ಸಿನಿಮೋತ್ಸಕ್ಕೆ ಚಾಲನೆ; ಕನ್ನಡ ಕಲಾತ್ಮಕ ಚಿತ್ರಗಳಲ್ಲಿ ನಟಿಸುವಾಸೆ: ಸುಹಾಸಿನಿ

ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ..
ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ
ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವ

ಚಿತ್ರೋದ್ಯಮದ ಅಭಿವೃದ್ಧಿಗೆ ಸಿನಿಮಾ ನೀತಿ: ಸಿಎಂ

ಬೆಂಗಳೂರು
: ಬೆಂಗಳೂರು ಅಂತರಾಷ್ಟ್ರೀಯ ಸಿನಿಮೋತ್ಸವದ ೭ ನೆ ಆವೃತ್ತಿಗೆ ಗುರುವಾರ  ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ಚಾಲನೆ ದೊರಕಿತು.

ಬೆಂಗಳೂರು ಐ ಟಿ, ಬಿ ಟಿ ಗೆ ಅಷ್ಟೇ ಅಲ್ಲದೆ ಚಲನಚಿತ್ರ ಸಂಸ್ಕೃತಿಗೂ ವಿಶ್ವದಾದ್ಯಂತ ಖ್ಯಾತಿ ಗಳಿಸಬೇಕು. ಈ ನಿಟ್ಟಿನಲ್ಲಿ ಸದಭಿರುಚಿಯ ಸಿನೆಮಾಗಳಿಗೆ ಪ್ರೋತ್ಸಾಹ ನೀಡುವ ಸರ್ಕಾರದ ನಿಲುವಿಗೆ ಈ ಚಲನಚಿತ್ರೋತ್ಸವ ಪೂರಕವಾಗಿದೆ. ಚಲನಚಿತ್ರೋದ್ಯಮದ ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು, ನಟರು ಮತ್ತು ಇತರ ವಿಭಾಗದ ಎಲ್ಲರನ್ನೂ ಸಂಪರ್ಕಿಸಿ ಹೊಸ ಸಿನೆಮಾ ನೀತಿಯನ್ನು ಜಾರಿಗೆ ತರಲು ಸರ್ಕಾರ ಬದ್ಧವಿದೆ ಹಾಗೆಯೇ ಸಿನಿಮೋತ್ಸವಕ್ಕೆ ಒಂದು ಶಾಶ್ವತ ಜಾಗವನ್ನು ನೀಡಲು ಕೂಡ ಸರ್ಕಾರದ ಯೋಜನೆ ಜಾರಿಯಲ್ಲಿದೆ ಎಂದರು ಮುಖ್ಯಮಂತ್ರಿ ಸಿದ್ದರಾಮಯ್ಯ.

ಗೌರವ ಅತಿಥಿಯಾಗಿ ಆಗಮಿಸಿದ್ದ ಖ್ಯಾತ ನಟಿ ಸುಹಾಸಿನಿ ಅವರು ಕನ್ನಡದದಲ್ಲೆ ಮಾತು ಆರಂಭಿಸಿ ನನಗೆ ಬೆಂಗಳೂರು ಮತ್ತು ಕರ್ನಾಟಕ ತವರಿದ್ದಂತೆ. ಚೆನ್ನೈ ನಲ್ಲಿ ನನಗೆ ಮನೆ ಇಲ್ಲ. ಆದರೆ ಬೆಂಗಳೂರಿನಲ್ಲಿದೆ. ನಾನು ತಮಿಳು ಚಲನಚಿತ್ರಗಳಿಗಿಂತ ಹೆಚ್ಚು ಕನ್ನಡ ಚಿತ್ರಗಳಲ್ಲಿ ನಟಿಸಿದ್ದೇನೆ, ಹಾಗಾಗಿ ನಾನು ಕನ್ನಡದವಳೇ ಎಂದ ಸುಹಾಸಿನಿ, ನಾನು ೨೮೫ ಸಿನೆಮಾಗಳಲ್ಲಿ ನಟಿಸಿರುವ ಖ್ಯಾತ ನಟಿಯಾಗಿ ಇಲ್ಲಿಗೆ ಬಂದಿಲ್ಲ, ಬದಲಾಗಿ ಸಿನೆಮಾಗಳ ಬಗ್ಗೆ ತೀವ್ರ ಆಸಕ್ತಿ ಹೊಂದಿರುವವಳಾಗಿ, ಸಿನೆಮಾದ ವಿದ್ಯಾರ್ಥಿಯಾಗಿ ಇಲ್ಲಿಗೆ ಬಂದಿದ್ದೇನೆ ಎಂದರು.

