

ಸೂರ್ಯ ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರವೇಶಿಸಬೇಕಾದರೆ ಒಂದು ತಿಂಗಳು ಬೇಕಾಗುತ್ತದೆ. ಅದರಂತೆಯೇ ಸೂರ್ಯ ಧನುರಾಶಿಯಲ್ಲಿ ಪ್ರವೇಶ ಮಾಡಿ ಮಕರ
ರಾಶಿಗೆ ಪ್ರವೇಶ ಮಾಡಲು ಒಂದು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಈ ಒಂದು ತಿಂಗಳನ್ನು (ಧನು ರಾಶಿ) "ಧನುರ್ಮಾಸ" ಎಂದು ಕರೆಯುತ್ತಾರೆ. ಕೃಷ್ಣನು ಭಗವದ್ಗೀತೆಯಲ್ಲಿ ಮಾಸಗಳನ್ನು ಕುರಿತು ಹೇಳುವಾಗ ಧನುರ್ಮಾಸದ ಮಹಾತ್ಮೆಗೆ ವಿಶೇಷ ಒತ್ತು ನೀಡಿದ್ದಾನೆ
ಈ ಮಾಸದಲ್ಲಿ ವಿಶೇಷವಾಗಿ ಚಳಿ ಇರುತ್ತದೆ. ಚಳಿಯ ತೀವ್ರತೆಯೆಷ್ಟು ಇರುತ್ತದೆ ಎಂದರೆ ಚಳಿಯನ್ನು ತಾಳಲಾರದೆ, ರಾತ್ರಿ ವೇಳೆ ಮನುಷ್ಯ ತನ್ನ ದೇಹವನ್ನು ಬಿಲ್ಲಿನಂತೆ ಬಾಗಿಸಿ ಮಲಗುತ್ತಾನೆ. ಮುದುರಿಕೊಳ್ಳುತ್ತಾನೆ. ಆದ್ದರಿಂದಲೇ ಈ ಮಾಸಕ್ಕೆ ಧನುರ್ಮಾಸ ಎಂದು ಕರೆಯುತ್ತಾರೆಂಬ ಪ್ರತೀತಿ ಇದೆ. ಶಾಸ್ತ್ರಗಳ ಪ್ರಕಾರ ಮಾನವರಿಗೆ ಒಂದು ವರ್ಷ - ದೇವತೆಗಳಿಗೆ ಒಂದು ದಿನ, ಧನುರ್ಮಾಸವು ದೇವತೆಗಳ ಪ್ರಭಾತ ಕಾಲ, ಅಂದರೆ ಈ ಕಾಲದಲ್ಲಿ ದೇವತೆಗಳು ಎಚ್ಚರಗೊಂಡು ಭಕ್ತರ ಪ್ರಾರ್ಥನೆಗೆ ಶೀಘ್ರ ಪ್ರತಿಕ್ರಿಯಿಸುತ್ತಾರೆ.
ಧನುರ್ಮಾಸದಲ್ಲಿ ಮಾಡಿದ ಪೂಜೆ, ವ್ರತ, ದಾನ ಸೇವೆಗಳ ಫಲ ಸಾವಿರ ಪಟ್ಟು ಹೆಚ್ಚಾಗುತ್ತದೆ ಎಂದು ಪುರಾಣಗಳು ಹೇಳುತ್ತವೆ. ಧನುರ್ಮಾಸದಲ್ಲಿ ಶ್ರೀಮಹಾವಿಷ್ಣುವಿನೊಂದಿಗೆ ಲಕ್ಷ್ಮೀ ದೇವಿ ಭೂಮಿಯಲ್ಲಿ ಸಂಚರಿಸುತ್ತಾಳೆ ಎಂದು ಶಾಸ್ತ್ರ ನಂಬಿಕೆಯಿದೆ.
ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನಾದಿಗಳನ್ನು ಮುಗಿಸಿ ದೇಗುಲಗಳಲ್ಲಿ ಮುಂಜಾನೆಯ ಪೂಜೆಯು ಆರಂಭವಾಗುತ್ತದೆ. ಸೂರ್ಯೋದಯಕ್ಕಿಂತ ಮುನ್ನವೇ ಮುಕ್ತಾಯವಾಗುವ ಮಾಸವಿದು. ದೇವತೆಗಳಿಗೆ ದಕ್ಷಿಣಾಯಣವು ರಾತ್ರಿಯ ಕಾಲ, ಉತ್ತರಾಯಣವು ಹಗಲಿನ ಕಾಲ, ಆದರೆ ಈ ಧನುರ್ಮಾಸವು ರಾತ್ರಿ ಮತ್ತು ಹಗಲು ಎರಡೂ ಸೇರಿದ ಸಮಯವೆಂದೂ, ಬ್ರಾಹ್ಮೀ ಮುಹೂರ್ತದಲ್ಲಿ ಎದ್ದು ಸ್ನಾನ ಮಾಡಿ ಯಾರು ಭಗವಂತನನ್ನು ಪೂಜಿಸಿ, ನೈವೇದ್ಯವನ್ನು ಅರ್ಪಿಸುತ್ತಾರೋ ಅವರ ಸಕಲ ಇಷ್ಟಾರ್ಥಗಳು ನೆರವೇರುತ್ತದೆ.
