ನವದೆಹಲಿ: 2016 -17ನೇ ಸಾಲಿನ ಬಜೆಟ್ ಮಂಡಸಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಭಾಷಣದ ಯಾವುದೇ ಭಾಗದಲ್ಲಿಯೂ ರಕ್ಷಣಾ ಇಲಾಖೆಯ ಪ್ರಸ್ತಾಪವನ್ನೇ ಮಾಡದಿರುವುದು ಅಚ್ಚರಿಗೆ ಕಾರಣವಾಗಿದೆ.
ಸತತ 1 ಗಂಟೆ 45 ನಿಮಿಷ ಗಳ ಮುಂಗಡಪತ್ರದ ಭಾಷಣ ಮಾಡಿದ ಅರುಣ್ ಜೇಟ್ಲಿ ಅವರು, ದೇಶದ ರಕ್ಷಣಾ ಕ್ಷೇತ್ರಕ್ಕೆ ಮೀಸಲಿರಿಸಿದ ಹಣದ ಬಗ್ಗೆ ಮಾಹಿತಿಯನ್ನೇ ನೀಡಿಲ್ಲ. ಸಾಮಾನ್ಯವಾಗಿ ಈ ಹಿಂದಿನ ಬಜೆಟ್ ಗಳಲ್ಲಿ ರಕ್ಷಣಾ ಇಲಾಖೆಗೆ ಸಾಂಪ್ರದಾಯಿಕವಾಗಿ ದೇಶದ ರಕ್ಷಣಾ ಕ್ಷೇತ್ರಕ್ಕೆ ಎಷ್ಟು ಲಕ್ಷ ಕೋಟಿ ಹಣ ಮೀಸರಿಸಲಾಗಿದೆ, ಎಷ್ಟು ಹಣ ವ್ಯಯಿಸಲಾಗಿದೆ ಎಂಬುದನ್ನು ವಿವರಿಸುತ್ತಾರೆ . ಕಳೆದ ಸಾಲಿನಲ್ಲೂ ಕೂಡ ರಕ್ಷಣಾ ಇಲಾಖೆ ಸಾಕಷ್ಟು ಹಣವನ್ನು ಮೀಸಲಿರಿಸಲಾಗಿತ್ತು.
2015-16ನೇ ಸಾಲಿನ ಬಜೆಟ್ ನಲ್ಲಿ ಜೇಟ್ಲಿ ರಕ್ಷಣಾ ಕ್ಷೇತ್ರಕ್ಕೆ 2,46,727 ಲಕ್ಷ ಕೋಟಿ ರೂಪಾಯಿ ಮೀಸಲಿಟ್ಟಿದ್ದರು. 2014-15ನೇ ಸಾಲಿಗಿಂತ ಶೇ.7.7ರಷ್ಟು ಹೆಚ್ಚಳ ಹಣವನ್ನು ಮೀಸಲಿಟ್ಟಿತ್ತು. ಆದರೆ ಇದೇ ಮೊದಲ ಬಾರಿಗೆ ಬಜೆಟ್ ಮಂಡಣೆ ವೇಳೆ ರಕ್ಷಣಾ ಇಲಾಖೆಯ ಪ್ರಸ್ತಾಪವನ್ನೇ ಮಾಡದಿರುವುದು ತಜ್ಞರ ಅಚ್ಚರಿಗೆ ಕಾರಣವಾಗಿದೆ.
ಈ ಬಗ್ಗೆ ಮಾತನಾಡಿರುವ ಹಿರಿಯ ತಜ್ಞರೊಬ್ಬರು ನಾನು ಕಳೆದ 17 ವರ್ಷಗಳಿಂದ ಬಜೆಟ್ ಭಾಷಣವನ್ನು ಗಮನಿಸುತ್ತಿದ್ದೇನೆ. ಆದರೆ ಇದೇ ಮೊದಲ ಬಾರಿಗೆ ಬಜೆಟ್ ಭಾಷಣದಲ್ಲಿ ರಕ್ಷಣಾ ಕ್ಷೇತ್ರಕ್ಕೆ ಮೀಸಲಿಟ್ಟ ಹಣದ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ. ಹಿಂದೆಲ್ಲಾ ಸಾಂಪ್ರದಾಯಿಕವಾಗಿ ರಕ್ಷಣಾ ಇಲಾಖೆಗೆ ಮೀಸಲಿಟ್ಟ ಹಣದ ಕುರಿತು ಸಭೆ ಮಾಹಿತಿ ನೀಡುತ್ತಿದ್ದು. ಆದರೆ ಈ ಬಾರಿ ದೇಶದ ಮಿಲಿಟರಿಗಾಗಿ ಎಷ್ಟು ಹಣ ವ್ಯಯಿಸಲಾಗಿದೆ ಎಂಬ ವಿವರವನ್ನು ನೀಡಿಲ್ಲ ಎಂದು ಹೇಳಿದ್ದಾರೆ.
Advertisement