು ಅರಸಿ ಹೊರಟರಲ್ಲಾ ಬಾಲ ಸನ್ಯಾಸಿ ಶಂಕರರು ಅವರ ಧೀರೋದಾತ್ತ ಮನಸ್ಥಿತಿ, ವ್ಯಕ್ತಿತ್ವವನ್ನು ಬಣ್ಣಿಸುವುದೆಂತು? ಪದಪುಂಜಗಳು ಸಾಲದೇ ನತಮಸ್ತಕರಾಗುತ್ತೇವೆ ಅಷ್ಟೇ! ಶಂಕರರು ತಮ್ಮ ಗುರು ಗೋವಿಂದ ಭಗವತ್ಪಾದರನ್ನು ಸಂದರ್ಶಿಸಿ ತಮ್ಮನ್ನು ಭವ ಸಾಗರದಿಂದ ಮುಕ್ತಗೊಳಿಸಿ ಅನುಗ್ರಹಿಸಬೇಕೆಂದು ಪ್ರಾರ್ಥಿಸುತ್ತಾರೆ. ಆದರೆ ಇದಕ್ಕೆ ಪ್ರತಿಯಾಗಿ " ಈ ಮರ್ತ್ಯ ಶರೀರದಿಂದ ಹೇಗೆ ಭವ ಸಾಗರದಿಂದ ಬಿಡುಗಡೆ ಹೊಂದುವೆ ಎಂದು ಕೇಳುತ್ತಾರೆ ಗೋವಿಂದ ಭಗವತ್ಪಾದರು. ಗುರುಗಳ ಪ್ರಶ್ನೆಗೆ ಉತ್ತರಿಸಿದ್ದ ಶಂಕರರು ಜೀವನ್ಮರಣ ಶರೀರಕ್ಕೇ ಹೊರತು ಆತ್ಮಕ್ಕೆ ಅಲ್ಲ ಎಂದು ಹೇಳುತ್ತಾರೆ, ಗುರುಗಳನ್ನು ಆಶ್ರಯಿಸಿ ಅಧ್ಯಯನ ಮಾಡುವುದಕ್ಕೂ ಮುನ್ನವೇ ಇಂತಹ ಪಾರಮಾರ್ಥಿಕ ಉತ್ತರವನ್ನು ನೀಡುವಷ್ಟು ಜ್ಞಾನಿಗಳಾಗಿದ್ದರಲ್ಲಾ ಶಂಕರರು ಆದ್ದರಿಂದಲೆ ಅವರನ್ನು ಬುದ್ಧಿವಂತಿಕೆಯಲ್ಲಿ ಸೂರ್ಯನಿಗೆ ಹೋಲಿಸಿ ನಮಿಸಿದ್ದೇವೆ. ಆದ್ದರಿಂದಲೇ ಜಗತ್ತು ಶಂಕರರನ್ನು ನಮಾಮಿ ಭಗವತ್ಪಾದಂ ಲೋಕಶಂಕರಂ, ಆರಾದ್ ಜ್ಞಾನದಭಿಸ್ತಿಭಿಹಿ ಪ್ರತಿಹತಶ್ಚನ್ದ್ರಾಯುತೆ ಭಾಸ್ಕರಹ ತಸ್ಮೈ ಶಂಕರ ಭಾನವೇ ತನುಮನೋ ವಾಭಿರ್ನಮಸ್ಕುರ್ಮಹೆ ಎಂದು ಕೊಂಡಾಡಿದೆ. ಕೇವಲ ಕೊಂಡಾಡುವವರಿಗಷ್ಟೇ ಅಲ್ಲ, ಶಂಕರರು ತಮ್ಮನ್ನು ವಿರೋಧಿಸುವವರಿಗೂ ಕೊಂಡಾಡುವವರಷ್ಟೇ ಮುಖ್ಯವಾಗಿದ್ದಾರೆ ಅಥವಾ ಕೊಂಡಾಡುವವರಿಗಿಂತಲೂ ವಿರೋಧಿಸುವವರಿಗೆ ಸ್ವಲ್ಪ ಹೆಚ್ಚಾಗಿಯೇ ಮುಖ್ಯವಾಗಿದ್ದಾರೆ. ಏಕೆಂದರೆ ಶಂಕರರು ಸಂಪ್ರದಾಯಸ್ಥರಾಗಿದ್ದುಕೊಂಡೇ ಶಂಕರರು ಸಂಪ್ರದಾಯಸ್ಥರು ಮಾಡುತ್ತಿದ್ದ ತಪ್ಪುಗಳನ್ನು ವಿರೋಧಿಸಿದ್ದರು, ಕರ್ಮಠರಾಗಿದ್ದುಕೊಂಡೇ ಕರ್ಮಠರ ತಪ್ಪುಗಳನ್ನು ತಿದ್ದಿ ತೀಡಿದರು. 
