ಪ್ರತಿ ವರ್ಷ ಮಾಘ ಮಾಸದ ಕೃಷ್ಣ ಪಕ್ಷದ ಚತುರ್ದಶಿಯಂದು ಮಹಾ ಶಿವರಾತ್ರಿ ಆಚರಣೆ ಮಾಡಲಾಗುತ್ತದೆ. ಶಿವರಾತ್ರಿ ಭಗವಾನ್ ಶಿವನಿಗೆ ಅತ್ಯಂತ ಪ್ರಿಯವಾದ ದಿನವಾಗಿದೆ.
ಬ್ರಹ್ಮಾಂಡದ ಎರಡು ಅತ್ಯುನ್ನತ ಶಕ್ತಿಗಳಾದ ಶಿವ ಹಾಗೂ ಪಾರ್ವತಿಯ ಸಂಯೋಗದ ಪ್ರತೀಕವಾಗಿ ಮಹಾಶಿವರಾತ್ರಿಯ ಆಚರಣೆ ಮಾಡುವುದು ಎಂಬುದರಿಂದ ಹಿಡಿದು ಸಮುದ್ರ ಮಥನದ ಸಂದರ್ಭದಲ್ಲಿ ಬಂದ ಹಾಲಾಹಲವನ್ನು ಕುಡಿದ ಶಿವ ಜಗತ್ತನ್ನು ಉಳಿಸಿದ ಮಹಾ ಪರ್ವದಿದ ಎಂಬವರೆಗೆ ಹಲವು ಪೌರಾಣಿಕ ಕಥೆಗಳು ಮಹಾಶಿವರಾತ್ರಿಗೆ ತಳುಕು ಹಾಕಿಕೊಂಡಿವೆ.
ಮತ್ತೊಂದು ಕಥೆಯ ಪ್ರಕಾರ ಮಹಾಶಿವರಾತ್ರಿಯನ್ನು ಶಿವನ ಸೃಷ್ಟಿ, ಸ್ಥಿತಿ ಲಯಗಳ ತಾಂಡವ ನೃತ್ಯ ಎಂದೂ ಹೇಳಲಾಗುತ್ತದೆ. ಸಮುದ್ರಮಥನದ ವೇಳೆ ಉದ್ಭವವಾದ ಹಾಲಾಹಲವನ್ನು ಜಗತ್ತಿನ ಉಳಿವಿಗಾಗಿ ಶಿವ ಕುಡಿದ, ಪರಿಣಾಮ ಆತನ ಕುತ್ತಿಗೆ ಭಾಗ ನೀಲಿಯಾಯಿತು. ಇದರಿಂದಲೇ ಶಿವನಿಗೆ ನೀಲಕಂಠ ಎಂಬ ಹೆಸರೂ ಬಂದಿದೆ.
ಮತ್ತೊಂದು ಪೌರಾಣಿಕ ಕಥೆಯ ಪ್ರಕಾರ, ಶಿವನನ್ನು ಪಡೆಯುವುದಕ್ಕಾಗಿ ಯತ್ನಿಸುತ್ತಿದ್ದ ಪಾರ್ವತಿಯ ತೀವ್ರ ತಪಸ್ಸಿಗೆ ಮೆಚ್ಚಿ, ಶಿವ ಪಾರ್ವತಿಯನ್ನು ವಿವಾಹವಾದ ದಿನವನ್ನೇ ಮಹಾಶಿವರಾತ್ರಿ ಎಂದು ಆಚರಣೆ ಮಾಡಲಾಗುತ್ತಿದೆ. ಮಹಾಶಿವರಾತ್ರಿಯ ದಿನದಂದು ಉಪವಾಸ ಮಾಡಿ ಜಾಗರಣೆ ಮಾಡುವುದರಿಂದ ಅಜ್ಞಾನ ಕಳೆದು ಸ್ವಯಂ ಸಾಕ್ಷಾತ್ಕಾರವನ್ನು ಸಾಧಿಸಲು ಸಾಧ್ಯವಾಗುತ್ತದೆ. ಈ ರೀತಿ ಜಾಗೃತವಾಗಿರುವುದನ್ನೇ ಜಾಗರಣೆ ಎನ್ನಲಾಗಿದೆ.
ಸ್ವಯಂ ಸಾಕ್ಷಾತ್ಕಾರ ಮಾಡಿಕೊಂಡ ವ್ಯಕ್ತಿ ಜನನ-ಮರಣಗಳ ಚಕ್ರದಿಂದ ಬಿಡುಗಡೆ ಹೊಂದುತ್ತಾನೆ ಎಂಬ ನಂಬಿಕೆ ಇದೆ. ಇನ್ನು ಮಹಾಶಿವರಾತ್ರಿಯ ದಿನದಂದು ಉಪವಾಸ ಆಚರಣೆ ಮಾಡುವುದರಿಂದ ನಕಾರಾತ್ಮಕ ಚಿಂತನೆ, ಶಕ್ತಿಗಳು ದೂರವಾಗುತ್ತವೆ ಆ ಮೂಲಕ ಜೀವನಕ್ಕೆ ಹೊಸ ಚೈತನ್ಯ ಲಭಿಸುತ್ತದೆ ಎಂಬ ನಂಬಿಕೆಯೂ ಇದೆ. ಈ ದೃಷ್ಟಿಯಿಂದ ಮಹಾ ಶಿವರಾತ್ರಿ ವ್ಯಕ್ತಿಯೋರ್ವನಿಗೆ ತನ್ನ ಆತ್ಮಾವಲೋಕನ ಮಾಡಿಕೊಳ್ಳಲು ಮತ್ತು ಆಧ್ಯಾತ್ಮಿಕವಾಗಿ ವಿಕಸನಗೊಳ್ಳಲು ಇರುವ ಅವಕಾಶವಾಗಿದೆ.
