'ತಿಥಿ' ಪದ ಎಂತಹ ಸಂಭ್ರಮ ಸೃಷ್ಟಿಸಿದೆ ಎಂಬುದನ್ನು ತಿಳಿಯಲು ನೀವು ಬೆಂಗಳೂರು ಅಂತರಾಷ್ಟ್ರೀಯ ಚಿತ್ರೋತ್ಸವಕ್ಕೆ ಬರಬೇಕು. ಸಿನೆಮಾ ನೋಡಲು ಅವಕಾಶ ಸಿಕ್ಕವರು 'ತಿಥಿ'ಯ ಬಗ್ಗೆ ಹೆಮ್ಮೆಯಿಂದ ಮಾತನಾಡುತ್ತಲೋ, ಅದರ ನಿರ್ದೇಶಕ ರಾಮರೆಡ್ಡಿ ಮತ್ತು ಸಿನೆಮಾಗೆ ಕಥೆ ಬರೆದ ಈರೆಗೌಡ ಅವರಿಗೆ ಅಭಿನಂದಿಸುತ್ತಲೇ, ಅವರ ಜೊತೆಗೆ ಫೋಟೋ ತೆಗೆಸಿಕೊಳ್ಳುತ್ತಲೋ ಸಂತಸದಲ್ಲಿದ್ದರೆ, ಪ್ರದರ್ಶನದಿಂದ ವಂಚಿತರಾದವರು ಆಯೋಜಕರನ್ನು ದೂಷಿಸುತ್ತಲೂ ಮತ್ತೆ ಕೆಲವೊಮ್ಮ 'ತಿಥಿ'ಯ ಹೆಚ್ಚು ಪ್ರದರ್ಶನಗಳನ್ನು ಏರ್ಪಡಿಸಲು ದುಂಬಾಲು ಬೀಳುತ್ತಿದ್ದುದು ಸಿನೆಮೋತ್ಸವದಲ್ಲಿ ಸಾಮಾನ್ಯ ದೃಶ್ಯವಾಗಿತ್ತು. ಹೌದು 'ತಿಥಿ' ಸಿನೆಮಾ ೮ನೇ ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದಲ್ಲಿ ಅತಿ ಹೆಚ್ಚು ಬೇಡಿಕೆಯಿದ್ದ, ಅತಿ ಹೆಚ್ಚು ಚರ್ಚಿತವಾದ ಸಿನೆಮಾ ಎಂದರೆ ಉತ್ಪ್ರೇಕ್ಷೆಯಲ್ಲ. ಇದರ ನಿರ್ದೇಶಕ ೨೫ ವರ್ಷದ ರಾಮ್ ರೆಡ್ಡಿ ಮತ್ತು ಕಥೆಗಾರ ಈರೆಗೌಡ ಸಿನೆಮೋತ್ಸವದಲ್ಲಿ ಅತ್ತಿತ್ತ ಚುರುಕಾಗಿ ಓಡಾಡಿಕೊಂಡು, ವಿಶ್ವ ಸಿನೆಮಾಗಳನ್ನು ಆಸಕ್ತಿಯಿಂದ ನೋಡಿಕೊಂಡು, ಪ್ರೇಕ್ಷಕರ-ಸಹ ನಿರ್ದೇಶಕರ ಜತೆ ಚರ್ಚಿಸುತ್ತಾ ಲವಲವಿಕೆಯಿಂದ ಓಡಾಡುತ್ತಿದ್ದಾಗ ಮಾತಿಗೆ ಕರೆದಾಗ ತಟ್ಟನೆ ಒಪ್ಪಿಕೊಂಡರು. ಈ ಮಾತುಕತೆಯ ಮೊದಲ ಭಾಗ ಇಲ್ಲಿದೆ.