ಈ ಕಾರಣದಿಂದ ದೇವರಿಗೆ ವಿಶೇಷ ಅಲಂಕಾರ ಸೇವೆ, ವಿಶೇಷ ನೈವೇದ್ಯ ಸೇವೆ , ದೀಪದಾನ ಸೇವೆ , ದೇವರಿಗೆ ಅಭಿಷೇಕ ಪೂಜೆ ಅಲಂಕಾರ ಹೋಮ, ಎಲ್ಲರ ಸೇವೆಗಳನ್ನು ಮಾಡಲಾಗುತ್ತದೆ. ಧನುರ್ಮಾಸದ ವೇಳೆ ಹುಗ್ಗಿ ಸೇವೆ, ಪೊಂಗಲ್ ಸೇವೆ ಹಾಗೂ ದವಸಧಾನ್ಯ ದಾನಗಳ ಸೇವೆ ಮಾಡಿದರೆ, ಧನಸಂಪತ್ತು ವೃದ್ಧಿಯಾಗುತ್ತದೆ. ಸಾಲದ ಸಮಸ್ಯೆ ನಿವಾರಣೆ ನಿವಾರಣೆಯಾಗುತ್ತದೆ
ಧನುರ್ಮಾಸದಲ್ಲಿ ವಿಶೇಷವಾಗಿ ಮುಂಜಾನೆ ವಿಷ್ಣು ಸಹಸ್ರನಾಮ ಪಾರಾಯಣ, ಪುರುಷ ಸೂಕ್ತಂ, ಶ್ರೀ ವಿಷ್ಣು ಸೂಕ್ತಂ ಅಥವಾ ನಾರಾಯಣ ಉಪನಿಷತ್ತನ್ನು ಪಠಣ ಮಾಡಲಾಗುತ್ತದೆ. ಕೆಲವರು ಮಹಾವಿಷ್ಣುವಿನೊಂದಿಗೆ ಮಹಾಲಕ್ಷ್ಮೀಯನ್ನು ಪೂಜಿಸುತ್ತಾರೆ, ಹಿಂದೆ ದೇವ ರಾಜನಾದ ಇಂದ್ರನು ರಾಜ್ಯವನ್ನು ಕಳೆದುಕೊಂಡಾಗ ಶಚೀದೇವಿಯು ಹುಗ್ಗಿಯ ನೈವೇದ್ಯ ಮಾಡಿ ವಿಷ್ಣುವಿಗೆ ಸಮರ್ಪಿಸಿ, ಶ್ರೀಹರಿಯೊಂದಿಗೆ ಮಹಾಲಕ್ಷ್ಮಿಯನ್ನೂ ದ್ವಾದಶನಾಮಗಳಿಂದ ಸ್ತುತಿಸಿದಳಂತೆ, ಇದರ ಫಲವಾಗಿ ಇಂದ್ರನು ರಾಜ್ಯವನ್ನು ಮರಳಿ ಪಡೆದನು ಎನ್ನುವ ಪುರಾಣ ಕಥೆಯಿದೆ.
ಹುಗ್ಗಿ ಸೇವೆಯ ಮಹತ್ವ
ಹುಗ್ಗಿ ಸೇವೆ ಎಂದರೆ ಅಕ್ಕಿ, ಬೆಲ್ಲ, ತುಪ್ಪದಿಂದ ಮಾಡಿದ ಅನ್ನವನ್ನು ದೇವರಿಗೆ ಸಮರ್ಪಿಸಿ ಭಕ್ತರಿಗೆ ಅಥವಾ ಬಡವರಿಗೆ ದಾನ ಮಾಡುವುದು. ಧನುರ್ಮಾಸದಲ್ಲಿ ಮಾಡಿದ ಅನ್ನದಾನ ಅಕ್ಷಯ ಅನ್ನದ ಫಲ ನೀಡುತ್ತದೆ, ದಾರಿದ್ರ್ಯ ನಿವಾರಣೆ ಮಾಡುತ್ತದೆ ಕುಟುಂಬದ ಕಲಹಗಳನ್ನು ಶಮನಗೊಳಿಸುತ್ತದೆ ಎಂಬ ನಂಬಿಕೆಯಿದೆ. “ಅನ್ನಂ ಬ್ರಹ್ಮ” ಎಂಬ ತತ್ವವನ್ನು ಈ ಸೇವೆ ನೆನಪಿಸುತ್ತದೆ.
ಪೊಂಗಲ್ ಸೇವೆಯ ಮಹತ್ವ
ಪೊಂಗಲ್ ಸೇವೆ ವಿಶೇಷವಾಗಿ ಸೂರ್ಯ ದೇವರಿಗೆ ಕೃತಜ್ಞತೆ ಸಲ್ಲಿಸುವ ಸೇವೆಯಾಗಿದೆ. ಒಂದು ದೀಪ ಹಚ್ಚಿದರೂ ಸಹ ಸಹಸ್ರ ದೀಪದ ಫಲ ಸಿಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ.
ಧನುರ್ಮಾಸ ಪವಿತ್ರವಾದ ಮಾಸವಾದರೂ ಇದರಲ್ಲಿ ಶುಭ ಕಾರ್ಯಗಳನ್ನು ಮಾಡುವಂತಿಲ್ಲ. ಆದರೆ, ಆಧ್ಯಾತ್ಮಿಕ ಕೆಲಸಗಳನ್ನು ಮಾಡಬಹುದಾಗಿದೆ. ಧನುರ್ಮಾಸದಲ್ಲಿ ನಾವು ಈ ಕೆಲಸಗಳನ್ನು ಮಾಡುವುದರಿಂದ ಸಂತೋಷ, ಸಮೃದ್ಧಿ ಹಾಗೂ ಶಾಂತಿ ದೊರೆಯುವುದು
Advertisement