ಮಹಾಶಿವರಾತ್ರಿಯನ್ನು ದೇವಾಲಯಗಳಲ್ಲಿ ಅಷ್ಟೇ ಅಲ್ಲದೇ ಮನೆಯಲ್ಲಿಯೂ ಸರಳವಾಗಿ ಆಚರಣೆ ಮಾಡಬಹುದಾಗಿದೆ.
ಸಾಮಾನ್ಯವಾಗಿ ಶಿವರಾತ್ರಿಯ ಆಚರಣೆಯನ್ನು 4 ಯಾಮ (ನಾಲ್ಕು ಭಾಗಗಳನ್ನಾಗಿ ವಿಂಗಡಿಸಿ ಆಚರಣೆ)ಗಳಲ್ಲಿ ರುದ್ರಾಭಿಷೇಕ ನೆರವೇರಿಸುವ ಮೂಲಕ ಆಚರಣೆ ಮಾಡುವ ರೂಢಿ ಇದೆ.
ಯಾಮ ಎಂಬ ಶಬ್ದ ಕಾಲ ಸೂಚಕವಾಗಿದೆ. ಒಂದು ಯಾಮ ಎಂದರೆ ಮೂರು ತಾಸುಗಳ ಅವಧಿಯಾಗಿರುತ್ತದೆ. 12 ತಾಸುಗಳ ರಾತ್ರಿಯ ಅವಧಿಯನ್ನು 4 ಯಾಮಗಳನ್ನಾಗಿ ವಿಂಗಡಣೆ ಮಾಡಲಾಗಿದೆ.
ಸಾಮಾನ್ಯವಾಗಿ ಮೊದಲ ಶಿವರಾತ್ರಿಯ ದಿನದಂದು ಮೊದಲ ಯಾಮ ಪೂಜೆ ಸಂಜೆ 6 ಗಂಟೆಯಿಂದ ಆರಂಭಿಸಿ 9 ಗಂಟೆಯವರೆಗೂ ಆಚರಣೆ ಮಾಡಲಾಗುತ್ತದೆ. (ಮೊದಲ ಯಾಮ ಪೂಜೆ ಸೂರ್ಯಾಸ್ತದ ಮೇಲೆ ಅವಲಂಬನೆಯಾಗಿರುತ್ತದೆ) 2 ನೇ ಯಾಮ ಪೂಜೆ ರಾತ್ರಿ 9 ರಿಂದ 12 ವರೆಗೆ ನಡೆಯಲಿದೆ. 3 ನೇ ಯಾಮ ಪೂಜೆ ಮಧ್ಯ ರಾತ್ರಿ 12 ರಿಂದ 3 ಗಂಟೆವರೆಗೆ ನಡೆಯಲಿದ್ದು 4 ನೇ ಯಾಮ ಪೂಜೆ 3 ಗಂಟೆಯಿಂದ ಬೆಳಿಗ್ಗೆ 6 ಗಂಟೆ ವರೆಗೆ ನಡೆಯಲಿದೆ.
ಏಕಾದಶ ರುದ್ರ ಪಠಣ ಇರುವ ಯಾಮ ಪೂಜೆಯಲ್ಲಿ ಮತ್ತೊಂದು ವಿಶೇಷವಿದೆ. ಅದೇನೆಂದರೆ ಮೊದಲನೆಯ ಯಾಮದಲ್ಲಿ ಹೇಳಿದ ಮಂತ್ರಗಳ ಎರಡರಷ್ಟನ್ನು 2 ನೇ ಯಾಮ ಪೂಜೆ ವೇಳೆ ಪಠಿಸಬೇಕು, ಎರಡನೆಯ ಯಾಮದ ಎರಡರಷ್ಟು ಮಂತ್ರಗಳನ್ನು ಮೂರನೆಯ ಯಾಮದಲ್ಲಿ ಪಠಿಸಲಾಗುತ್ತದೆ. ಮೂರನೆಯ ಯಾಮದ ಎರಡರಷ್ಟು ಮಂತ್ರಗಳನ್ನು ನಾಲ್ಕನೆಯ ಯಾಮದಲ್ಲಿ ಹೇಳುವುದು ರೂಢಿಯಲ್ಲಿದೆ.
ಸತತ ಹದಿನಾಲ್ಕು ವರ್ಷಗಳ ವರೆಗೆ ಈ ರೀತಿಯ ಶಿವರಾತ್ರಿ ವ್ರತವನ್ನು ಆಚರಿಸಿದರೆ ಉತ್ತಮ ಫಲ ಸಿಗಲಿದೆ ಎಂಬ ನಂಬಿಕೆ ಇದೆ.
Advertisement