ಯಾವುದೇ ಸಿನಿಮೋತ್ಸವದ ಗೆಲುವು ಇರುವುದು ಸಿನೆಮಾಗಳ ಆಯ್ಕೆಯಲ್ಲಿ. ಈ ಸಿನೆಮೋತ್ಸವದ ಆಯ್ಕೆ ಅದ್ಭುತವಾಗಿ. ಇದಕ್ಕಾಗಿ ಸಿನೆಮೋತ್ಸವದ ಸೃಜನಾತ್ಮಕ ನಿರ್ದೇಶಕರನ್ನು ಅಭಿನಂದಿಸಿದ ನಟಿ ಸುಹಾಸಿನಿ, ನಾವು ತಮಿಳಿನಲ್ಲಿ ಮಸಾಲೆ ಮತ್ತು ಜನಪ್ರಿಯ ಸಿನೆಮಾಗಳನ್ನು ಮಾಡುತ್ತಿದ್ದಾಗ, ಅಂತಹ ಸಂಪ್ರದಾಯ ಮುರಿದ ಖ್ಯಾತಿ ಕನ್ನಡ ಚಿತ್ರರಂಗದ್ದು. ಜಿ ವಿ ಅಯ್ಯರ್, ಪುಟ್ಟಣ್ಣ ಕಣಾಗಲ್, ಗಿರೀಶ್ ಕಾಸರವಳ್ಳಿ, ಗಿರೀಶ್ ಕಾರ್ನಾಡ ಇಂತಹವರು ಮಾಡಿದ ಪ್ಯಾರಲಲ್ ಸಿನೆಮಾಗಳಿಂದ ನಾವು ಬಹಳಷ್ಟು ಕಲಿತಿದ್ದೇವೆ. ಕಾಡು, ಚೋಮನ ದುಡಿ ಇಂತಹ ಸಿನೆಮಾಗಳಿಂದ ಬಹಳ ಪ್ರಭಾವಿತಳಾಗಿದ್ದೇನೆ ಎಂದರು.

ನಾನು ಇಷ್ಟು ಕನ್ನಡ ಸಿನೆಮಾಗಳಲ್ಲಿ ನಟಿಸಿದ್ದರೂ ಇಲ್ಲಿಯವರೆಗೂ ಯಾವುದೇ ಕನ್ನಡ ನಿರ್ದೇಶಕ ನನಗೆ ಕಲಾತ್ಮಕ ಚಿತ್ರದಲ್ಲಿ ನಟಿಸಲು ಅವಕಾಶ ನೀಡಿಲ್ಲ. ಅಂತಹ ಅವಕಾಶ ಬಂದರೆ ನಟಿಸಲು ಉತ್ಸುಕಳಾಗಿದ್ದೇನೆ ಎಂದ ನಟಿ ಸಮಾಜದ ಈವಿಲ್ ನಿವಾರಿಸುವ ಒಂದೇ ಉಪಾಯ ಕಲೆ. ಸಿನೆಮಾ ಅಂತಹದರಲ್ಲೊಂದು. ನನಗೆ ಸಿನೆಮಾನೆ ದೇವಾಲಯ. ನಾನು ಅಲ್ಲೇ ಪ್ರಾರ್ಥನೆ ಮಾಡುವುದು ಮತ್ತು ಧ್ಯಾನ ಮಾಡುವುದು ಎಂದರು.