ಸಾಂಖ್ಯರನ್ನು, ಇತರ ಪ್ರತಿಪಕ್ಷದ ವಿದ್ವಾಂಸರುಗಳನ್ನು ಸಾತ್ವಿಕ ಮಾರ್ಗದಲ್ಲಿ ವಿರೋಧಿಸಿ, ಮರ್ಯಾದೆಯಿಂದಲೆ ಮಣಿಸಿದ್ದರು. ಬೌದ್ಧರ ತಪ್ಪುಗಳನ್ನೂ ತಿದ್ದಿ ಬುದ್ಧಿ ಹೇಳಿದರು. ವೇದಗಳ ಚೌಕಟ್ಟುಗಳನ್ನು ದಾಟದೇ, ವೇದದ ಪರಮ ತತ್ವಕ್ಕೆ ಚ್ಯುತಿ ಬಾರದಂತೆ ಅದ್ವೈತ ಸಿದ್ಧಾಂತವನ್ನು ಸಾರಲು ಅಂದಿನ ಜನರು ವಿಧಿಸಿದ್ದ ಕಟ್ಟುಪಾಡುಗಳನ್ನು ಮೀರಿದರು. ತಾವೊಬ್ಬರೇ ಒಂದು ಪಕ್ಷ ಉಳಿದವರೆಲ್ಲಾ ಒಂದು ಪಕ್ಷ ಎಂಬಂತಿದ್ದಾಗಲೂ ಸಂಚಾರ ವ್ಯವಸ್ಥೆಯೇ ಇಲ್ಲದ ಕಾಲದಲ್ಲಿ ಪ್ರತಿ ನಿತ್ಯವೂ ಯಾತ್ರೆ ಕೈಗೊಂಡರು. ಭಾರತ ದೇಶವನ್ನು ಸುತ್ತಿ, ವಾದ ಮಾಡಿ ಅನೇಕ ದುರಹಂಕಾರಿ ವಿದ್ವಾಂಸರು ತಮ್ಮ ತಪ್ಪನ್ನು ತಾವೇ ಅರ್ಥಮಾಡಿಕೊಳ್ಳುವಂತೆ,  ಜ್ಞಾನ ಮಾರ್ಗದ ಮೂಲಕವೇ ಮೋಕ್ಷ ಪ್ರಾಪ್ತಿ ಎಂಬುದನ್ನು ಒಪ್ಪಿ ಜಿತೋಸ್ಮಿ ಎನ್ನಿಸಿದ್ದರು. ಕರ್ಮಕಾಂಡದಲ್ಲಿ ಅಪ್ರಕಂಪ್ಯವಾದ ನಂಬಿಕೆ ಹೊಂದಿದ್ದ ಮಂಡನ ಮಿಶ್ರರಂತಹ ಪಂಡಿತರನ್ನು ಶಿಷ್ಯರನ್ನಾಗಿಸಿಕೊಂಡರು. ಕೇವಲ 35 ವರ್ಷಗಳಲ್ಲಿನ ಜೀವಿತಾವಧಿಯಲ್ಲಿ ಭಾರತದ ಸನಾತನ ಧರ್ಮದ ಸತ್ವವನ್ನು ಪುನಃ ಪ್ರತಿಷ್ಠಾಪಿಸಿದ ಶಂಕರರಲ್ಲದೇ ಇಂದಿನ ಯುವ ಪೀಳಿಗೆಗೆ, ವಿವೇಕಾನಂದರು ಹೇಳಿದಂತೆ ಭಾರತಕ್ಕೆ ಅಗತ್ಯವಿರುವ ತೀಕ್ಷ್ಣ ಬುದ್ಧಿವಂತಿಕೆಗೆ ಶಂಕರರಲ್ಲದೇ ಮತ್ಯಾರು ತಾನೆ ಪ್ರೇರಕ ಶಕ್ತಿಯಾಗಬಲ್ಲರು? ಭಾರತ ಎದುರಿಸುತ್ತಿರುವ ಬೌದ್ಧಿಕ ದಾಸ್ಯ, ವಿಸ್ಮೃತಿಯಿಂದ ಹೊರಬರಲು ಶಂಕರರಲ್ಲದೇ ಮತ್ಯಾರು ತಾನೆ ಪ್ರೇರೇಪಿಸಬಲ್ಲರು?
