ಇದು ಹೇಗೆಂದರೆ ನಾನು ಹೆಚ್ಚೆಚ್ಚು ಕಥೆಗಳನ್ನು ಕೇಳುತ್ತಾ, ಓದುತ್ತಾ ಬೆಳೆದವನು. ಇಂತಹ ಸಮಯದಲ್ಲಿ ನಮ್ಮದೇ ಆದ ಕೃಷ್ಣನನ್ನೋ, ನಮ್ಮದೇ ಆದ ರಾಮನನ್ನೋ ಇನ್ನಿತರ ಪಾತ್ರಗಳನ್ನೂ ಕಲ್ಪನೆ ಮಾಡಿಕೊಂಡಿರುತ್ತೇವೆ. ಅವುಗಳನ್ನು ಹೆಚ್ಚೆಚ್ಚು ದೃಶ್ಯ ರೂಪದಲ್ಲಿಯೇ ಕಲ್ಪನೆ ಮಾಡಿಕೊಂಡಿರುತ್ತೇವೆ. ನಾನು ಬಹುಷಃ ಒಳ್ಳೆಯ ಬರಹಗಾರನಾಗಿದ್ದರೆ ಕಾದಂಬರಿಯನ್ನೋ, ಕಥೆಯನ್ನೋ ಬರೆದಿರುತ್ತಿದ್ದೆ. ಅಥವಾ ಒಳ್ಳೆಯ ಕಲಾವಿದನಾಗಿದ್ದರೆ ಅತ್ಯುತ್ತಮವಾದ ಚಿತ್ರ ಬಿಡಿಸಿರುತ್ತಿದೆ. ನನ್ನ ಕಲ್ಪನೆಗೆ ಮೂರ್ತರೂಪ ನೀಡಲು ದೃಶ್ಯಮಾಧ್ಯಮ ನನಗೆ ಸಹಕರಿಸಿ ನಾನು ನಿರ್ದೇಶಕನಾಗಿದ್ದೇನೆ.