ಇದಕ್ಕೂ ಮೊದಲು ಪ್ರಾಸ್ತಾವಿಕ ಭಾಷಣ ಮಾಡಿದ ಕರ್ನಾಟಕ ಚಲನಚಿತ್ರ ಅಕಾಡೆಮಿಯ ನೂತನ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ಅವರು ೧೮೯೬ ರಲ್ಲಿ "ಅರೈವಲ್ ಆಫ್ ಟ್ರೈನ್" ಎಂಬ ಮೊದಲ ಸಿನೆಮಾವನ್ನು ಜನ ನೋಡಿದಾಗ ಆತಂಕದಿಂದ ಪ್ರತಿಕ್ರಿಯಿಸಿದ್ದರು. ಆದರೆ ಇಂದು ಸಿನೆಮಾ ಎಲ್ಲರ ಪ್ರೀತಿ ಪಾತ್ರವಾಗಿದೆ. ಇನ್ನುಳಿದ ಎಲ್ಲ ಮಾಧ್ಯಮಗಳನ್ನು ಮೀರಿ ಮುಂದೆ ಬಂದಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮೂಲ ಸೌಕರ್ಯ ಅಭಿವೃದ್ಧಿ ಮತ್ತು ವಾರ್ತಾ ಸಂಪರ್ಕ ಸಚಿವ ರೋಷನ್ ಬೇಗ್ ಮಾತನಾಡಿ, ಕನ್ನಡದಲ್ಲಿ ಕಲಾತ್ಮಕ ಚಿತ್ರಗಳು ಬರುತ್ತಿರುವುದೇ ಕಡಿಮೆ. ಡಬಲ್ ಮೀನಿಂಗ್ ಇರುವ ಸಿನೆಮಾಗಳು ೧೦೦ ದಿನ ಓಡುತ್ತವೆ. ವಿಶ್ವ ಬೆರಗಾಗುವಂತ ಪ್ಯಾರಲಲ್ ಸಿನೆಮಾಗಳು ಕನ್ನಡದಲ್ಲಿ ಹೆಚ್ಚೆಚ್ಚು ಬರಬೇಕೆಂದರು.

ಮತ್ತೊಬ್ಬ ಗೌರವ ಅತಿಥಿ ಖ್ಯಾತ ಸಿನೆಮಾಟೋಗ್ರಾಫರ್ ಮತ್ತು ನಿರ್ದೇಶಕ ಗೋವಿಂದ  ನಿಲಾಹನಿ ಮಾತನಾಡಿ ತಾವು ಬೆಂಗಳುರಿನ ಎಸ್ ಜೆ ಪಾಲಿಟೆಕ್ನಿಕ್ ನಲ್ಲಿ ಸಿನೆಮಾಟೊಗ್ರಾಫಿ ಕಲಿತಿದ್ದನ್ನು ನೆನಪಿಸಿಕೊಂಡು, ತಮ್ಮ ಗುರುಗಳಾದ ಖ್ಯಾತ ಸಿನೆಮಾಟೊಗ್ರಾಫರ್ ವಿ ಕೆ ಮೂರ್ತಿ ಅವರ ಸ್ಥಳ ಬೆಂಗಳೂರು. ಹೀಗಾಗಿ ಈ ನಗರಕ್ಕೂ ನನಗೂ ನಿಕಟ ಸಂಬಂಧವಿದೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಟ ಯಶ್ ಮಾತನಾಡಿ, ಸಿನೆಮಾ ಬದುಕಿಗೆ ಸ್ಪೂರ್ಥಿ ಕೊಡುತ್ತದೆ. ಎರಡು ವರೆ ಘಂಟೆ ಸಿನೆಮಾ ತಿಂಗಳುಗಟ್ಟಲೆ ಕನಸು ಕಾಣುವ ಶಕ್ತಿ ಕೊಡುತ್ತದೆ. ಧನಾತ್ಮಕ ಶಕ್ತಿ ತುಂಬುತ್ತದೆ ಎಂದರು.

ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ, ಕನ್ನಡ ಸಂಸ್ಕೃತಿ ಸಚಿವೆ ಉಮಾಶ್ರೀ, ಸಿನೆಮೋತ್ಸವದ ಸೃಜನಾತ್ಮಕ ನಿರ್ದೇಶಕ ವಿದ್ಯಾಶಂಕರ್ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com