ಇಷ್ಟಕ್ಕೂ ನಾವೇಕೆ ಶಂಕರರಿಗೆ ಕೃತಜ್ನರಾಗಿರಬೇಕು ಅಥವಾ ಗೌರವಿಸಬೇಕೆಂದರೆ ಅವರು ಜೀವಿಸಿ- ಮುಕ್ತರಾದ ಸಾವಿರ ವರ್ಷಗಳು ಕಳೆದರೂ ನಾವು ಧರ್ಮದ ವಿಷಯದಲ್ಲಿ ಯಾವುದೇ ಸಮಸ್ಯೆಯನ್ನೂ ಎದುರಿಸದಂತಹ ಸ್ಥಿತಿಯನ್ನು ನಿರ್ಮಾಣ ಮಾಡಿ ಹೋಗಿದ್ದಾರೆ. ಸಾವಿರ ವರ್ಷಗಳು ಕಳೆದರೂ ಧರ್ಮಕ್ಕೆ ವಿಪ್ಲವ ಬರದಂತಹ ವಾತಾವರಣ ನಿರ್ಮಿಸಿದ್ದರು. 
ಇನ್ನು ಕೊನೆಯದಾಗಿ, ಸಾ.ಕೃ ರಾಮಚಂದ್ರರಾಯರಂತಹ ವಿದ್ವಾಂಸರು ತಮ್ಮ ದರ್ಶನ ಪ್ರಬಂಧದಲ್ಲಿ ಶಂಕರರ ಬಗ್ಗೆ ಹೀಗೆ ಬರೆಯುತ್ತಾರೆ, "ನಾಡಿನ ಮೇಧಾವಿಗಳಲ್ಲಿ, ಮಾರ್ಗದರ್ಶಕರಲ್ಲಿ ಬುದ್ಧನನ್ನು ಬಿಟ್ಟರೆ ಶ್ರೀಶಂಕರರದ್ದೆ ಅಗ್ರಸ್ಥಾನ. ಅವರ ಬುದ್ಧಿಶಕ್ತಿ, ವಿಚಾರನೈಪುಣ್ಯ, ಸಂಪ್ರದಾಯಶ್ರದ್ಧೆ, ಸಮನ್ವಯ ಬುದ್ಧಿ, ಲೋಕಾನುಗ್ರಹ ದೃಷ್ಟಿ, ಪ್ರತಿಪಾದನಾ ಸಾಮರ್ಥ್ಯ ಇವೆಲ್ಲವೂ ಅನಾದೃಶ್ಯವಾದುವು. ಅವರ ನಂತರ ತೋರಿಕೊಂಡ ಯಾವ ಪಂಥದ ಆಚಾರ್ಯರಾಗಲಿ ವ್ಯಾಖ್ಯಾನಕಾರರಾಗಲಿ ಅವರ ಬರಹಗಳನ್ನು ಅಲ್ಲಗಳೆಯುವಂತಿರಲಿಲ್ಲ. ಅವರನ್ನು ಅನುಸರಿಸಿದವರಿಗೂ ವಿರೋಧಿಸಿದವರಿಗೂ ಅವರು ಸಮನಾಗಿಯೇ ಉಪಜೀವ್ಯರು! ವೇದಾಂತ ಸಂಪ್ರದಾಯ ಸ್ಪಷ್ಟವಾದುದು ಅವರ ಕಾಲದಲ್ಲಿಯೇ. ಅವರಿಂದಲೇ. ಮುಂದೆ ಒಂದು ಸಾವಿರಕ್ಕೂ ಮಿಕ್ಕು ವರ್ಷಗಳು ಕಳೆದ ಮೇಲೂ ಅವರ ಈ ನಾಡಿದ ಎಲ್ಲರ ನೆನಪಿನಲ್ಲಿ ಅಚ್ಚಳಿಯದೇ ಉಳಿದುಕೊಂಡಿದೆ". 
ಅದ್ವೈತ ತತ್ವ ಸಿದ್ದಾಂತ, ಅದರ ಸಮರ್ಥನೆಗಾಗಿ ಅವರು ಮಾಡಿದ ವಾದ ಮಂಡನೆ, ತರ್ಕ, ಇಡೀ ಜಗತ್ತನ್ನೇ ಬೆರಗುಗೊಳಿಸಿದೆ. ಇಂದು ಶಂಕರ ಜಯಂತಿ.ಸಾವಿರಕ್ಕೂ ಮಿಕ್ಕು ವರ್ಷಗಳು ಕಳೆದರೂ ಅವರ ಸಿದ್ಧಾಂತ ಅಚ್ಚಳಿಯದೇ ಉಳಿದುಕೊಂಡಿದೆ ಎಂದರೆ, ಶಂಕರರಿಲ್ಲದಿದ್ದಿದ್ದರೆ ಯಾವ ಸನಾತನ ಧರ್ಮದ ಅನುಯಾಯಿಗಳು ಇಂದು "ಹಿಂದೂ" ಎಂದು ಹೇಳಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ ಇಂದಿಗೆ ವೇದಾಂತ ತತ್ವ ಎಂದರೆ ಯಾರಿಗೂ ಅರ್ಥವೇ ಆಗುತ್ತಿರಲಿಲ್ಲ. ವೇದಾಂತ ತತ್ವ ಎಂದರೇನು ಎಂಬುದೇ ಅರ್ಥವಾಗದೇ ಇದ್ದಿದ್ದರೆ ಇತ್ತೀಚಿನ ಶತಮಾನಗಳಲ್ಲಿ ನಾವು ರಾಮಕೃಷ್ಣ ಪರಮಹಂಸ, ರಮಣ ಮಹರ್ಷಿಗಳು, ವಿವೇಕಾನಂದರಂತಹವರನ್ನೂ ಕಾಣಲು ಬಹುಶಃ ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಏಕೆ ಅಸಲಿಗೆ ಭಾರತ ಭಾರತವಾಗೇ ಉಳಿಯುತ್ತಿರಲಿಲ್ಲ, ಭಾರತದ ಸನಾತನ ಧರ್ಮ ಜೀವಂತವಾಗಿದ್ದರೆ ಅದಕ್ಕೆ ಶಂಕರರ ಕೊಡುಗೆ ಅಪಾರ.  ಹಾಗಾಗಿಯೇ ಸಾವಿರ ಅಲ್ಲ ಮತ್ತೂ ಸಾವಿರ ವರ್ಷ ಕಳೆದರೂ ಶಂಕರರು ಪ್ರಸ್ತುತ. ಎಂದಿಗೂ ಜೀವಂತ...
- ಶ್ರೀನಿವಾಸ್ ರಾವ್
srinivas.v4274@gmail.com, srinivasrao@kannadaprabha.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com